ಶೇ.86ರಷ್ಟು ಉಜ್ವಲಿಗಳಿಂದ ರೀಫಿಲ್
Team Udayavani, Jul 16, 2019, 5:29 AM IST
ಹೊಸದಿಲ್ಲಿ: ಉಜ್ವಲ ಯೋಜನೆ ಅಡಿ ರಿಯಾಯಿತಿ ದರದಲ್ಲಿ ಬಡವರಿಗೆ ಎಲ್ಪಿಜಿ ಸಂಪರ್ಕವನ್ನು ಒದಗಿಸಲಾಗಿದ್ದು, ಈ ಪೈಕಿ ಶೇ.86ರಷ್ಟು ಫಲಾನುಭವಿಗಳು ಎರಡನೇ ಬಾರಿಗೆ ಸಿಲಿಂಡರ್ ರೀಫಿಲ್ ಮಾಡಿಸಿಕೊಂಡಿದ್ದಾರೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಬಡವರಿಗೆ ರಿಯಾಯಿತಿ ದರದಲ್ಲಿ ಮೊದಲ ಬಾರಿಗೆ ಸಿಲಿಂಡರ್ ಒದಗಿಸಿದರೂ ಎರಡನೇ ಬಾರಿ ಮರುಪೂರಣ ಮಾಡಿಸಿಕೊಳ್ಳಲು ಅವರ ಬಳಿ ಹಣವಿರುವುದಿಲ್ಲ. ಮನೆಯಲ್ಲಿ ಸಿಲಿಂಡರ್ಗಳನ್ನು ಖಾಲಿ ಬಿಟ್ಟಿರುತ್ತಾರೆ.
ಇದರಿಂದ ಯೋಜನೆ ಯಶಸ್ವಿಯಾಗುವುದಿಲ್ಲ ಎಂದು ಟೀಕಿಸಲಾಗಿತ್ತು. ಒಂದು ವರ್ಷದೊಳಗೆ ಶೇ.86ರಷ್ಟು ಫಲಾನುಭವಿಗಳು ಪುನಃ ಬಂದು ಮರುಪೂರಣ ಮಾಡಿಸಿ ಕೊಂಡಿದ್ದಾರೆ. ಇವರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಎಲ್ಲರಿಗೂ ಸುಲಭವಾಗಿ ಎಲ್ಪಿಜಿ ಸಿಲಿಂಡರ್ ಸಿಗಲಿ ಎಂಬ ಕಾರಣಕ್ಕೆ 9 ಸಾವಿರ ಎಲ್ಪಿಜಿ ವಿತರಣೆ ಏಜೆನ್ಸಿಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ ಸಚಿವ ಧರ್ಮೇಂದ್ರ ಪ್ರಧಾನ್.