ಅಭಿವೃದ್ಧಿಯಲ್ಲಿ ಬೇಡ ರಾಜಕಾರಣ
Team Udayavani, Nov 22, 2018, 3:25 PM IST
ಅಂಕೋಲಾ: ರಾಜಕಾರಣ ಚುನಾವಣೆಗೆ ಸೀಮಿತವಾಗಿರಬೇಕು. ಅಭಿವೃದ್ಧಿ ವಿಚಾರ ಬಂದಾಗ ಪಕ್ಷಾತೀತವಾಗಿ ಪ್ರತಿಯೊಬ್ಬ ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಕಂದಾಯ ಮತ್ತು ಕೌಶಾಲಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ಬುಧವಾರ ಎಸ್.ಎಫ್.ಸಿ. ವಿಶೇಷ ಅನುದಾನ ಯೋಜನೆಯಡಿ ಕೈಗೊಂಡ ಪುರಸಭೆ ನೂತನ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ನೋಟು ಮುದ್ರಣ ಮಾಡುವ ಯಂತ್ರ ಇಟ್ಟುಕೊಂಡಿಲ್ಲ. ಕೇಂದ್ರ ಸರಕಾರವಾದರು ಆರ್ಬಿಐನ ಮೇಲೆ ತನ್ನ ಹಿಡಿತ ಸಾಧಿಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ತಮ್ಮ ಸ್ಥಳೀಯ ಸಂಸ್ಥೆಗೆ ಮೂಲ ಸೌಕರ್ಯಕ್ಕಾಗಿ ತೆರಬೇಕಾದ ತೆರಿಗೆಯನ್ನು ಸರಿಯಾಗಿ ಪಾವತಿಸುವ ಮೂಲಕ ರಾಜ್ಯದ ಅಭಿವೃದ್ಧಿಯ ಅನುದಾನಕ್ಕೆ ಕೈ ಜೋಡಿಸುವಂತಾಗಬೇಕು. ಅಂಕೋಲಾದಲ್ಲಿ ನಗರೋತ್ತಾನದ ಮೂರನೇ ಹಂತದ ಕಾಮಗಾರಿಗೆ ಐದು ಕೋಟಿ ಹಣ ಬಿಡುಗಡೆಯಾಗಿದೆ. ಇದರ ಪ್ರಯೋಜನ ಇಲ್ಲಿನ ಜನತೆ ಪಡೆದುಕೊಳ್ಳುವಂತಾಗಲಿ ಎಂದರು.
ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಕೋಲಾ ಪಟ್ಟಣವು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. 14 ವಾರ್ಡ್ಗಳಿದ್ದ ಪಟ್ಟಣ ಪಂಚಾಯತ್, ಈಗ 23 ವಾರ್ಡ್ಗಳಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಕೆಲವು ಗ್ರಾಮೀಣ ಪ್ರದೇಶಗಳು ಇಲ್ಲಿ ಸೇರ್ಪಡೆಯಾಗಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಈ ಕುರಿತು ಉಸ್ತುವಾರಿ ಸಚಿವರು ವಿಶೇಷವಾಗಿ ಚಿಂತಿಸಿ, ಹೆಚ್ಚಿನ ಅನುದಾನ ನೀಡಿ ಅಂಕೋಲಾವನ್ನು ಅಭಿವೃದ್ಧಿ ಪಡಿಸಬೇಕಾದ ಅಗತ್ಯತೆ ಇದೆ ಎಂದರು. ಜಿಲ್ಲಾಧಿಕಾರಿ ಎಸ್.ಎಸ್. ನಕುಲ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಸಹಾಯಕ ಆಯುಕ್ತೆ ಪ್ರೀತಿ ಗೆಲ್ಹೋಟಾ, ಪ್ರಭಾರಿ ತಾಲೂಕು ದಂಡಾಧಿಕಾರಿ ಜಯಲಕ್ಷ್ಮೀ ವೇದಿಕೆಯಲ್ಲಿದ್ದರು. ಎನ್.ಎಂ. ಮೇಸ್ತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಸ್ಕರ ಗೌಡ ನಿರೂಪಿಸಿದರು.
ಕೀಳು ಮಟ್ಟದ ರಾಜಕಾರಣ ಬಿಡಿ
ಕಳೆದ ಒಂದು ತಿಂಗಳ ಹಿಂದೆ ಭಾನುವಾರದ ರಜಾದಿನದಂದು ಇಲ್ಲಿ ಉಪ ನೋಂದಣಾ ಕಚೇರಿ ಉದ್ಘಾಟನೆಗಾಗಿ ನಾನು ಬಂದಾಗ ಕಾಂಗ್ರೆಸ್ ಪಕ್ಷದ ಅನೇಕ ಪ್ರಮುಖರು ರಜಾದಿನದಂದು ಉದ್ಘಾಟನೆಗೊಳಿಸಬಾರದಾಗಿ ಪ್ರತಿಭಟನೆ ನಡೆಸಿದ್ದರು. ಆದರೆ ಇಂದು ಸರಕಾರಿ ರಜಾ ಇದ್ದರೂ ಕಾಂಗ್ರೆಸ್ನ ದೇಶಪಾಂಡೆಯವರೆ 2 ಸರಕಾರಿ ಕಾರ್ಯಕ್ರಮ ನಡೆಸಿದ್ದಾರೆ. ಇಂತಹ ಕೀಳು ಮಟ್ಟದ ರಾಜಕಾರಣದಿಂದ ಕಾಂಗ್ರೆಸ್ ಕಾರ್ಯಕರ್ತರು ದೂರ ಸರಿಯಲಿ ಎಂದು ಶಾಸಕಿ ರೂಪಾಲಿ ನಾಯ್ಕ ಸಭೆಯಲ್ಲಿ ಟಾಂಗ್ ನೀಡಿದರು
ಅಂಕೋಲಾ-ಕಾರವಾರ ಕುಡಿಯುವ ನೀರಿನ ಯೋಜನೆಗಾಗಿ ರಾಜ್ಯ ಸರಕಾರ 158.65 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. ಇದರಿಂದ ಕ್ಷೇತ್ರದ ಜನತೆಯ ಕುಡಿಯುವ ನೀರಿನ ದಾಹ ನೀಗಲಿದೆ.
ಆರ್.ವಿ. ದೇಶಪಾಂಡೆ,
ಸಚಿವ