ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ ಸಿಎಂ ಸ್ಥಾನಕ್ಕೆ ಮತ್ತೆ ಕಿತ್ತಾಟ
Team Udayavani, Sep 15, 2022, 7:25 AM IST
ಜೈಪುರ: ಕಾಂಗ್ರೆಸ್ ಆಡಳಿತದಲ್ಲಿರುವ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದೊಳಗೇ ಕಚ್ಚಾಟ ನಡೆಯುತ್ತಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿದ್ದು, ಗುರ್ಜರ್ ಸಮುದಾಯದ ಯುವ ನಾಯಕ ಸಚಿನ್ ಪೈಲಟ್ ಅವರನ್ನೇ ಮುಖ್ಯಮಂತ್ರಿಯನ್ನಾಗಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಸೋಮವಾರ ರಾಜ್ಯ ಸಚಿವ ಅಶೋಕ್ ಚಾಂದ್ನಾ ಅವರು ಪುಷ್ಕರ್ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅದರಲ್ಲಿ ಅವರಿಗೆ ಮುಖಭಂಗವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಸಚಿನ್ ಪೈಲಟ್ ಪರ ಘೋಷಣೆಗಳನ್ನು ಕೂಗಿದ್ದಷ್ಟೇ ಅಲ್ಲದೆ, ವೇದಿಕೆಯತ್ತ ಚಪ್ಪಲಿಗಳನ್ನೂ ಎಸೆದಿದ್ದಾರೆ.
“ಸಚಿನ್ ಅವರು ಸಿಎಂ ಆಗಬೇಕೆಂದು ತಮ್ಮ ಅಭಿಮಾನಿಗಳಿಂದ ಈ ರೀತಿ ಕೆಲಸ ಮಾಡಿಸಿದ್ದಾರೆ’ ಎಂದು ಸಚಿವರು ದೂರಿದ್ದಾರೆ. ಕೇವಲ ಅಶೋಕ್ ಮಾತ್ರವಲ್ಲದೆ, ಸಿಎಂಗೆ ಆಪ್ತರಾಗಿರುವ ಇನ್ನೋರ್ವ ಸಚಿವೆ ಶಕುಂತಲಾ ರಾವತ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಇದೇ ರೀತಿ ಪರಿಸ್ಥಿತಿ ಉಂಟಾಗಿದ್ದು, ನಾಯಕರು ವೇದಿಕೆಯಿಂದ ಕೆಳಗಿಳಿದು ಹೋಗುವಂತಾಗಿದೆ.