ಅಮಿತ್ ಶಾ ರಾಜ್ಯ ಭೇಟಿ: ಮೂರು ದಿನ, 45 ಗಂಟೆ, 25 ಕಾರ್ಯಕ್ರಮ
Team Udayavani, Aug 8, 2017, 9:50 AM IST
ಬೆಂಗಳೂರು: ಮೂರು ದಿನ, ಸುಮಾರು 45 ಗಂಟೆ, 25 ಕಾರ್ಯಕ್ರಮಗಳ ಮೂಲಕ ಜಿಲ್ಲಾ ಮತ್ತು ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಎಲ್ಲ ವಿಭಾಗಗಳ ಮುಖಂಡರನ್ನು ತಲುಪುವ ಪ್ರಯತ್ನ.
ಇದು ದೇಶಾದ್ಯಂತ ಎಲ್ಲ ರಾಜ್ಯಗಳಿಗೆ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಆಗಸ್ಟ್ 12ರಿಂದ 14ರವರೆಗೆ ಮೂರು ದಿನಗಳ ರಾಜ್ಯ ಭೇಟಿ ಸಂದರ್ಭದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಪಟ್ಟಿ. ಆ. 12ರಂದು ಬೆಳಗ್ಗೆ 10.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ಅಮಿತ್ ಶಾ ಅವರು ಆ. 14ರಂದು ಸಂಜೆ ಹಿಂತಿರುಗುವವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಮಿತ್ ಶಾ ಅವರ ಕಾರ್ಯ ಕ್ರಮಗಳ ಪಟ್ಟಿ ನೀಡಿದ ರಾ ಬಿಜೆಪಿ ವಕ್ತಾರರೂ ಆಗಿರುವ ಶಾಸಕ ಎಸ್. ಸುರೇಶ್ಕುಮಾರ್, ಈ ಪ್ರವಾಸ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ “ಸರ್ವಸ್ಪರ್ಷಿ ಮತ್ತು ಸರ್ವವ್ಯಾಪಿ’ ಕಾರ್ಯಕ್ರಮವಾಗಲಿದೆ ಎಂದು ಹೇಳಿದರು.
ಆ. 12ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅಮಿತ್ ಶಾ ಅವರಿಗೆ ವಿಮಾನ ನಿಲ್ದಾಣ ಸಮೀಪದ ಟೋಲ್ ಬಳಿ ಪಕ್ಷದ ವತಿಯಿಂದ ಅದ್ಧೂರಿ ಸ್ವಾಗತ ಕೋರಿ ನೇರವಾಗಿ ಮಲ್ಲೇಶ್ವರದಲ್ಲಿರುವ ಪಕ್ಷದ ರಾಜ್ಯ ಕಚೇರಿ ಜಗನ್ನಾಥ ಭವನಕ್ಕೆ ಕರೆತರಲಾಗುವುದು. ಶಾ ಅವರು ಮೂರು ದಿನಗಳ ಕಾಲ ಪಕ್ಷದ ಕಾರ್ಯಚಟುವಟಿಕೆಗಳ ಜತೆಗೆ ಪಕ್ಷದ ಹಿತೈಷಿಗಳು, ಮಠಾಧೀಶರು, ವಿವಿಧ ಗಣ್ಯರು, ಉದ್ಯಮಿಗಳು, ವಿಚಾರವಂತರನ್ನು ಕೂಡ ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಿದರು.
ಮೂರು ದಿನಗಳ ಕಾಲ ಅಮಿತ್ ಶಾ ಅವರು ಪಾಲ್ಗೊಳ್ಳಲಿರುವ ಒಟ್ಟು 25 ಕಾರ್ಯ ಕ್ರಮಗಳ ಪೈಕಿ 16 ಕಾರ್ಯ ಕ್ರಮಗಳನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಇದರ ಮಧ್ಯೆ ಉಳಿದ 9 ಕಾರ್ಯಕ್ರಮಗಳನ್ನು ಅಂತಿಮ ಕ್ಷಣದಲ್ಲಿ ತೀರ್ಮಾನಿಸಲಾಗುತ್ತದೆ ಎಂದರು.
ನಿಗದಿಯಾಗಿರುವ ಕಾರ್ಯಕ್ರಮಗಳು
ಆಗಸ್ಟ್ 12: ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗ್ರಂಥಾಲಯ ಮತ್ತು ವಾಚನಾಲಯ ಉದ್ಘಾಟನೆ, ರಾಜ್ಯ ಪದಾಧಿಕಾರಿಗಳು, ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳು, ಎಲ್ಲಾ ಜಿಲ್ಲೆಗಳ ಪ್ರಭಾರಿಗಳು, ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು,
ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರ ಜತೆ ಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು, ಸಂಸದರೊಂದಿಗೆ ಸಮಾಲೋಚನೆ, ವಿಚಾರವಂತರು, ಕೈಗಾರಿಕಾ ಕ್ಷೇತ್ರ, ವಕೀಲರು, ಲೆಕ್ಕ ಪರಿಶೋಧಕರು, ಉದ್ಯಮಿಗಳು ಸೇರಿ ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಂವಾದ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ.
ಆಗಸ್ಟ್ 13: ರಾಜ್ಯ ಬಿಜೆಪಿ ರಾಜಕೀಯ ವ್ಯವಹಾರ ಸಮಿತಿ ಸಭೆ, ಮಂಡ್ಯ ಜಿಲ್ಲೆ ನಾಗಮಂಗಲದ ಆದಿಚುಂಚನಗಿರಿ ಮಠಕ್ಕೆ ಭೇಟಿ, ಬಿಜೆಪಿ 10 ವಿಭಾಗ ಮತ್ತು 19 ಪ್ರಕಲ್ಪಗಳ ಪದಾಧಿಕಾರಿಗಳ ಜತೆ ಸಭೆ, ಕನಕಪುರ ರಸ್ತೆಯ ರವಿಶಂಕರ ಗುರೂಜಿ ಆಶ್ರಮಕ್ಕೆ ಭೇಟಿ. ಈ ಪೈಕಿ ಆದಿಚುಂಚನಗಿರಿ ಮಠ ಮತ್ತು ರವಿಶಂಕರ ಗುರೂಜಿ ಆಶ್ರಮದ ಕಾರ್ಯಕ್ರಮಗಳನ್ನು ಮಠ ಮತ್ತು ಆಶ್ರಮದ ವತಿಯಿಂದಲೇ ಕೈಗೊಳ್ಳಲಾಗಿದೆ.
ಆಗಸ್ಟ್ 14: ಜಿಲ್ಲಾ ಮಟ್ಟದ ವಿಸ್ತಾರಕರೊಂದಿಗೆ ಸಭೆ ಮತ್ತು ಮುಂದಿನ ಹೆಜ್ಜೆ ಬಗ್ಗೆ ಮಾರ್ಗದರ್ಶನ, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 2014ರ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದ 11 ಕ್ಷೇತ್ರಗಳ ಪ್ರಮುಖರ ಜತೆ ಸಭೆ, ಮಾಧ್ಯಮ ಪ್ರಕೋಷ್ಠ ಮತ್ತು ಸಾಮಾಜಿಕ ಜಾಲ ತಾಣ ಮಾಧ್ಯಮ ಪ್ರಕೋಷ್ಠದ ಪ್ರಮುಖರ ಜತೆ ಸಮಾಲೋಚನೆ, ಪತ್ರಿಕಾಗೋಷ್ಠಿ, ಅನ್ಯ ಪಕ್ಷಗಳು ಸೇರಿ ವಿವಿಧ ಕ್ಷೇತ್ರಗಳಿಂದ ಇತ್ತೀಚೆಗೆ ಬಿಜೆಪಿ ಸೇರಿದ ಪ್ರಮುಖರೊಂದಿಗೆ ಸಮಾಲೋಚನೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರೊಂದಿಗೆ ಸಭೆ, ಹಿಂದುಳಿದ ವರ್ಗಗಳ ಪ್ರಮುಖರ ಜತೆ ಮಾತುಕತೆ.
ಎಲ್ಲೆಲ್ಲಿ ಕಾರ್ಯಕ್ರಮಗಳು?
ಸಭೆಗಳು ಒಂದಕ್ಕೊಂದು ಗೊಂದಲವಾಗದಂತೆ ನೋಡಿಕೊಳ್ಳಲು ಪಕ್ಷದ ಪ್ರಮುಖ ಸಭೆಗಳನ್ನು ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಸಲಾಗುತ್ತದೆ. ಹೆಚ್ಚು ಜನ ಮತ್ತು ಗಣ್ಯರು ಸೇರುವ ಸಭೆಗಳನ್ನು ಐಟಿಸಿ ಗಾಡೇìನಿಯಾ ಮತ್ತು ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಆಯೋಜಿಸಲಾಗುತ್ತದೆ. ಆ. 13ರಂದು ಆದಿಚುಂಚನಗಿರಿ ಮಠ ಮತ್ತು ರವಿಶಂಕರ ಗುರೂಜಿ ಆಶ್ರಮಕ್ಕೆ ಭೇಟಿ ನೀಡುತ್ತಿರುವುದರಿಂದ ಸಮಯ ಉಳಿಸುವ ಸಲುವಾಗಿ ಈ ಎರಡು ಕಾರ್ಯಕ್ರಮಗಳ ಮಧ್ಯೆ ಬಿಜೆಪಿ 10 ವಿಭಾಗಗಳು ಮತ್ತು 19 ಪ್ರಕಲ್ಪಗಳ ಪದಾಧಿಕಾರಿಗಳ ಸಭೆಯನ್ನು ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಯಾವ್ಯಾವ ಕಾರ್ಯಕ್ರಮಗಳು ಎಲ್ಲೆಲ್ಲಿ
ನಡೆಯುತ್ತವೆ ಎಂಬುದನ್ನು ಆ. 10ರ ವೇಳೆಗೆ ಅಂತಿಮಗೊಳಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್