ಮರೆಯಾದ ದೇವರಿಗೆ ಕಂಬನಿ ಮಿಡಿದ ಜಿಲ್ಲೆ
Team Udayavani, Jan 22, 2019, 7:13 AM IST
ಅನ್ನ, ಅರಿವು, ಅಕ್ಷರ, ಆಸರೆ ನೀಡುವ ಮೂಲಕ 87 ವರ್ಷ ಸಿದ್ಧಗಂಗಾ ಮಠದಲ್ಲಿ ಜ್ಞಾನ ಗಂಗೆ ಹರಿಸಿ, ಸೋಮವಾರ ಶಿವೈಕ್ಯರಾದ ಡಾ.ಶಿವಕುಮಾರ ಸ್ವಾಮೀಜಿಗೆ ಜಿಲ್ಲಾದ್ಯಂತ ವೀರಶೈವ ಲಿಂಗಾಯತ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದರು. ಪ್ರಮುಖ ವೃತ್ತಗಳಲ್ಲಿ ಭಕ್ತರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿ, ಶ್ರೀಗಳ ಅನನ್ಯ ಸೇವೆಯನ್ನು ಕೊಂಡಾಡಿದರು.
ಅಂಗಡಿ ಮುಂಗಟ್ಟು ಮುಚ್ಚಿ ಗೌರವ ಸಲ್ಲಿಸಿ
ಶಿರಾ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ತಾಲೂಕು ವೀರಶೈವ ಸಮಾಜ, ವಿವಿಧ ಸಂಘ ಸಂಸ್ಥೆಗಳು, ಮಂಗಳವಾರ ವ್ಯಾಪಾರ ವಹಿವಾಟು ಬಂದ್ ಮಾಡಿ ಶ್ರೀಗಳಿಗೆ ಗೌರವ ಸಲ್ಲಿಸಲು ನಿರ್ಧರಿಸಿವೆ.
ನಗರದ ವಿದ್ಯಾಗಣಪತಿ ದೇವಾಲಯ ರಸ್ತೆಯಲ್ಲಿನ ವೀರಶೈವ ಲಿಂಗಾಯಿತ ಹಿತರಕ್ಷಣಾ ಸಮಿತಿ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ಸೇರಿದ್ದ ವಿವಿಧ ವರ್ತಕ ಸಂಘದ ಪದಾಧಿಕಾರಿಗಳು, ಸ್ವಾಮೀಜಿ ಅವರ ಗೌರವಾರ್ಥ ಮಂಗಳವಾರ ಸ್ವಯಂಪ್ರೇರಿತ ವಹಿವಾಟು ಬಂದ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ರಾಜಸ್ಥಾನ ಮೂಲದ ವರ್ತಕರೂ ಬೆಂಬಲ ಘೋಷಿಸಿದ್ದಾರೆ.
ನಗರದ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ. ದಿನಸಿ ಅಂಗಡಿ, ಬಟ್ಟೆ ವ್ಯಾಪಾರಿಗಳು, ಬೇಕರಿ ತಿನಿಸು ಮಾರಾಟಗಾರರು, ಬೀದಿಬದಿ ವ್ಯಾಪಾರಿಗಳು, ಚಿಲ್ಲರೆ ಅಂಗಡಿ, ಹೋಟೆಲ್ ಸೇರಿದಂತೆ ಮಂಗಳವಾರದ ಸಂತೆಗೆ ಬರುವ ಅಂಗಡಿಗಳನ್ನೊಳಗೊಂಡು,
ಸಣ್ಣ ಮತ್ತು ದೊಡಮಟ್ಟದ ಎಲ್ಲಾ ಬಗೆಯ ವ್ಯವಹಾರವನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಟರಾಜು, ಮುಖಂಡ ಮಂಜುನಾಥ್, ರವಿಶಂಕರ್, ಹಿರಿಯ ವರ್ತಕ ಎಸ್ಕೆಜಿ ರಾಮಚಂದ್ರ ಗುಪ್ತ, ಲೋಕೇಶ್ವರಯ್ಯ, ಪ್ರಭಾಕರ ಹಾಗೂ ರಾಜಸ್ಥಾನ ಮೂಲದ ವರ್ತಕರು, ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ವಿವಿಧ ವರ್ತಕ ಮುಖಂಡರು ಮನವಿ ಮಾಡಿದ್ದಾರೆ.
ನಗರದಲ್ಲಿ ಟ್ರಾಫಿಕ್ ಜಾಂ: ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅವರು ದೈವಾಧೀನರಾದ ಸುದ್ದಿ ಅಧಿಕೃತವಾಗಿ ಪ್ರಕಟಗೊಳ್ಳುವುದಕ್ಕೂ ಮುನ್ನವೇ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ವಾಹನಗಳು, ಶಿರಾ ಟೌನ್ ಮೂಲಕ ಮಧುಗಿರಿ, ಕೊರಟಗೆರೆ, ಉರ್ಡಿಗೆರೆ ದಾಬಸ್ಪೇಟೆ ಮಾರ್ಗವಾಗಿ ತೆರಳುತ್ತಿದ್ದ ಕಾರಣ ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.
ಪ್ರವಾಸಿ ಮಂದಿರ ವೃತ್ತದಲ್ಲಿ ಮೂರು ದಿಕ್ಕಿನಿಂದ ಬರುತ್ತಿದ್ದ ವಾಹನಗಳನ್ನು ನಿಯಂತ್ರಿಸುವಲ್ಲಿ ಹೈರಾಣಾಗಿದ್ದ ಪೊಲೀಸರ ನೆರವಿಗೆ ಕೆಲ ಸ್ಥಳೀಯ ಯುವಕರು, ಸ್ವಯಂ ಪ್ರೇರಿತವಾಗಿ ಟ್ರಾಫಿಕ್ ನಿಯಂತ್ರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಚಿಕ್ಕನಾಯಕನಹಳ್ಳಿಗೂ ಸಿದ್ಧಗಂಗಾ ಶಿಕ್ಷಣ ಸೇವೆ
ಚಿಕ್ಕನಾಯಕನಹಳ್ಳಿ: ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದದಿಂದಾಗಿ ತಾಲೂಕಿನಲ್ಲಿಯೂ ಸಿದ್ಧಗಂಗಾ ವಿದ್ಯಾಸಂಸ್ಥೆಗಳು ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿವೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುವ ಉದ್ದೇಶದಿಂದ ಪೂಜ್ಯ ಸ್ವಾಮೀಜಿಯವರು 1969ರಲ್ಲಿ ಕಂದಿಕೆರೆಯಲ್ಲಿ ಸಿದ್ಧಗಂಗಾ ಪ್ರೌಢಶಾಲೆ ಪ್ರಾರಂಭಿಸಿದರು. 1981ರಲ್ಲಿ ಕುಪ್ಪುರ ಗ್ರಾಮದಲ್ಲಿ ವಿವೇಕಾನಂದ ಪ್ರೌಢಶಾಲೆ ಪ್ರಾರಂಭಿಸಿ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಹಲವು ಶಿಕ್ಷಕರಿಗೆ ಉದ್ಯೋಗ ಒದಗಿಸಿದ್ದಾರೆ.
ಶಿಕ್ಷಣ ಎಂದರೇ ಶ್ರೀಮಂತರಿಗೆ ಎನ್ನುವ ಕಾಲದಲ್ಲಿ ಕಂದಿಕೆರೆ ಹಾಗೂ ಕುಪ್ಪೂರಿನ ಅಕ್ಕಪಕ್ಕದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಬೇಕು ಎಂದರೆ, ಬೇರೆ ತಾಲೂಕುಗಳಿಗೆ ಅಥವಾ ಪಟ್ಟಣಕ್ಕೆ ಬರಬೇಕಾಗಿತ್ತು. ಇದನ್ನು ಅರಿತ ಸ್ವಾಮೀಜಿಗಳು ಉಭಯ ಗ್ರಾಮಗಳಲ್ಲಿ ಪ್ರೌಢಶಾಲೆ ಪ್ರಾರಂಭಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ಶಾಲೆಯಲ್ಲಿ ಓದಿ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಸೋಮವಾರ ಸಿದ್ಧಗಂಗಾ ಶ್ರೀ ನಿಧನಕ್ಕೆ ಶಾಲೆಯ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಸಂತಾಪ ಸೂಚಿಸುವ ಮೂಲಕ ಸ್ವಾಮೀಜಿ ಅವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್