ಹೊನ್ನಾವರದ ಹೆಮ್ಮೆ ಮಹಾಧರ್ಮಾಧ್ಯಕ್ಷ ಪೀಟರ್
Team Udayavani, Oct 24, 2018, 3:43 PM IST
ಹೊನ್ನಾವರ: ನಗರದ ಅತ್ಯಂತ ಹಿಂದುಳಿದ ಕೆಳಗಿನಪಾಳ್ಯದ ಬಡ ಕುಟುಂಬವೊಂದರಲ್ಲಿ ಜನಿಸಿದ ಪೀಟರ್ ಮಚಾದೊ ಕರ್ನಾಟಕದ ಅಖೀಲ ಕ್ರೈಸ್ತ ಸಮುದಾಯದ ಮಹಾಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವುದು ಹೊನ್ನಾವರ ಸೇರಿದಂತೆ ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ದಿ| ಆವೆಲಿನ್ ಬಾಯಿ ಮತ್ತು ಎಂಟನಿ ಮಚಾದೊ ದಂಪತಿಗೆ 11ಮಕ್ಕಳು. ಕಷ್ಟಪಟ್ಟು ದುಡಿದು ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಿದರು. ಇವರ ಮೂವರು ಹೆಣ್ಣು ಮಕ್ಕಳು ಸೇವಾ ಭಗಿನಿಯರಾಗಿ ಸಮಾಜಕ್ಕೆ ಸಮರ್ಪಿತರಾಗಿದ್ದಾರೆ. ಮಗ ಪೀಟರ್ ಮಚಾದೊ ಹೋಲಿರೋಸರಿ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೇಲೆ ಸಮಾಜ ಸೇವೆಗಾಗಿ ಧರ್ಮಗುರುವಾಗುವ ನಿರ್ಣಯ ಕೈಗೊಂಡು ಬೆಳಗಾವಿಯ ಮೈಕಲ್ ಮೈನರ್ ಸೆಮಿನರಿ ಸೇರಿದರು. ಅಲ್ಲಿ ಶಿಕ್ಷಣ ಮುಗಿಸಿ ಪುಣೆಯಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರ ಓದುತ್ತ ಪುಣೆಯ ವಿವಿಯಿಂದ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ, ರೋಮ್ನಿಂದ ಡಾಕ್ಟರೇಟ್ ಪದವಿ ಪಡೆದರು. 78ರ ಡಿಸೆಂಬರ್ ನಲ್ಲಿ ಧರ್ಮಗುರು ದೀಕ್ಷೆ ಪಡೆದು ಕಾರವಾರ ಕೋಣೆ ಚರ್ಚ್ನಲ್ಲಿ ಸಹಾಯಕ ಗುರುವಾಗಿ ಸೇವೆ ಆರಂಭಿಸಿದರು. ಸಿದ್ದಾಪುರ, ದಾಂಡೇಲಿ, ಶಿರಸಿಗಳಲ್ಲಿ 28 ವರ್ಷ ಸೇವೆ ಸಲ್ಲಿಸಿ 2006ರಲ್ಲಿ ಬೆಳಗಾವಿ ಧರ್ಮಾಧ್ಯಕ್ಷರಾದರು. ಶಿಕ್ಷಣ, ಸಮಾಜಸೇವೆ, ಬಡಬಗ್ಗರಿಗೆ ನೆರವು ಮೊದಲಾದ ವಿಶೇಷ ಗುಣಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ವರ್ಗದ ಪ್ರೀತಿ ಗಳಿಸಿ 12ವರ್ಷ ಸೇವೆ ಸಲ್ಲಿಸಿದರು.
2018 ಮಾ.19ರಂದು ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡು ಮೇ.31ರಂದು ಅಧಿಕಾರ ಸ್ವೀಕರಿಸಿ ಕರ್ನಾಟಕ ಕ್ರೈಸ್ತ ಸಮುದಾಯದ ಮೊದಲ ಮಹಾಧರ್ಮ ಗುರುವಾದರು. ಅಪಾರ ಜನಪ್ರಿಯತೆ ಗಳಿಸಿದ ಪೀಟರ್ ಮಚಾದೊ ಅವರು ಕರ್ನಾಟಕಕ್ಕೆ ದೊಡ್ಡ ಕೊಡುಗೆಯಾಗಿದ್ದಾರೆ. ರಾಜ್ಯದ ಎಲ್ಲ ಕ್ರಿಶ್ಚಿಯನ್ ಧರ್ಮ ಮತ್ತು ಸೇವಾ ಸಂಸ್ಥೆಗಳನ್ನು ಹೆಚ್ಚು ಸಮಾಜಮುಖೀಯನ್ನಾಗಿಸುವ ಗುರಿ ಹೊಂದಿದ್ದಾರೆ. ಜಿಲ್ಲೆಯ ಜನ ಮತ್ತು ಹುಟ್ಟೂರು ಹೊನ್ನಾವರ ಜನ ಮಹಾಧರ್ಮಾಧ್ಯಕ್ಷರಿಗಾಗಿ ಪ್ರಾರ್ಥನಾ ಸಭೆ ನಡೆಸಿ ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾರೆ.
ಕಾರವಾರ ಧರ್ಮಾಧ್ಯಕ್ಷ ಡಾ| ಡೆರಿಕ್ ಫೆರ್ನಾಂಡೀಸ್ ಹೊನ್ನಾವರದವರು. ಈ ತಾಲೂಕಿನಿಂದ 64 ಧರ್ಮಗುರುಗಳು, 40 ಸೇವಾಭಗಿನಿಯರು ಸಮಾಜಕ್ಕೆ ಸಮರ್ಪಿಸಲ್ಪಟ್ಟಿದ್ದಾರೆ. ಮಹಾಧರ್ಮಾಧ್ಯಕ್ಷರು ಹೊನ್ನಾವರದವರೇ ಆಗಿರುವುದರಿಂದ ಜಿಲ್ಲೆಯಲ್ಲಿ ಇನ್ನಷ್ಟು ಕಲ್ಯಾಣ ಕಾರ್ಯಕ್ರಮ ನಿರೀಕ್ಷಿಸಬಹುದು. ಎಲ್ಲ ಧರ್ಮ ಮತ್ತು ಪಂಗಡದವರು ಒಟ್ಟಾಗಿ ಮಹಾಧರ್ಮಾಧ್ಯಕ್ಷರನ್ನು ಅಭಿನಂದಿಸಲಿದ್ದಾರೆ.
ಉಕ ಜಿಲ್ಲೆಗೆ ಕ್ರಿಶ್ಚಿಯನ್ ಸಂಸ್ಥೆಗಳ ಕೊಡುಗೆ
ಕ್ರಿಶ್ಚಿಯನ್ನರ ಸೀರಿಯನ್ ಮಿಷನ್ ಪಂಗಡದವರು 101 ವರ್ಷದ ಹಿಂದೆ ಉತ್ತರ ಕನ್ನಡಕ್ಕೆ ಬಂದರು. ಹೊನ್ನಾವರ ತಾಲೂಕಿನಲ್ಲಿ 50 ಪ್ರಾಥಮಿಕ ಶಾಲೆ, 2 ಪ್ರೌಢಶಾಲೆ ಆರಂಭಿಸಿದರು. ಜಿಲ್ಲೆಯಲ್ಲಿ ಪ್ರಥಮವಾದ ಒಳರೋಗಿಗಳ ಮತ್ತು ಕ್ಷಯರೋಗಿಗಳ ಚಿಕಿತ್ಸೆಗಾಗಿ 50 ಹಾಸಿಗೆಗಳ ಆಸ್ಪತ್ರೆ ತೆರೆದರು. 161 ವರ್ಷದ ಹಿಂದೆ ಜಿಲ್ಲೆಗೆ ಬಂದ ಪ್ರೊಟೆಸ್ಟಂಟ್ ಪಂಗಡದವರು ಸೇಂಟ್ ಥಾಮಸ್ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಕೇರಳದಿಂದ ಎತ್ತಿನಗಾಡಿಯಲ್ಲಿ ಬಂದ ಧರ್ಮಗುರುಗಳು ಹಿಂದುಳಿದ ಪ್ರದೇಶದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೇವೆ ನೀಡಿ ಸಮಾಜವನ್ನು ಮೇಲೆತ್ತುವ ಕೆಲಸ ಮಾಡಿದರು. ರೋಮನ್ ಕ್ಯಾಥೋಲಿಕ್ ಧರ್ಮ ಗುರುಗಳು ಗೋವಾದಿಂದ ಬಂದರು. ಚರ್ಚ್ಗಳಿಗೆ ಸೀಮಿತವಾಗಿದ್ದ ಈ ಪಂಗಡದ ಚಟುವಟಿಕೆಗಳು 40 ವರ್ಷಗಳ ಹಿಂದೆ ಕಾರವಾರ ಧರ್ಮಪ್ರಾಂತ್ಯ ರಚನೆಯಾದ ಮೇಲೆ ಸಂಪೂರ್ಣ ಸಮಾಜಮುಖೀಯಾದವು. ಪ್ರಥಮ ಬಿಷಪ್ ಡಾ| ವಿಲಯಂ ಡಿಮೆಲ್ಲೋ 25 ವರ್ಷಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು ಕಟ್ಟಿದರು. 2 ಐಟಿಐ, 12 ಅನಾಥಾಶ್ರಮ, 5 ಆಸ್ಪತ್ರೆ, 2 ಸಂಚಾರಿ ಚಿಕಿತ್ಸಾಲಯ, 21 ಪಪೂ ಕಾಲೇಜು, 20 ಹೈಸ್ಕೂಲ್, ಪ್ರತಿಭೋದಯ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ ಸಹಿತ ಸುಮಾರು 100 ಸಂಸ್ಥೆಗಳನ್ನು ಕಟ್ಟಿದ್ದು ಇವು ಎಲ್ಲ ಸಮಾಜದ ಜನರಿಗೆ ಸೇವೆ ಸಲ್ಲಿಸುತ್ತಿವೆ. ಈಗ ಧರ್ಮಾಧ್ಯಕ್ಷರಾಗಿರುವ ಡಾ| ಡೆರಿಕ್ ಫರ್ನಾಂಡೀಸ್ ಈ ಎಲ್ಲ ಸಂಸ್ಥೆಗಳನ್ನು ಅಭಿವೃದ್ಧಿ ಪಥದಲ್ಲಿ ನಡೆಸಿದ್ದಾರೆ.
ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ