ಗುಜರಾತ್ ಚುನಾವಣೆ: ಆಪ್, ಬಿಜೆಪಿ ವಾಗ್ವಾದ
Team Udayavani, Sep 18, 2022, 8:30 PM IST
ನವದೆಹಲಿ/ಅಹಮದಾಬಾದ್: ವರ್ಷಾಂತ್ಯಕ್ಕೆ ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಟೀಕಾ ಪ್ರಹಾರಗಳು ಬಿರುಸುಗೊಳ್ಳಲಾರಂಭಿಸಿವೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ “ಭ್ರಷ್ಟಾಚಾರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಪಕ್ಷವನ್ನು ಮಟ್ಟ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ.
ಗುಜರಾತ್ನಲ್ಲಿ ನಡೆಯಲಿರುವ ಚುನಾವಣೆಯ ಸೋಲಿನ ಭೀತಿಯಿಂದ ಅವರು ಇಂಥ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ಟೀಕಿಸಿದ್ದಾರೆ.
ಬಿಜೆಪಿ ತಿರುಗೇಟು:
ದೆಹಲಿ ಸಿಎಂ ಕೇಜ್ರಿವಾಲ್ ಒಬ್ಬ ಅಧಿಕಾರಶಾಹಿ ಎಂದು ಜರೆದಿರುವ ಬಿಜೆಪಿ ವಕ್ತಾರ ಸಂಭಿತ್ ಪಾತ್ರಾ, ಪ್ರತಿ ಚುನಾವಣೆಯ ವೇಳೆ ಕೂಡ ದೆಹಲಿ ಸಿಎಂ ಹಳೆಯ ಮಾದರಿಯ ನಾಟಕವಾಡುತ್ತಿದ್ದಾರೆ. ಅವರೇನಿದ್ದರೂ, ದೊಡ್ಡ ಹೇಳಿಕೆಗಳ ಶೂರ. ದೆಹಲಿ ಮತ್ತು ಪಂಜಾಬ್ನಲ್ಲಿ ಗೆದ್ದ ಬಳಿಕ ಅರವಿಂದ ಕೇಜ್ರಿವಾಲ್ ತಾನೊಬ್ಬ ದೇವರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದರು.
ಈ ನಡುವೆ, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರನ್ನು ಗುಜರಾತ್ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.