ವರದಿಯಲ್ಲಿ ಸತ್ಯ ಬಹಿರಂಗ; ಪ್ರಸಾದಕ್ಕೆ ಬೆರೆಸಿದ್ದು ಏನು ಗೊತ್ತಾ?
Team Udayavani, Dec 17, 2018, 12:17 PM IST
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿನ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಪ್ರಸಾದಕ್ಕೆ ಕೀಟನಾಶಕ ಬೆರೆಸಿರುವುದು ಪತ್ತೆಯಾಗಿದೆ ಎಂದು ಮೈಸೂರು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ತಿಳಿಸಿದ್ದಾರೆ.
ಸುಳ್ವಾಡಿ ವಿಷಾಹಾರ ಸೇವನೆ ಪ್ರಕರಣದ ಕುರಿತಂತೆ ಸುದ್ದಿಗಾರರ ಜೊತೆ ಮಾತನಾಡಿದ ಐಜಿಪಿ, ಪ್ರಸಾದಕ್ಕೆ ಮೋನೋ ಕ್ರೋಟೋಪಸ್ ಎಂಬ ಕೀಟನಾಶಕ ಬೆರೆಸಿರುವುದು ಎಫ್ ಎಸ್ ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಈ ವಿಷ ಆರ್ಗೊನೋ ಫಾಸ್ಪರಸ್ ಗ್ರೂಪ್ ಗೆ ಸೇರುತ್ತದೆ ಎಂದು ವಿವರಿಸಿದ್ದಾರೆ.
ಈ ಕ್ರಿಮಿನಾಶಕವನ್ನು ರೋಗಪೀಡಿತ ಗಿಡ ಹಾಗೂ ಬೆಳೆಗಳಿಗೆ ಬಳಸಲಾಗುತ್ತದೆ. ನೀರಿನಲ್ಲಿ ಮಿಶ್ರಣ ಮಾಡಿ ಪ್ರಸಾದಕ್ಕೆ ವಿಷ ಬೆರೆಸಿರುವುದಾಗಿ ಐಜಿಪಿ ಮಾಹಿತಿ ನೀಡಿದ್ದಾರೆ.
ಸುಳಿವು ಸಾಕಷ್ಟು ಸಿಕ್ಕಿವೆ, ಎಲ್ಲಾ ಹೇಳಲು ಆಗಲ್ಲ: ಐಜಿಪಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 11-12 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಎಲ್ಲಾ ರೀತಿಯ ಸುಳಿವು ಸಿಕ್ಕಿದೆ. ಈ ಹಂತದಲ್ಲಿ ಎಲ್ಲಾವನ್ನು ಹೇಳಲು ಆಗಲ್ಲ, ತನಿಖೆಗೆ ತೊಂದರೆಯಾಗುತ್ತದೆ ಎಂದು ಐಜಿಪಿ ಶರತ್ ಚಂದ್ರ ಹೇಳಿದರು.