ಸರ್ಕಾರ ರಚನೆಯಾಗಿ ಮೂರೇ ದಿನದಲ್ಲಿ ನಿತೀಶ್ ಸಂಪುಟದ ಮೊದಲ ವಿಕೆಟ್ ಔಟ್!
Team Udayavani, Nov 19, 2020, 4:58 PM IST
ಪಾಟ್ನಾ: ಸರ್ಕಾರ ರಚನೆಯಾಗಿ ಮೂರೇ ದಿನದಲ್ಲಿ ಬಿಹಾರದ ನಿತೀಶ್ ಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನವಾಗಿದೆ. ಶಿಕ್ಷಣ ಸಚಿವ ಮೇವಾಲಾಲ್ ಚೌಧರಿ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಸಿಎಂ ನಿತೀಶ್ ಕುಮಾರ್ ಗೆ ಆರಂಭದಲ್ಲೇ ಹಿನ್ನಡೆಯಾಗಿದೆ.
ಜೆಡಿಯು ಶಾಸಕ ಮೇವಾಲಾಲ್ ಚೌಧರಿ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿದ ಬಳಿಕ ಪ್ರತಿಪಕ್ಷ ಆರ್ ಜೆಡಿ ಭಾರಿ ವಿರೋಧ ವ್ಯಕ್ತಪಡಿಸಿತ್ತು. 2017ರಲ್ಲಿ ಅವರು ಭಾಗಲ್ಪುರ ವಿವಿಯ ಕುಲಪತಿಗಳಾಗಿದ್ದಾಗ ಸಹಾಯಕ ಪ್ರಾಧ್ಯಾಪಕರ ಮತ್ತು ಕಿರಿಯ ವಿಜ್ಞಾನಿಗಳ ನೇಮಕ, ಕಟ್ಟಡ ನಿರ್ಮಾಣ ಯೋಜನೆಗಳಲ್ಲಿ ಅಕ್ರಮದ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು. ನಾಮಪತ್ರ ಸಲ್ಲಿಸುವ ವೇಳೆ ನೀಡಲಾಗಿದ್ದ ಅಫಿಡವಿಟ್ನಲ್ಲಿ ಆರೋಪದ ಬಗ್ಗೆ ಮೇವಾಲಾಲ್ ಚೌಧರಿ ಉಲ್ಲೇಖೀಸಿದ್ದರು ಎಂದು ಆರ್ಜೆಡಿ ಹೇಳಿಕೊಂಡಿದೆ.
ಸಂಪುಟ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಈ ಸಂಬಂಧ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಆರ್ ಜೆಡಿ ಪ್ರಶ್ನಿಸಿತ್ತು. ಇದೀಗ ಮೇವಾಲಾಲ್ ಚೌಧರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಸೋಮವಾರ ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿ ಏಳನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಬಿಜೆಪಿಯ ತಾರಕಿಶೋರ್ ಮತ್ತು ರೇಣುದೇವಿ ಅವರು ನಿತೀಶ್ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ಅಧಿಕಾರಿ ಸ್ವೀಕರಿಸಿದ್ದಾರೆ.