ವರಿಷ್ಠರ ಗಮನ ಸೆಳೆಯಲು ನಕಲಿ ಭಯೋತ್ಪಾದಕ ದಾಳಿ ಕಥೆ ಕಟ್ಟಿದ ಬಿಜೆಪಿ ಜಿಲ್ಲಾಧ್ಯಕ್ಷನ ಪುತ್ರ!
ಇದೊಂದು ಭಯೋತ್ಪಾದಕ ದಾಳಿ ಎಂಬಂತೆ ಬಿಂಬಿಸಲು ಕಥೆ ಕಟ್ಟಿರುವುದಾಗಿ ವರದಿ ತಿಳಿಸಿದೆ.
Team Udayavani, Jul 19, 2021, 6:26 PM IST
ಶ್ರೀನಗರ: ಭಾರತೀಯ ಜನತಾ ಪಕ್ಷದ ವರಿಷ್ಠರ ಗಮನ ಸೆಳೆಯಲು ಹಾಗೂ ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಕಲಿ ಭಯೋತ್ಪಾದಕ ದಾಳಿ ಕಥೆ ಕಟ್ಟಿದ್ದ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲಾ ಬಿಜೆಪಿ ಅಧ್ಯಕ್ಷನ ಪುತ್ರ ಹಾಗೂ ಪಕ್ಷದ ವಕ್ತಾರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಇದನ್ನು ಓದಿ:ಸಿಎಂ ಬದಲಾವಣೆ ಮಾಡಿದ್ರೆ ನೆಕ್ಸ್ಟ್ ಕ್ಯಾಂಡಿಡೇಟ್ ನಾನೇ’ : ಸಚಿವ ಉಮೇಶ ಕತ್ತಿ
ಶುಕ್ರವಾರ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಇಶ್ಪಾಕ್ ಅಹ್ಮದ್ ಮೀರ್ ಎಂಬಾತನ ಕೈಗೆ ಗಾಯವಾಗಿತ್ತು. ಅಷ್ಟೇ ಅಲ್ಲ ಈ ಪಿತೂರಿಯಲ್ಲಿ ಶಾಮೀಲಾಗಿದ್ದ ಕುಪ್ವಾರಾ ಜಿಲ್ಲಾ ಬಿಜೆಪಿ ವಕ್ತಾರ ಬಸರತ್ ಅಹ್ಮದ್ ನನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದೊಂದು ನಕಲಿ ಭಯೋತ್ಪಾದಕ ದಾಳಿ ಎಂಬ ವಿಚಾರ ತಿಳಿದ ನಂತರ ಇಶ್ಪಾಕ್ ತಂದೆ ಕುಪ್ವಾರ ಬಿಜೆಪಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಫಿ ಅವರನ್ನು ಭಾರತೀಯ ಜನತಾ ಪಕ್ಷ ಅಮಾನತುಗೊಳಿಸಿರುವುದಾಗಿ ವರದಿ ವಿವರಿಸಿದೆ.
ಏನಿದು ಘಟನೆ:
ಭಾರತೀಯ ಜನತಾ ಪಕ್ಷದ ವರಿಷ್ಠರ ಗಮನ ಸೆಳೆಯಲು ಮತ್ತು ತಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಇಶ್ಪಾಕ್ ಮೀರ್ ಈ ಸಂಚನ್ನು ರೂಪಿಸಿರುವುದು ತನಿಖೆಯಲ್ಲಿ ಬಯಲಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ, ನಕಲಿ ಭಯೋತ್ಪಾದಕ ದಾಳಿ ಬಗ್ಗೆ ಮೊದಲೇ ಎಲ್ಲಾ ಸಿದ್ಧತೆ ರೂಪಿಸಿರುವುದಾಗಿ ತನಿಖೆಯಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಬಿಜೆಪಿ ಕಾರ್ಯಕರ್ತ ಇಶ್ಪಾಕ್ ಮೀರ್ ತೆರಳುತ್ತಿದ್ದ ಕಾರಿಗೆ ಪಹರೆಯಲ್ಲಿದ್ದ ಪೊಲೀಸ್ ಅಧಿಕಾರಿಗಳ ಗನ್ ನಿಂದ ಆಕಸ್ಮಿಕವಾಗಿ ಗುಂಡು ಹಾರಿತ್ತು. ಇದರಿಂದಾಗಿ ಇಶ್ಪಾಕ್ ಭುಜಕ್ಕೆ ಗಾಯವಾಗಿತ್ತು. ಆದರೆ ಇಶ್ಪಾಕ್ ಇದನ್ನು ಬಾಲಿವುಡ್ ಸಿನಿಮಾ ಮಾದರಿಯಲ್ಲಿ ಇದೊಂದು ಭಯೋತ್ಪಾದಕ ದಾಳಿ ಎಂಬಂತೆ ಬಿಂಬಿಸಲು ಕಥೆ ಕಟ್ಟಿರುವುದಾಗಿ ವರದಿ ತಿಳಿಸಿದೆ.
ಪೊಲೀಸರ ವಿಚಾರಣೆ ವೇಳೆ ಇಶ್ಪಾಕ್ ಇದೊಂದು ಪೂರ್ವಯೋಜಿತ ಸಿದ್ದತೆಯಾಗಿದ್ದು, ಭಯೋತ್ಪಾದಕ ದಾಳಿ ಅಲ್ಲ ಎಂಬುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿದೆ. ಘಟನೆ ನಂತರ ಇಶ್ಪಾಕ್ ತಂದೆ ಬಿಜೆಪಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಫಿ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದಾಗಿ ವರದಿ ಹೇಳಿದೆ.