ಅ.5ರ ನಂತರ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
Team Udayavani, Oct 4, 2018, 6:10 AM IST
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಅಕ್ಟೋಬರ್ 5ರ ಬಳಿಕ ತೀವ್ರ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ. ಹೀಗಾಗಿ ಸಮುದ್ರಕ್ಕಿಳಿದಿರುವ ಮೀನುಗಾರರು ಅ.5ರೊಳಗೆ ವಾಪಸಾಗಬೇಕು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮದಿಂದ ಸಮುದ್ರದ ಅಲೆಗಳ ಏರಿಳಿತವೂ ಹೆಚ್ಚಾಗಲಿದೆ. ಹೀಗಾಗಿ ಸಮುದ್ರಕ್ಕೆ ಇಳಿದಿರುವ ಮೀನುಗಾರರು ಅ.5ರೊಳಗೆ ಹಿಂತಿರುಗಬೇಕು ಹಾಗೂ ಅ.10ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ಲಕ್ಷದೀಪ ಭಾಗದಲ್ಲಿ ತೀವ್ರ ಪ್ರಮಾಣದ ವಾಯುಭಾರ ಕುಸಿತದಿಂದ ಉಂಟಾಗಳಿರುವ ಚಂಡಮಾರುತದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಅದರಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ತಮಿಳುನಾಡು ಹಾಗೂ ಕೇರಳ ಭಾಗಗಳಲ್ಲಿಯೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತ ಓಮಾನ್ ಕಡೆಗೆ ಚಲಿಸಲಿದರೂ, ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಇದರೊಂದಿಗೆ ಬಂಗಾಳಕೊಲ್ಲಿಯ ಶ್ರೀಲಂಕಾ ಕರಾವಳಿ ಪ್ರದೇಶದಲ್ಲಿಯೂ ಕಡಿಮೆ ತಗ್ಗು ಪ್ರದೇಶ ನಿರ್ಮಾಣವಾಗುತ್ತಿದ್ದು, ಅಲ್ಲಿ ವಾಯುಭಾರ ಕುಸಿತವಾಗು ಸಾಧ್ಯತೆಗಳು ಕಡಿಮೆಯಿವೆ ಎಂದು ಹೇಳಿದರು.
ಉಷ್ಣಾಂಶ ಹೆಚ್ಚಳದಿಂದ ಮಳೆ
ರಾಜ್ಯದಲ್ಲಿ ನೈರುತ್ಯ ಮುಂಗಾರು ತೀವ್ರತೆ ಕಡಿಮೆಯಾದಂತೆ ಉಷ್ಣಾಂಶ ಪ್ರಮಾಣ ಏರಿಕೆಯಾಗಿದ್ದು, ಬೇಸಿಗೆಗೆ ಮೊದಲೇ ಜನರು ಬಿಸಿಲಿನ ಬೇಗೆ ಅನುಭವಿಸುವಂತಾಗಿದೆ. ವಾತಾವರಣದಲ್ಲಿನ ಉಷ್ಣಾಂಶದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ.
ಉಷ್ಣಾಂಶ ಏರಿಕೆಯದಂತೆ ವಾತಾವರಣದಲ್ಲಿ ತೇವಾಂಶ ಹಾಗೂ ಆದ್ರತೆ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದಾಗಿ ಬೆಳಗ್ಗೆ ಉಷ್ಣಾಂಶ ಹೆಚ್ಚಾಗಿದ್ದು, ಸಂಜೆ ವೇಳೆಗೆ ಭಾರಿ ಮಳೆಯಾಗುತ್ತದೆ. ಇಂತಹ ವಾತಾವರಣದಿಂದ ಕಡಿಮೆ ತಗ್ಗು ಪ್ರದೇಶ ಹಾಗೂ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಉಷ್ಣಾಂಶಕ್ಕಿಂತ ನಾಲ್ಕದಿಂದ ಐದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದ ಅನುಭವವಾಗುತ್ತಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.