ಜಿನ್ನಾ ಮೊದಲ ಪ್ರಧಾನಿಯಾಗಬೇಕಿತ್ತು…ದೇಶ ಇಬ್ಭಾಗವಾಗಲು ಕಾಂಗ್ರೆಸ್ ಕಾರಣ: ಒವೈಸಿ
ಪದವೀದರ ಅಭ್ಯರ್ಥಿಗಳಿಗೆ ಮಾತ್ರ ಮುಸ್ಲಿಮರು ಮತ ಚಲಾಯಿಸುತ್ತಿದ್ದರು.
Team Udayavani, Nov 12, 2021, 11:14 AM IST
ಮೊರಾದಾಬಾದ್: ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಮಂತ್ರಿಯನ್ನಾಗಿ ಮಾಡಿದ್ದರೆ ದೇಶ ಇಬ್ಭಾಗವಾಗುತ್ತಿರಲಿಲ್ಲ ಎಂದು ಸುಹೇಲ್ ದೇವ್ ಭಾರತೀಯ ಸಮಾಜ್ ಪಕ್ಷದ ಮುಖ್ಯಸ್ಥ ಒಪಿ ರಾಜ್ ಭರ್ ಹೇಳಿಕೆ ನೀಡಿದ್ದ ಬೆನ್ನಲ್ಲೇ, ದೇಶ ಇಬ್ಭಾಗವಾಗಲು ಕಾಂಗ್ರೆಸ್ ಮತ್ತು ಅಂದಿನ ನಾಯಕರು ಕಾರಣ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದರು.
ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಗ್ಯಾಂಗ್ ಸ್ಟರ್ ಪತ್ನಿ!
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಒವೈಸಿ, ಇತಿಹಾಸವನ್ನು ಓದದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷಕ್ಕೆ ನಾನು ಸವಾಲು ಹಾಕುತ್ತೇನೆ. ಮುಸ್ಲಿಮರಿಂದಾಗಿ ದೇಶ ವಿಭಜನೆಯಾಗಿಲ್ಲ, ಆದರೆ ಜಿನ್ನಾ ಕಾರಣದಿಂದ ವಿಭಜನೆಯಾಯಿತು. ಆ ಸಂದರ್ಭದಲ್ಲಿ ಪ್ರಭಾವಶಾಲಿಯಾದ ನವಾಬ್ ಅಥವಾ ಪದವೀದರ ಅಭ್ಯರ್ಥಿಗಳಿಗೆ ಮಾತ್ರ ಮುಸ್ಲಿಮರು ಮತ ಚಲಾಯಿಸುತ್ತಿದ್ದರು. ಅದರ ಪರಿಣಾಮ ದೇಶ ಇಬ್ಭಾಗವಾಗಲು ಕಾಂಗ್ರೆಸ್ ಮತ್ತು ಅಂದಿನ ನಾಯಕರೇ ಕಾರಣ ಎಂದು ಒವೈಸಿ ಆರೋಪಿಸಿದರು.
ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಭಾರತದ ಮೊದಲ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರೆ ದೇಶ ಇಬ್ಭಾಗವಾಗುತ್ತಿರಲಿಲ್ಲ ಎಂದು ರಾಜ್ ಭರ್ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿರುವುದಾಗಿ ವರದಿ ಹೇಳಿದೆ.
2022ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಸುಹೇಲ್ ದೇವ್ ಭಾರತೀಯ ಸಮಾಜ್ ಪಕ್ಷ(ಎಸ್ ಬಿಎಸ್ ಪಿ) ಮೈತ್ರಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾಕ್ಸಮರ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.