Five state elections ಈ ಬಾರಿಯಾದರೂ ಗೆಲ್ತಾರಾ?
Team Udayavani, Nov 8, 2023, 5:51 AM IST
ರಾಜಸ್ಥಾನದ ಕರಣ್ಪುರ ವಿಧಾನಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕ, 78 ವರ್ಷದ ತೀತಾರ್ ಸಿಂಗ್ ಅವರು ಈ ಬಾರಿಯಾದರೂ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ! ಅಂದ ಹಾಗೆ, “ಈ ಬಾರಿಯಾದರೂ’ ಅಂದರೆ ಏನು ಎಂದು ಯೋಚಿಸುತ್ತಿದ್ದೀರಾ? ಸಿಂಗ್ ಅವರು 1970ರಿಂದಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಲೇ ಇದ್ದಾರೆ. ಇದು ಅವರ 21ನೇ ಚುನಾವಣೆ! ಪಂಚಾಯತ್ನಿಂದ ಲೋಕಸಭೆವರೆಗೆ ಪ್ರತಿ ಚುನಾವಣೆಯಲ್ಲೂ ನಾನು ಸ್ಪರ್ಧಿಸಿ, ಪ್ರತಿ ಬಾರಿಯೂ ಸೋಲುಂಡಿದ್ದೇನೆ ಹಾಗೂ ಠೇವಣಿ ಕಳೆದುಕೊಂಡಿದ್ದೇನೆ. ಹಾಗಂತ ನಾನು ಧೃತಿಗೆಟ್ಟಿಲ್ಲ. ಈ ಚುನಾವಣೆಯು ನಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟ. ಸರ್ಕಾರವು ಭೂರಹಿತ ಕಾರ್ಮಿಕರೆಲ್ಲರಿಗೂ ಭೂಮಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಒದಗಿಸಬೇಕು. ನಾನು ವಿಶ್ವಾಸ ಕಳೆದುಕೊಂಡಿಲ್ಲ. ಈ ಬಾರಿಯಾದರೂ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ ಸಿಂಗ್.
ವಸುಂಧರಾ ರಾಜೇ ನಿವೃತ್ತಿ!
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುತ್ತಿರುವ ಘಟಾನುಘಟಿಗಳ ಪೈಕಿ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಕೂಡ ಒಬ್ಬರು ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ಆದರೆ, ರಾಜೇ ಅವರು ಚುನಾವಣಾ ಪ್ರಚಾರದ ವೇಳೆ “ನಿವೃತ್ತಿ’ಯ ಸುಳಿವು ನೀಡಿದ್ದಾರೆ! ಹೌದು, ಜಲಾವರ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತಾಡುವ ವೇಳೆ ವಸುಂಧರಾ ಅವರು, “ನನಗೆ ಈಗ ನಾನು ನಿವೃತ್ತಿಯಾಗುವ ಸಮಯ ಬಂದಿದೆ ಎಂದನಿಸುತ್ತಿದೆ. ನನ್ನ ಮಗ ದುಶ್ಯಂತ್ ಸಿಂಗ್ನ ಮಾತುಗಳನ್ನು ಕೇಳಿದ ಬಳಿಕವಂತೂ ಈ ಭಾವನೆ ಹೆಚ್ಚಾಗಿದೆ. ನೀವೆಲ್ಲರೂ ಅವನನ್ನು ರಾಜಕೀಯವಾಗಿ ಎಷ್ಟು ಚೆನ್ನಾಗಿ ಬೆಳೆಸಿದ್ದೀರಿ ಎಂದರೆ, ನಾನಿನ್ನು ನಿವೃತ್ತಿಯಾಗಿ ನೆಮ್ಮದಿಯಿಂದ ವಿಶ್ರಾಂತಿ ಪಡೆಯಬಹುದು’ ಎಂದಿದ್ದಾರೆ. ರಾಜೇ ಅವರ ಈ ಮಾತುಗಳಿಂದ ರಾಜಕೀಯ ವಲಯದಲ್ಲಿ ಬೇರೆಯದೇ ಗುಸು ಗುಸು ಆರಂಭವಾಗಿದೆ.
“ಪವರ್’ಫುಲ್ ದೇಗುಲಕ್ಕೆ ಲಗ್ಗೆ!
ಪಂಚರಾಜ್ಯ ಚುನಾವಣೆಯ ಕಾವು ಹೆಚ್ಚಾದಾಗಿನಿಂದ ಇಲ್ಲಿಯವರೆಗೆ ಹಲವು ರಾಜಕೀಯ ನೇತಾರರು ಮಧ್ಯಪ್ರದೇಶದ ದಾಟಿಯಾದತ್ತ ಪ್ರಯಾಣ ಬೆಳೆಸಿದ್ದನ್ನು ನೋಡಬಹುದು. ಇವರೆಲ್ಲರೂ ಭೇಟಿ ನೀಡಿದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ- ಮಧ್ಯಪ್ರದೇಶದಲ್ಲಿ ಒಂದು ದೇವಸ್ಥಾನವಿದೆ. ಅದರ ಹೆಸರು ಬಾಗಲಮುಖಿ ದೇವಿ ದೇಗುಲ. ಬಾಗಲಮುಖಿ ದೇವಿಯನ್ನು “ಅಧಿಕಾರದ ದೇವಿ’ ಎಂದು ಕರೆಯುತ್ತಾರೆ. ಅಂದರೆ, ಇಲ್ಲಿಗೆ ಬಂದು ಪೂಜಿಸಿದರೆ ಅಂಥವರಿಗೆ ರಾಜಕೀಯ ಅಧಿಕಾರ ಒಲಿಯುತ್ತದೆ ಎಂಬ ನಂಬಿಕೆ ಹಲವರದ್ದು. ಹೀಗಾಗಿ, ಚುನಾವಣೆ ಬಂದರೆ ಸಾಕು, ರಾಜಕೀಯ ಪಕ್ಷಗಳ ಮುಖಂಡರೆಲ್ಲ ಇಲ್ಲಿಗೆ ದಾಂಗುಡಿಯಿಡುತ್ತಾರೆ. ಪಂಚರಾಜ್ಯ ಚುನಾವಣೆ ಘೋಷಣೆ ಆದಾಗಿನಿಂದಲೂ ಇಲ್ಲಿ ದಿನನಿತ್ಯ ವಿವಿಐಪಿಗಳ ಭೇಟಿ, ವಿಶೇಷ ಪೂಜೆ, ಹೋಮ-ಹವನಗಳು ನಡೆಯುತ್ತಲೇ ಇವೆಯಂತೆ. ಆದರೆ, ಯಾರ್ಯಾರಿಗೆ ದೇವಿ ಒಲಿಯುತ್ತಾಳೆ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ!