ಉಗ್ರರಿಂದ ಇಂಟರ್ನೆಟ್ ದುರ್ಬಳಕೆ
Team Udayavani, Feb 6, 2020, 8:47 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಶ್ರೀನಗರ: ಕಾಶ್ಮೀರದಲ್ಲಿ ಪುನರಾರಂಭಿಸಿರುವ ಇಂಟರ್ನೆಟ್ ಸೇವೆಯನ್ನು ಉಗ್ರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಶ್ರೀನಗರದ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ವಿಪಿಎನ್ ಮೂಲಕ 2ಜಿ ಇಂಟರ್ನೆಟ್ ಮತ್ತು ಡಾಟಾ ಸೇವೆಗಳನ್ನು ಬಳಸುತ್ತಿರುವ ಉಗ್ರಗಾಮಿಗಳು, ಆ ಮೂಲಕ ಪಾಕಿಸ್ಥಾನದಲ್ಲಿರುವ ತಮ್ಮ ಮುಖಂಡರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಚಟುವಟಿಕೆಗಳ ಕುರಿತು ಮಾಹಿತಿ ರವಾನಿಸುತ್ತಿದ್ದಾರೆ.
ಜ. 31ರಂದು ಬಾನ್ ಟೋಲ್ ಪ್ಲಾಜಾ ಬಳಿ ನಡೆದ ಎನ್ಕೌಂಟರ್ನ ಚಿತ್ರಗಳನ್ನು ಸೆರೆ ಹಿಡಿದ ಟ್ರಕ್ ಚಾಲಕ, ಅವುಗಳನ್ನು ಪಾಕ್ಗೆ ಕಳುಹಿಸಿರುವ ಬಗ್ಗೆ ಭದ್ರತಾ ಪಡೆಗಳಿಗೆ ಸ್ಪಷ್ಟ ಮಾಹಿತಿ ದೊರೆತಿದೆ.
ಪ್ರಸ್ತುತ ಕಣಿವೆ ರಾಜ್ಯದಲ್ಲಿ 300 ವೆಬ್ಸೈಟ್ಗಳನ್ನು ‘ವೈಟ್ಲಿಸ್ಟ್’ ಮಾಡಲಾಗಿದೆ. ಈ ನಡುವೆ ಉಗ್ರರು ವರ್ಚುವಲ್ ಪ್ರೈವೇಟ್ ನೆಟ್ವರ್ಕ್ (ವಿಪಿಎನ್) ಬಳಸಿ ಕಪ್ಪುಪಟ್ಟಿಯಲ್ಲಿರುವ ಜಾಲತಾಣಗಳ ಪ್ರವೇಶ ಪಡೆಯುತ್ತಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.
ಇಬ್ಬರು ಉಗ್ರರ ಹತ್ಯೆ, ಯೋಧ ಹುತಾತ್ಮ
ಶ್ರೀನಗರದ ಹೊರವಲಯದಲ್ಲಿ ಬುಧವಾರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳು ಹತ್ಯೆಗೀಡಾಗಿದ್ದು, ಒಬ್ಬ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. ಪರಂಪುರದ ಶಾಲ್ಟೆಂಗ್ ಬಳಿ ಇರುವ ಸಂಚಾರಿ ಚೆಕ್ಪೋಸ್ಟ್ ಬಳಿ ಘಟನೆ ನಡೆದಿದೆ.
ಬೈಕ್ನಲ್ಲಿ ಬಂದ ಮೂವರು ಉಗ್ರರು ತಪಾಸಣೆ ನಡೆಸುತ್ತಿದ್ದ ಸಿಆರ್ಪಿಎಫ್ ಸಿಬಂದಿ ಮೇಲೆ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡ ಯೋಧ ರಮೇಶ್ ರಂಜನ್ ಹುತಾತ್ಮರಾದರು. ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು, ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಗಾಯಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ ಮತ್ತೂಬ್ಬ ಉಗ್ರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.