- Friday 06 Dec 2019
ಕಣಿವೆ ಏನಾಗುತ್ತಿದೆ ?ಆರ್ಟಿಕಲ್ 370 ಆಟ ಮುಗಿಯಿತೇ? ಏನಿವು ಆರ್ಟಿಕಲ್ 35ಎ & 370
ಜಮ್ಮು ಕಾಶ್ಮೀರದಲ್ಲೀಗ ಗೊಂದಲ-ಗಾಬರಿ
Team Udayavani, Aug 5, 2019, 10:20 AM IST
ಕಳೆದೊಂದು ವಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಅಕ್ಷರಶಃ ಗೊಂದಲ ಮತ್ತು ಆತಂಕದ ಗೂಡಾಗಿದೆ. ಅದರಲ್ಲೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾಶ್ಮೀರ ಕಣಿವೆಗೆ ಸಾಗರೋಪಾದಿಯಲ್ಲಿ ಹೆಚ್ಚುವರಿ ಸೈನಿಕರನ್ನು ಕಳುಹಿಸಿದ ಮೇಲಂತೂ ಅಲ್ಲಿನ ಜನರಿಗೆ, ಮುಖ್ಯವಾಗಿ ಕಾಶ್ಮೀರಿ ರಾಜಕಾರಣಿಗಳಿಗೆ ಗೊಂದಲ-ಗಾಬರಿ ಅಧಿಕವಾಗಿದೆ. ಕೇಂದ್ರ ಸರ್ಕಾರ ಒಟ್ಟು ಎರಡು ಬ್ಯಾಚ್ಗಳಲ್ಲಿ 38,000 ಹೆಚ್ಚುವರಿ ಸೈನಿಕರನ್ನು ಕಳುಹಿಸಿದ್ದೇಕೆ ಎನ್ನುವ ಪ್ರಶ್ನೆಗೆ ತರಹೇವಾರಿ ಉತ್ತರಗಳು ಸಿಗುತ್ತಿವೆ.
ಏತನ್ಮಧ್ಯೆಯೇ ಉಗ್ರ ದಾಳಿಯ ಸಂಭಾವ್ಯತೆಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನೂ ನಿಲ್ಲಿಸಲಾಗಿದೆ. ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ರಾಜ್ಯದಿಂದ ತೆರಳಲು ಆದೇಶಿಸಲಾಗಿದೆ. ಉಗ್ರ ದಾಳಿಯ ಕಾರಣಕ್ಕಾಗಿ ಇಷ್ಟು ಸೈನಿಕರನ್ನು ಕಳುಹಿಸಲಾಗಿದೆಯೇ ಎನ್ನುವ ಪ್ರಶ್ನೆಗಂತೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಆದರೂ ಶನಿವಾರವಷ್ಟೇ ಕಾಶ್ಮೀರದ ಕೇರನ್ ಸೆಕ್ಟರ್ನಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಪಾಕಿಸ್ಥಾನದ ಬ್ಯಾಟ್ ಸೈನಿಕರನ್ನು ಭಾರತೀಯ ಪಡೆಗಳು ಹೊಡೆದುರುಳಿಸಿರುವುದನ್ನು ಪರಿಗಣಿಸಿದಾಗ, ಪಾಕಿಸ್ಥಾನ ನಿಜಕ್ಕೂ ಭಾರತದ ಮೇಲೆ ಬೃಹತ್ ಸಂಚು ರೂಪಿಸಿದೆಯೇ ಎನ್ನುವ ಪ್ರಶ್ನೆಯೂ ಎದುರಾಗುತ್ತಿದೆ.
ಆರ್ಟಿಕಲ್ 370 ಆಟ ಮುಗಿಯಿತೇ?
ಸರ್ಕಾರ ಜಮ್ಮು-ಕಾಶ್ಮೀರದಿಂದ ಆರ್ಟಿಕಲ್ 35ಎ ಮತ್ತು ಆರ್ಟಿಕಲ್ 370 ಅನ್ನು ಹಿಂಪಡೆಯಲು ಸಿದ್ಧತೆ ನಡೆಸುತ್ತಿದ್ದು, ತಲವಾಗಿ ಕಾಶ್ಮೀರದಲ್ಲಿ ಹಿಂಸಾಚಾರ ಉಂಟಾದರೆ ಅದನ್ನು ತಡೆಯುವುದಕ್ಕಾಗಿ ಸೇನೆಯನ್ನು ಕಳುಹಿಸಲಾಗಿದೆ ಎನ್ನುವುದು ಪ್ರಮುಖ ವಾದ. ಕೆಲ ದಿನಗಳಿಂದ ನಡೆದ ವಿದ್ಯಮಾನಗಳು ಈ ವಾದಕ್ಕೆ ಬಲ ತುಂಬುವಂತಿವೆ. ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಆರ್ಟಿಕಲ್ 370 “ತಾತ್ಕಾಲಿಕ’ ಎಂದು ಹೇಳಿದ ನಂತರವಂತೂ ಈ ಪರಿಚ್ಛೇದವನ್ನು ಕಾಶ್ಮೀರದಿಂದ ಕೊನೆಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆದಿವೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತಾನು ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ಅನ್ನು ತೆರವುಗೊಳಿಸುವುದಾಗಿಯೂ ಹೇಳಿದ್ದನ್ನು ಇಲ್ಲಿ ನೆನಪಿಸಿಕೆಳ್ಳಬಹುದು . ಆರ್ಟಿಕಲ್ 370 ತೆರವಿನ ಮಾತುಗಳು ಕಾಶ್ಮೀರದ ಪ್ರಾದೇಶಿಕ ಪಕ್ಷಗಳನ್ನು ಕಂಗೆಡಿಸಿರುವುದಂತೂ ಸುಳ್ಳಲ್ಲ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ನ್ಯಾಶನಲ್ ಕಾನ್ಫರೆನ್ಸ್ನ ಓಮರ್ ಅಬ್ದುಲ್ಲಾ ಈ ವಿಷಯದಲ್ಲಿ ಕೇಂದ್ರ ಸ್ಪಷ್ಟತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಓಮರ್ ಅಬ್ದುಲ್ಲಾ ಈ ವಿಚಾರವಾಗಿ ಪ್ರಧಾನಿಗಳೊಂದಿಗೆ ಮಾತು ಕತೆಯೂ ನಡೆಸಿಯಾಗಿದೆ. ಆದಾಗ್ಯೂ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಇದೆಲ್ಲ ಊಹಾಪೋಹವಷ್ಟೇ, ವಿಶೇಷ ಸ್ಥಾನಮಾನದಲ್ಲಿ ಬದಲಾವಣೆಯಿಲ್ಲ ಎಂದು ಹೇಳುತ್ತಿದ್ದಾರಾದರೂ, ಸ್ಥಳೀಯ ನಾಯಕರು ಅವರ ಮಾತನ್ನು ನಂಬಲು ಸಿದ್ಧರಿಲ್ಲ.
ಏನಿವು ಆರ್ಟಿಕಲ್ 35 ಎ ಮತ್ತು 370?
ಆರ್ಟಿಕಲ್ 35 ಎ: ಸಂವಿಧಾನದ ಪರಿಚ್ಛೇದ 35ಎ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ನಿಯಮ-ಸ್ಥಾನಮಾನವನ್ನು ಒದಗಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಹೊರ ರಾಜ್ಯದವರು ಜಮ್ಮು ಕಾಶ್ಮೀರದಲ್ಲಿ ಖಾಯಂ ಆಗಿ ನೆಲೆಸುವುದನ್ನು ಈ ಕಾಯ್ದೆ ನಿಷೇಧಿಸಿದೆ. ಅಲ್ಲದೇ ಹೊರ ರಾಜ್ಯದವರಿಗೆ ಕಾಶ್ಮೀರದಲ್ಲಿ ಸ್ಥಿರಾಸ್ತಿ ಖರೀದಿ, ಸರ್ಕಾರಿ ಉದ್ಯೋಗ, ಸ್ಕಾಲರ್ ಶಿಪ್ ಮತ್ತು ಇತರೆ ನೆರವುಗಳನ್ನೂ ಈ ಪರಿಚ್ಛೇದ ನಿಷೇಧಿಸಿದೆ.
ಆರ್ಟಿಕಲ್ 370: ಈ ವಿಧಿಯು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. ಭಾರತೀಯ ಸಂವಿಧಾನದ ಎಲ್ಲವಿಚಾರಗಳು ಇತರ ರಾಜ್ಯಗಳಿಗೆ ಅನ್ವಯವಾದರೂ, ಜಮ್ಮು ಮತ್ತು ಕಾಶ್ಮೀರದ ಮಟ್ಟಿಗೆ ಆಗುವುದಿಲ್ಲ. ಆ ರಾಜ್ಯವು ಭಾರತದ ಅವಿಭಾಜ್ಯ ಅಂಗ ಎಂದು ವಿಧಿಯಲ್ಲಿ ಹೇಳಿದ್ದರೂ, ಹಣಕಾಸು, ರಕ್ಷಣೆ, ವಿದೇಶಾಂಗ, ಸಂವಹನ ಹೊರತುಪಡಿಸಿ, ಉಳಿದೆಲ್ಲ ತೀರ್ಮಾನಗಳನ್ನು ಕಾಶ್ಮೀರ ಸರ್ಕಾರ ಸ್ವತಂತ್ರವಾಗಿ ಕೈಗೊಳ್ಳಬಹುದಾಗಿದೆ.
ಇನ್ನು ಅಲ್ಲಿನ ಜನತೆ ಭಾರತದ ಬೇರೆ ಕಡೆಗಳಲ್ಲಿ ಆಸ್ತಿ ಖರೀದಿ ಮಾಡಬಹುದಾಗಿದ್ದು, ಬೇರೆ ರಾಜ್ಯದ ಜನರು ಕಾಶ್ಮೀರದಲ್ಲಿ ಆಸ್ತಿ ಹೊಂದುವಂತಿಲ್ಲ. ಕಾಶ್ಮೀರದಲ್ಲಿ ಯುದ್ಧ ಸಂದರ್ಭದ ತುರ್ತುಸ್ಥಿತಿ ಹೊರತಾಗಿ ತುರ್ತುಪರಿಸ್ಥಿತಿ ಘೋಷಿಸುವ ಯಾವುದೇ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿರುವುದಿಲ್ಲ.
ವಿಧಾನ ಸಭಾ ಚುನಾವಣೆಗೆ ಸಿದ್ಧತೆಯೇ?
ಬಿಜೆಪಿಯ ಸ್ಥಳೀಯ ನಾಯಕರು, ವಿಧಾನ ಸಭಾ ಚುನಾವಣೆಯ ತಯಾರಿಯ ಭಾಗವಾಗಿ ಹೆಚ್ಚುವರಿ ಸೈನಿಕರನ್ನು ಕರೆಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಹೇಳುತ್ತಿದ್ದಾರೆ. ಜಮ್ಮು-ಕಾಶ್ಮೀರ ಕಳೆದ ವರ್ಷ ಜುಲೈ ತಿಂಗಳಿನಿಂದಲೂ ರಾಷ್ಟ್ರಪತಿ ಆಳ್ವಿಕಯಲ್ಲಿದೆ. ಬಿಜೆಪಿ ಮತ್ತು ಪಿಡಿಪಿ ನಡುವಿನ ಮೈತ್ರಿ ಮುರಿದ ನಂತರ ಅಲ್ಲಿ ಸರ್ಕಾರ ಕುಸಿದಿತ್ತು. ಈ ವರ್ಷಾಂತ್ಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆಯಾದರೂ, ದಿನಾಂಕ ನಿಗದಿಯಾಗಿಲ್ಲ.
ಸ್ವಾತಂತ್ರ್ಯೋತ್ಸವಕ್ಕೆ ಭದ್ರತೆಯೇ?
ಸ್ವಾತಂತ್ರ್ಯೋತ್ಸವದಂದು ಪಕ್ಷದ ಪ್ರತಿಯೊಬ್ಬ ಪಂಚಾಯಿತಿ ಅಧ್ಯಕ್ಷನೂ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಬಿಜೆಪಿ ಉದ್ದೇಶಿಸಿದೆ. ಆದರೆ ಇದ್ಕಕೆ ಆಗಲೇ ಪ್ರತ್ಯೇಕತಾವಾದಿಗಳಿಂದ ಬೆದರಿಕೆಗಳು ಬರಲಾರಂಭಿಸಿವೆ. ಹೀಗಾಗಿ, ಆಗಸ್ಟ್ 15ರಂದು ಪಂಚಾಯಿತಿ ಮುಖ್ಯಸ್ಥರಿಗೆಲ್ಲ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೈನಿಕರನ್ನು ಕಳುಹಿಸಲಾಗಿದೆ ಎಂದೂ ಹೇಳಲಾಗುತ್ತದೆ. 2018ರಲ್ಲಿ ನಡೆದ ಪಂಚಾಯಿತಿ ಚುನಾವಣೆಯಿಂದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ದೂರ ಉಳಿದಿದ್ದವು. ಆಗ ಬಿಜೆಪಿ ಗಮನಾರ್ಹ ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ ನಂತರದ ಸ್ಥಾನ ಪಡೆದಿತ್ತು.
ಪ್ರತ್ಯೇಕವಾಗುವವೇ ಜಮ್ಮು, ಕಾಶ್ಮೀರ ಮತ್ತು ಲಡಾಖ್?
ಮೋದಿ ಸರ್ಕಾರ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಅನ್ನು ಮೂರು ರಾಜ್ಯಗಳನ್ನಾಗಿ ವಿಂಗಡಿಸಲಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ. ಹಾಗಿದ್ದರೆ ಈ ಮೂರೂ ಪ್ರದೇಶಗಳನ್ನು ಪ್ರತ್ಯೇಕಗೊಳಿಸಿ ಅವುಗಳನ್ನು ಕೇಂದ್ರಾಡಳಿತ ಪ್ರದೇಶ ಮಾಡಲಾಗುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆಯೇ? ಈ ಪ್ರದೇಶಗಳು ಪ್ರತ್ಯೇಕಗೊಂಡು ಕೇಂದ್ರ ಡಳಿತಕ್ಕೆ ಒಳಪಟ್ಟರೆ ಹಿಂಸಾ ಚಾರ ಕಡಿಮೆಯಾಗುತ್ತದೆ, ಅಲ್ಲಿನ ಆಡಳಿತ ಯಂತ್ರ ಸರಿಯಾಗುತ್ತದೆ ಎನ್ನುವುದು ರಕ್ಷಣಾ ಪರಿಣತರ ವಾದ. ಆದರೆ, ಇದೇ ಸತ್ಯಪಾಲ್ ಮಲಿಕ್ ಅವರು ಕೆಲ ತಿಂಗಳ ಹಿಂದೆ “”ಜಮ್ಮು ಕಾಶ್ಮೀರದ ಟ್ರೈಫರ್ಕೇಷನ್ (ಮೂರು ಭಾಗಗಳನ್ನಾಗಿ ವಿಭಜಿಸುವುದನ್ನು) ಮಾಡಿದರೆ ಅದು ಈ ಭಾಗಕ್ಕೆ ದುರಂತಮಯವಾಗಲಿದೆ” ಎಂದು ಹೇಳಿದ್ದರು. ಇದೇನೇ ಇದ್ದರೂ ಅತ್ತ ಲಡಾಖ್ ಪ್ರದೇಶವೂ ಮೊದಲಿನಿಂದಲೂ ಕೇಂದ್ರಾಡಳಿತಕ್ಕೆ ಒಳಪಡುವ ಆಸಕ್ತಿ ತೋರಿಸುತ್ತಾ ಬಂದಿದೆ.
ಸುಲಭಸಾಧ್ಯವೇ?: ಜಮ್ಮು, ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕಿಸುವುದು ಅಷ್ಟು ಸುಲಭವೂ ಅಲ್ಲ. ಏಕೆಂದರೆ ಈ ನಿರ್ಧಾರವು ಆರ್ಟಿ ಕಲ್ 370ರ ಅಸ್ತಿತ್ವದ ಮೇಲೆ ಅವಲಂಬಿತವಾಗಿದೆ. ಆರ್ಟಿಕಲ್ 370 ತೆರವಾದರೆ ಮಾತ್ರ ಜಮ್ಮು-ಕಾಶ್ಮೀರದ ಗಡಿಯನ್ನು ಮರುರಚಿಸಲು ಸಂಸತ್ತಿಗೆ ಸಾಧ್ಯವಾಗುತ್ತದೆ. ಇದೇನೂ ಅಸಾಧ್ಯ ಕೆಲಸವಲ್ಲವಾದರೂ, ತುಸು ಸಮಯವಂತೂ ಹಿಡಿಯುತ್ತದೆ.
ಮೂರೂ ಪ್ರದೇಶಗಳ ನಡುವೆ ಇಲ್ಲ ತಾಳಮೇಳ
ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರಾಂತ್ಯಗಳು ಧರ್ಮ ಮತ್ತು ಆಚರಣೆಗಳಲ್ಲಿ ಪರಸ್ಪರ ಭಿನ್ನವಾಗಿ ಇವೆ. ಬೌದ್ಧ ಬಾಹುಳ್ಯವಿರುವ ಲದಾಖ್ ಅಂತೂ ಅನೇಕ ವರ್ಷಗಳಿಂದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಾ ಬಂದಿದೆ. ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಆಡಳಿತವು ಲಡಾಖ್ಗಾಗಿ ಪ್ರತ್ಯೇಕ ವಿಭಾಗವನ್ನು ಸೃಷ್ಟಿಸಿತು. ಲಡಾಖ್ನಲ್ಲೀಗ ಜಮ್ಮು-ಕಾಶ್ಮೀರಕ್ಕೆ ಸಮಾನಾಂತರವಾದ ಪ್ರತ್ಯೇಕ ಡಿವಿಷನಲ್ ಕಮಿಷನರ್ ಮತ್ತು ರೆವೆನ್ಯೂ ಡಿವಿಷನ್ ಇದೆ.
ಇತ್ತ ಜಮ್ಮು ಪ್ರದೇಶದಲ್ಲಿ ಹಿಂದೂ ಬಾಹುಳ್ಯವಿದ್ದು, ಈ ಪ್ರದೇಶದ ನಿವಾಸಿಗಳು ಭಾರತದ ಭಾಗವಾಗಲು ಉತ್ಸುಕರಾಗಿದ್ದಾರೆ. ಈ ಪ್ರದೇಶದಲ್ಲಿ ಮೊದಲಿನಿಂದಲೂ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿಗೆ ಜನ ಜಾಗ ಕೊಟ್ಟಿಲ್ಲ. ಮೊದಲೆಲ್ಲ ಇಲ್ಲಿ ಕಾಂಗ್ರೆಸ್ನ ಪಾರಮ್ಯವಿತ್ತಾದರೂ, ಈಗ ಅದರ ಜಾಗದಲ್ಲಿ ಬಿಜೆಪಿ ಬಂದಿದೆ. ಇತ್ತ ಮುಸ್ಲಿಂ ಬಾಹುಳ್ಯವಿರುವ ಕಾಶ್ಮೀರ ಭಾಗದಲ್ಲಷ್ಟೇ ಪಾಕ್ ಪರ ಅಥವಾ ಪ್ರತ್ಯೇಕ ರಾಷ್ಟ್ರದ ಧ್ವನಿಗಳು ಕೇಳಸುವುದು. ಈ ಮೂರೂ ಪ್ರದೇಶಗಳು ಪ್ರತ್ಯೇಕ ವಾಗುವುದರಲ್ಲಿಯೇ ಅವುಗಳ ಹಿತವಿದೆ ಎನ್ನುವುದು ಪರಿಣತರವಾದ.
ಅಮರನಾಥ ಯಾತ್ರೆಯ ರಕ್ತಚರಿತ್ರೆ
1991- 1995: ಉಗ್ರ ಸಂಘಟನೆಗಳ ಬೆದರಿಕೆಯಿಂದಾಗಿ ಈ ಅವಧಿಯಲ್ಲಿ ಯಾತ್ರೆಯನ್ನೇ ನಿಷೇಧಿಸಲಾಗಿತ್ತು.
1996: ತೀವ್ರ ಹಿಮಪಾತದಿಂದಾಗಿ ಆ ವರ್ಷ 250 ಯಾತ್ರಿಗಳು ಮೃತಪಟ್ಟರು. ಚುನಾವಣಾ ಗುಂಗಲ್ಲಿದ್ದ ಜಮ್ಮು-ಕಾಶ್ಮೀರ ಸರ್ಕಾರದ ವೈಫಲ್ಯ ಈ ದುರಂತದಲ್ಲಿ ಎದ್ದುಕಂಡಿತು.
2000: ಲಷ್ಕರ್-ಎ-ತಯ್ಯಬಾ ಗುಂಡಿನ ದಾಳಿಗೆ 32 ಜನರ ಬಲಿ(21 ಹಿಂದೂ ಯಾತ್ರಾರ್ಥಿ ಗಳು, 3 ಮುಸ್ಲಿಂ ನಾಗರಿಕರು ಮತ್ತು 3 ಸೈನಿಕರು)
2001: ಉಗ್ರರ ದಾಳಿಗೆ 13 ಯಾತ್ರಾರ್ಥಿಗಳ ಸಾವು
2002: ಲಷ್ಕರ್-ಎ-ತಯ್ಯಬಾ ಉಗ್ರರ ದಾಳಿಗೆ 11 ಯಾತ್ರಾರ್ಥಿಗಳ ಸಾವು
2006: ರಾಜಸ್ಥಾನ ಮೂಲದ ಯಾತ್ರಾ ರ್ಥಿ ಗಳು ತೆರಳುತ್ತಿದ್ದ ಬಸ್ನ ಮೇಲೆ ಶ್ರೀನಗರದಲ್ಲಿ ಉಗ್ರರಿಂದ ದಾಳಿ. ಐದು ಜನರಿಗೆ ಗಾಯ
2017: 7 ಯಾತ್ರಾರ್ಥಿಗಳು (6 ಮಹಿಳೆಯರನ್ನೊಳಗೊಂಡು) ಉಗ್ರರ ದಾಳಿಗೆ ಬಲಿ.
ಈ ವಿಭಾಗದಿಂದ ಇನ್ನಷ್ಟು
-
ಹೊಸದಿಲ್ಲಿ: ಇಡೀ ದೇಶದ ಜನಸಾಮಾನ್ಯರ ಜೇಬು ಸುಡುತ್ತಿರುವ ಈರುಳ್ಳಿ ದರದ ಬಿಸಿ ಪ್ರಭಾವ ಕೇಂದ್ರ ಹಣಕಾಸು ಸಚಿವೆಗೇ ತಟ್ಟುತ್ತಿಲ್ಲವೇ? ಹೌದು, ಇಂಥದ್ದೊಂದು ಪ್ರಶ್ನೆ...
-
ಹೊಸದಿಲ್ಲಿ/ಲಕ್ನೋ: ಉನ್ನಾವ್ನಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿದ ಬಗ್ಗೆ ರಾಜ್ಯಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ...
-
ವಯನಾಡ್/ಕಲ್ಲಿಕೋಟೆ: ಸೈನಿಕನ ಎದೆಯ ಮೇಲೆ ಪದಕಗಳು ಇರುವಂತೆ ತಮ್ಮ ವಿರುದ್ಧ ಕೇಸುಗಳು ಇವೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ....
-
ನಾಗ್ಪುರ: ಪ್ರಾಕೃತಿಕ ವಿಪತ್ತು ಸಂಭವಿಸಿದ್ದರಿಂದ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹಾನಿಗೆ ಒಳಗಾಗಿದ್ದು ಭಾರತ. 2018ನೇ ಸಾಲಿಗೆ ಸಂಬಂಧಿಸಿದ ಮಾಹಿತಿ ಇದಾಗಿದೆ....
-
ಹೊಸದಿಲ್ಲಿ: ಕಳೆದವರ್ಷ ಪರೀಕ್ಷಾ ಸಂದರ್ಭದಲ್ಲಿ ಪ್ರಧಾನಿ ಮೋದಿ, ಮನ್ ಕೀ ಬಾತ್ನಲ್ಲಿ ಪರೀಕ್ಷೆಗೆ ಹೆದರದಿರಿ ಎಂಬ ಸಂದೇಶ ನೀಡಿದ್ದರು. ಮುಂದೆ ವಿದ್ಯಾರ್ಥಿಗಳೊಂದಿಗೆ...
ಹೊಸ ಸೇರ್ಪಡೆ
-
ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...
-
ದಿ ಲೀಡರ್ ಒಂದು ಅಸಂಗತ ನಾಟಕ . ರೊಮೇನಿಯಾದ ಲೇಖಕ ಯುಜಿನೊ ಐನೆಸ್ಕೊ ಈ ನಾಟಕದ ಕತೃ. 1953ರಲ್ಲಿ ಬರೆದ ನಾಟಕವಿದು. ದೇಶ , ಕಾಲದ ಹಂಗಿಲ್ಲದೆ ನಿರಂತರವಾಗಿ ಹರಿಯುವ ಸೆಳೆತವೇ...
-
ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಕಜೆ ಈಶ್ವರ ಭಟ್ಟರು 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ....
-
ಸನ್ನಿಧಿ ಟಿ.ರೈ ಪೆರ್ಲ ರಚಿಸಿದ ಎರಡನೇ ಯಕ್ಷಗಾನ ಪ್ರಸಂಗ ಸೂರ್ಯಪ್ರಭೆ. ಕತೆಯೊಂದರ ಆಧಾರದಲ್ಲಿ ರಚಿತವಾದ ಪುಟ್ಟ ಯಕ್ಷಗಾನ ಕೃತಿ ಇದು. ಇದರಲ್ಲಿ ಬರುವ ಪಾತ್ರಗಳು...
-
ನಡುತಿಟ್ಟು ಪರಂಪರೆಯ ಹಿರಿಯ ಸ್ತ್ರೀವೇಷದಾರಿ ಮೊಳಹಳ್ಳಿ ಕೃಷ್ಣ ನಾಯ್ಕರಿಗೆ ಅವರ ಹುಟ್ಟೂರು ಮೊಳಹಳ್ಳಿಯಲ್ಲಿ ಹುಟ್ಟೂರ ಅಭಿಮಾನಿಗಳು ಡಿ.7ರಂದು ಸಾರ್ವಜನಿಕ...