ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಕಾರ್ಯವೂ ನಡೆಯಲಿ
Team Udayavani, Feb 19, 2018, 2:55 PM IST
ಚನ್ನಾರಾಯಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಶೃವಣ ಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾದರು.
ಮೈಸೂರಿನಿಂದ ಸೇನಾ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸಿದ ಅವರು ಚಾವುಂಡರಾಯ ಸಭಾಂಗಣದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾದರು.
ಮಹಾಮಸ್ತಕಾಭಿಷೇಕ ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಬೆಟ್ಟಕ್ಕೆ ಹೊಸದಾಗಿ ನಿರ್ಮಿಸಲಾದ 630 ಮೆಟ್ಟಿಲುಗಳನ್ನು ಮತ್ತು ಪ್ರಸಿದ್ಧ ಕಂಪನಿಯಾದ ಐನಾಕ್ಸ್ ಕಂಪನಿ ನಿರ್ಮಿಸಿದ ಬಾಹುಬಲಿ ಆಸ್ಪತ್ರೆಯ ಉದ್ಘಾಟನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೆರವೇರಿಸಿದರು.
ಸಭೆಗೆ ಆಗಮಿಸುತ್ತಿದ್ದಂತೆ ವೇದಿಕೆಯಲ್ಲಿದ್ದ ಎಲ್ಲಾ ಜೈನ ಆಚಾರ್ಯರು ಮತ್ತು ಮಾತೆಯರಿಗೆ ನಮಿಸಿದರು. ಬಳಿಕ ಪ್ರಧಾನಿ ಮೋದಿ ಅವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸನ್ಮಾನಿಸಿದರು. ಸ್ಮರಣಿಕೆಯಾಗಿ ಬೆಳ್ಳಿಯ ಕಳಶವನ್ನು ನೀಡಿ ಆಶೀರ್ವಚಿಸಿದರು.
ನನ್ನ ಸೌಭಾಗ್ಯ
ನೆರೆದಿದ್ದ ಭಕ್ತಗಡಣವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ’12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ’ ಎಂದರು.
‘ನಮ್ಮ ದೇಶದಲ್ಲಿ ಬೇಕಾದಷ್ಟು ಧಾರ್ಮಿಕ ಕಾರ್ಯಗಳು ನಡೆಯುತ್ತವೆ ಇವುಗಳೊಂದಿಗೆ ಸಾಮಾಜಿಕ ಕಾರ್ಯವೂ ನಡೆಯಬೇಕಾಗಿದೆ. ಇಂದು ಜನತೆಗಾಗಿ ಆಸ್ಪತ್ರೆಯನ್ನು ಉದ್ಘಾಟಿಸುವ ಭಾಗ್ಯ ನನ್ನ ಪಾಲಿಗೆ ದೊರಕಿತು. ನಮ್ಮ ಮುನಿಗಳು ಸಾಧು ಸಂತರು ದೇಶದ ಸಾಮಾಜಿಕ ಸ್ವಾಸ್ಥ್ಯಕ್ಕೆ ಶ್ರಮವಹಿಸಿದ್ದಾರೆ’ ಎಂದರು.