ಅಂದು ಕಾಂತಾವರದಲ್ಲಿ ರಾತ್ರಿ ಕಾವಲುಗಾರ; ಇಂದು ಇನ್ಫಿ ಟೆಕ್ಕಿ!
Team Udayavani, Aug 31, 2019, 3:27 PM IST
ಕಾರ್ಕಳ: ಛಲವೊಂದಿದ್ದರೆ ಯಾವುದೂ ಸಾಧ್ಯವಿದೆ ಎಂಬುದಕ್ಕೆ ಈತನೇ ಉದಾಹರಣೆ.
ರಾತ್ರಿಯಿಡೀ ವಿದ್ಯಾಸಂಸ್ಥೆಯಲ್ಲಿ ಕಾವಲು ಕೆಲಸ, ಹಗಲು ಎಂಜಿನಿಯರಿಂಗ್ ಓದು. ಹೀಗೆ ಛಲ ಬಿಡದೆ ಓದಿದ ಪರಿಣಾಮ ಆತ ಈಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾನೆ.
ಇಂತಹ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿ, ಕಾಂತಾವರ ಶಾರದಾ ನಗರದ ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದ ದೆಹಲಿಯ ಅಂಕಿತ್. ರಾತ್ರಿ ಕಾವಲುಗಾರನಾಗಿ ಕೆಲಸ ನಿರ್ವಹಿಸಿ, ಹಗಲು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್
ಆ್ಯಂಡ್ ಕಮ್ಯೂನಿಕೇಶನ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ ಅಷ್ಟೇ ಅಲ್ಲದೆ ಇನ್ಫೋಸಿಸ್ಗೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾನೆ.
ಸಮ್ಮಾನ
ಅಂಕಿತ್ ಅವರ ಸಾಧನೆ ಗುರುತಿಸಿ, ಪ್ರಕೃತಿ ವಿದ್ಯಾಸಂಸ್ಥೆಯಲ್ಲಿ ಅವರನ್ನು ಗುರುವಾರ ಸಮ್ಮಾನಿಸಲಾಯಿತು.
ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಪೊ›| ಬಿ. ಪದ್ಮನಾಭ ಗೌಡ, ಆಡಳಿತಾಧಿಕಾರಿ ಅಶೋಕ್ಕುಮಾರ್ ಅಂಕಿತ್ ಅವರನ್ನು ಸಮ್ಮಾನಿಸಿದರು. ಸಿಬಿಎಸ್ಇ ಶಾಲೆಯ ಪ್ರಾಂಶುಪಾಲ ಡಾ| ಆ್ಯಂಟಾನಿ ಮಥಾಯಿ ಉಪಸ್ಥಿತರಿದ್ದರು. ಉಪನ್ಯಾಸಕ ಅರ್ಜುನ್ ಸಾಕ್ರೆ ಕಾರ್ಯಕ್ರಮ ನಿರೂಪಿಸಿದರು.