Heavy Rain ಇಂದಿನಿಂದ ಐದು ದಿನ ಮತ್ತೆ ಮಳೆಯ ಆರ್ಭಟ
ಹಿಮಾಚಲ, ಉತ್ತರಾಖಂಡದಲ್ಲಿ ಅಪಾಯದ ಎಚ್ಚರಿಕೆ ; ತಗ್ಗಿದ ಪ್ರವಾಹ
Team Udayavani, Jul 17, 2023, 7:00 AM IST
ಹೊಸದಿಲ್ಲಿ: ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ಭಾರೀ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ವರುಣ, ಸೋಮವಾರದಿಂದ ಮತ್ತೆ ಅಬ್ಬರಿಸಲಿದ್ದಾನೆ. ಸೋಮವಾರದಿಂದ ಈ ಎರಡೂ ರಾಜ್ಯಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜು.17ರಿಂದ ದೇಶದ ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆಯಾದರೆ, ಈಶಾನ್ಯ ಭಾರತದಲ್ಲಿ ವರುಣನಬ್ಬರ ಕಡಿಮೆಯಾಗಲಿದೆ ಎಂದೂ ಇಲಾಖೆ ತಿಳಿಸಿದೆ. ಇದೇ ವೇಳೆ, ದಿಲ್ಲಿಯಲ್ಲಿ ಯಮುನಾ ನದಿಯ ಪ್ರವಾಹ ರವಿವಾರ ಬೆಳಗ್ಗೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಆದರೆ ಸಂಜೆ ಅನಂತರ ರಾಷ್ಟ್ರ ರಾಜಧಾನಿಯಲ್ಲಿ ಮಳೆಯಾಗಿರುವ ಕಾರಣ, ಸದ್ಯ ಕ್ಕಂತೂ ನಿರಾಳ ಎನ್ನುವಂಥ ಸ್ಥಿತಿ ಬಂದಿಲ್ಲ.
ಹಿಮಾಚಲ ಪ್ರದೇಶದಲ್ಲಿ ಮುಂದಿನ 5 ದಿನಗಳ ಕಾಲ ಧಾರಾಕಾರ ಮಳೆಯಾಗಲಿದ್ದು, ಉತ್ತರಾಖಂಡ ಮತ್ತು ಪೂರ್ವ ಉತ್ತರ ಪ್ರದೇಶಗಳಲ್ಲಿ ಮೂರು ದಿನಗಳ ಕಾಲ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಝಾರ್ಖಂಡ್, ಒಡಿಶಾದಲ್ಲಿ ಸೋಮವಾರ ಧಾರಾಕಾರ ಮಳೆಯಾಗಲಿದೆ. ಮಧ್ಯ ಪ್ರದೇಶ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಛತ್ತೀಸ್ಗಢದಲ್ಲೂ ಮಳೆಯಬ್ಬರ ಮುಂದು ವರಿಯಲಿದೆ ಎಂದು ತಿಳಿಸಿದೆ. ಒಟ್ಟಾರೆ 7 ರಾಜ್ಯಗಳಿಗೆ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.
ಇಬ್ಬರು ನಾಪತ್ತೆ: ದಿಲ್ಲಿಯಲ್ಲಿ ಯಮುನಾ ನದಿ ಪ್ರವಾಹ ಸ್ವಲ್ಪಮಟ್ಟಿಗೆ ತಗ್ಗಿದ್ದು, ತೀರ ಪ್ರದೇಶದ ಜನರು ಶಿಬಿರಗಳಿಂದ ತಮ್ಮ ತಮ್ಮ ಮನೆಗಳಿಗೆ ವಾಪ ಸಾಗುತ್ತಿದ್ದಾರೆ. ಇದೇ ವೇಳೆ, ರವಿವಾರ ಗ್ರೇಟರ್ ನೋಯ್ಡಾದಲ್ಲಿ ಸ್ನಾನಕ್ಕೆಂದು ನದಿಗಿಳಿದಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಈ ನಡುವೆ, ಪ್ರವಾಹದಿಂದಾಗಿ ಆಧಾರ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಕಳೆದುಕೊಂಡವರಿಗೆ, ಅವುಗಳನ್ನು ಮರಳಿ ಕೊಡಿಸಲು ವಿಶೇಷ ಕ್ಯಾಂಪ್ ರೂಪಿಸುವು ದಾಗಿ ದಿಲ್ಲಿ ಸಿಎಂ ಕೇಜ್ರಿವಾಲ್ ಘೋಷಿಸಿದ್ದಾರೆ.
ಪಂಜಾಬ್ನ ಹೋಶಿಯಾರ್ಪುರದಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಸುರಿದ ಮಳೆಯಿಂದಾಗಿ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ.
ದ.ಕೊರಿಯಾದಲ್ಲಿ ಪ್ರವಾಹ: ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾ ಗಿದೆ. ಸುರಂಗವೊಂದರಲ್ಲಿ ನೀರು ತುಂಬಿಕೊಂಡು 15 ವಾಹನಗಳು ಸಿಲುಕಿದ್ದು, ಒಳಗಿದ್ದ 9 ಮಂದಿಯ ಮೃತದೇಹಗಳನ್ನು ರವಿವಾರ ಹೊರತೆಗೆ¿ ು ಲಾಗಿದೆ. ಇನ್ನೂ ಹಲವರು ಸುರಂಗದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜು.9ರಿಂದ ಈವರೆಗೆ ಮಳೆ, ಪ್ರವಾಹಕ್ಕೆ 37 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಕುಸಿಯುವ ಭೀತಿಯಲ್ಲಿ ಗಡಿ ಸೇತುವೆ
ಉತ್ತರಾಖಂಡದ ಚಮೋಲಿಯಲ್ಲಿ ಭಾರತ-ಚೀನ ಗಡಿ ಪ್ರದೇಶದಲ್ಲಿರುವ ಸೇತುವೆಯೊಂದು ಅಪಾಯದಂಚಿನಲ್ಲಿದೆ. ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿರುವ ಕಾರಣ, ಜೋಶಿಮಠ ಸೇರಿದಂತೆ ಹಲವು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯು ಜು.10ರಂದು ಭಾಗಶಃ ಕೊಚ್ಚಿ ಹೋಗಿತ್ತು. ಆದರೆ ಗಡಿ ರಸ್ತೆ ಸಂಸ್ಥೆ (ಬಿಆರ್ಒ)ಯ ಯೋಧರು ಹ್ಯೂಮ್ ಪೈಪ್ಗ್ಳನ್ನು ಅಳವಡಿಸಿ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಆದರೆ ನೀರಿನ ಹರಿವು ಹೆಚ್ಚಿರುವ ಕಾರಣ ಹಾಗೂ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಂಭವವಿದ್ದು ಸೇತುವೆ ಅಪಾಯದಲ್ಲಿದೆ ಎಂದು ಬಿಆರ್ಒ ತಿಳಿಸಿದೆ.
ರಾಜಸ್ಥಾನದಲ್ಲಿ ಅಸಾಮಾನ್ಯ ಮಳೆ
ರಾಜಸ್ಥಾನದ 33 ಜಿಲ್ಲೆಗಳ ಪೈಕಿ 15ರಲ್ಲಿ ಈ ಬಾರಿ ಅಸಾಮಾನ್ಯ ಮಳೆಯಾಗಿದ್ದು, ಜು.15ರವರೆಗೆ ವಾಡಿಕೆಗಿಂತ ಶೇ.80.9ರಷ್ಟು ಹೆಚ್ಚು ಮಳೆ ಸುರಿದಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 146.39 ಮಿ.ಮೀ. ಮಳೆಯಾಗುತ್ತದೆ. ಆದರೆ ಈ ಬಾರಿ 264.75 ಮಿ.ಮೀ. ಮಳೆಯಾಗಿದೆ. ಅಲ್ಲದೇ ರಾಜಸ್ಥಾನದ ಒಂದೇ ಒಂದು ಜಿಲ್ಲೆಯಲ್ಲೂ ಮಳೆ ಕೊರತೆ ಕಂಡುಬಂದಿಲ್ಲ.