ಕೇರಳ: ಆರೋಗ್ಯ ತುರ್ತುಸ್ಥಿತಿ
ಕಾಸರಗೋಡು ವಿದ್ಯಾರ್ಥಿನಿಗೆ ಕೊರೊನಾ
Team Udayavani, Feb 4, 2020, 7:00 AM IST
ಹೊಸದಿಲ್ಲಿ: ಚೀನದಿಂದ ಕರೆತಂದ ಭಾರತೀಯ ರನ್ನು ಪ್ರತ್ಯೇಕ ನಿಗಾ ಘಟಕದಲ್ಲಿ ತಪಾಸಣೆಗೆ ಒಳಪಡಿಸಲಾಯಿತು.
ತಿರುವನಂತಪುರ/ ಕಾಸರಗೋಡು: ಚೀನ ದಿಂದ ಆಗಮಿಸಿರುವ ಕಾಸರಗೋಡಿನ ವೈದ್ಯಕೀಯ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಮೂರಕ್ಕೇರಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರವು “ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸಿದೆ.
ಸೋಂಕು ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ. ಇದೇವೇಳೆ ಸೋಂಕು ದೃಢಪಟ್ಟಿರುವ ಮೂವರ ಆರೋಗ್ಯ ಸ್ಥಿತಿ “ತೃಪ್ತಿದಾಯಕ’ವಾಗಿದೆ ಎಂದು ಕೇರಳ ಸರಕಾರದ ಬುಲೆಟಿನ್ ಹೇಳಿದೆ.
ವುಹಾನ್ನಿಂದ ಆಗಮಿಸಿದ್ದ ಕಾಸರಗೋಡಿನ ವೈದ್ಯ ವಿದ್ಯಾರ್ಥಿನಿ ಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ಯನ್ನು ಕಾಂಞಂಗಾಡ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿರಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ. ರವಿವಾರದವರೆಗೆ ಒಟ್ಟು 104 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸ ಲಾಗಿದ್ದು, ಈ ಪೈಕಿ 3 ಪಾಸಿಟಿವ್ ವರದಿ ಬಂದಿದೆ ಎಂದು ಸಚಿವೆ ಶೈಲಜಾ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಒಟ್ಟು 1,999 ಮಂದಿಯ ಮೇಲೆ ನಿಗಾ ಇರಿಸಲಾಗಿದೆ.
ಕೇಂದ್ರದಿಂದ ಕಾರ್ಯಪಡೆ
ಕೊರೊನಾ ವಿಚಾರದ ಮೇಲ್ವಿಚಾರಣೆಗಾಗಿ ಕೇಂದ್ರ ಸರಕಾರವು ಕಾರ್ಯಪಡೆಯೊಂದನ್ನು ರಚಿಸಿದೆ. ಅದರಲ್ಲಿ ಆರೋಗ್ಯ, ಗೃಹ, ನಾಗರಿಕ ವಿಮಾನಯಾನ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿಗಳು ಇರಲಿದ್ದಾರೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಸೋಮವಾರ ತಿಳಿಸಿದ್ದಾರೆ.
17 ಸಾವಿರ ದಾಟಿದ ಸೋಂಕುಪೀಡಿತರ ಸಂಖ್ಯೆ
ಕೊರೊನಾ ಹಾವಳಿ 2002ರ ಸಾರ್ಸ್ ಉಪಟಳ ವನ್ನು ಮೀರಿಸಿದ್ದು, 17 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ಚೀನಾದ್ಯಂತ ಆಘಾತಕ್ಕೆ ಕಾರಣವಾಗಿದೆ. ರವಿವಾರ ಒಂದೇ ದಿನ 57 ಮಂದಿ ಮೃತಪಟ್ಟಿದ್ದು, ಸೋಮವಾರ ಅದು 361ಕ್ಕೆ ಏರಿದೆ. 20ಕ್ಕೂ ಹೆಚ್ಚು ದೇಶಗಳಿಗೆ ವೈರಸ್ ವ್ಯಾಪಿಸಿದೆ.ಜಾಗ ತಿಕ ಆರ್ಥಿಕ ಪ್ರಗತಿಯ ಮೇಲೂ ಇದು ಪ್ರತಿ ಕೂಲ ಪರಿ ಣಾಮ ಬೀರುತ್ತಿದೆ. ಶಾಂಘೈ ಕಾಂಪೋ ಸಿಟ್ ಇಂಡೆಕ್ಸ್ ಸೋಮ ವಾರ ಶೇ. 8ರಷ್ಟು ಕುಸಿದಿದೆ.
ಫ್ರಾನ್ಸ್ : 36 ಮಂದಿಯಲ್ಲಿ ರೋಗಲಕ್ಷಣ
ಚೀನದಿಂದ ಒಟ್ಟು 254 ಮಂದಿಯನ್ನು ಫ್ರಾನ್ಸ್ ರವಿವಾರ ಕರೆತಂದಿದ್ದು, ಈ ಪೈಕಿ 36 ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ. ಇವರೆಲ್ಲರನ್ನೂ ಏರ್ಪೋರ್ಟ್ನಲ್ಲೇ ಪ್ರತ್ಯೇಕ ಕೊಠಡಿಯಲ್ಲಿರಿಸಿ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೂಗಲ್ ಜತೆ ಚರ್ಚೆ
ನಾಗರಿಕರು ಕೊರೊನಾ ವೈರಸ್ ಬಗ್ಗೆ ಗೂಗಲ್ನಲ್ಲಿ ಹುಡುಕಾಡಿದಾಗ, ಮೊದಲಿಗೆ ತಾನು ನೀಡುವ ಮಾಹಿತಿಗಳೇ ಸಿಗುವಂತೆ ಮಾಡಲು ಗೂಗಲ್ ಜತೆ ವಿಶ್ವ ಆರೋಗ್ಯ ಸಂಸ್ಥೆ ಮಾತುಕತೆ ನಡೆಸುತ್ತಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಕುರಿತು ತಪ್ಪು ಮಾಹಿತಿ, ವದಂತಿಗಳು ಹಬ್ಬದಂತೆ ತಡೆಯಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಬಾವಲಿಯೇ ಮೂಲ ಎಂದ ಅಧ್ಯಯನ ವರದಿ
ಕೊರೊನಾ ವೈರಸ್ಗೆ ಬಾವಲಿಯೇ ಮೂಲ ಎಂದು ಸೋಮವಾರ “ನೇಚರ್’ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟವಾದ ಎರಡು ಅಧ್ಯಯನ ವರದಿಗಳು ಹೇಳಿವೆ. ಚೀನದಲ್ಲಿ ಈ ಹಿಂದೆ ಬಾವಲಿಗಳಲ್ಲಿ ಕಂಡುಬಂದಿದ್ದ ಸಾರ್ಸ್ ಮಾದರಿಯ ಕೊರೊನಾ ವೈರಸ್ಗಳ ಗುಂಪಿನೊಂದಿಗೆ ಈ ಬಾರಿಯ ವೈರಸ್ಗೂ ನಂಟಿರುವುದು ಅಧ್ಯಯನದಲ್ಲಿ ಕಂಡುಬಂದಿದೆ. ಈ ಎರಡೂ ವೈರಸ್ಗಳು ಶೇ.89.1ರಷ್ಟು ಹೋಲಿಕೆಯಾಗುತ್ತವೆ ಎಂದು ವರದಿ ಹೇಳಿದೆ. ಜತೆಗೆ ಸಾರ್ಸ್ ಮಾದರಿಯ ವೈರಸ್ಗಳಿಗೆ ಬಾವಲಿಯೇ ಮೂಲ ಎಂದೂ ಅದು ಹೇಳಿದೆ.