ಮೋದಿ ಹೊಗಳಿಕೆ: ನ್ಯಾ. ಮಿಶ್ರಾ ವಿರುದ್ಧ ಕಿಡಿ
Team Udayavani, Feb 27, 2020, 1:52 AM IST
ಹೊಸದಿಲ್ಲಿ: ಪ್ರಧಾನಿ ಮೋದಿ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾ| ಅರುಣ್ ಮಿಶ್ರಾ, ಅತಿಯಾಗಿ ಹೊಗಳಿದ್ದು ತಪ್ಪು ಎಂದು ಬಿಎಐ (ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ) ಅಧ್ಯಕ್ಷ ಲಲಿತ್ ಭಾಸಿನ್ ಹೇಳಿದ್ದಾರೆ. ನ್ಯಾಯಮೂರ್ತಿಗಳು ಯಾವಾಗಲೂ ಕಾರ್ಯಾಂಗದೊಂದಿಗೆ ಗೌರವಯುತ ಅಂತರ ಕಾಯ್ದುಕೊಂಡಿರಬೇಕು. ನ್ಯಾಯಮೂರ್ತಿಗಳಾಗಿ ಯೋಗ್ಯರಾಗಿರುವುದರ ಜತೆಗೆ, ಸಾರ್ವಜನಿಕವಾಗಿ ಆ ಭಾವನೆ ಬರಿಸಬೇಕು. ಇಲ್ಲವಾದರೆ ಜನರಿಗೆ ಅನುಮಾನ ಬರುತ್ತದೆ ಎಂದು ಹೇಳಿದ್ದಾರೆ.
ಸರ್ವೋಚ್ಚ ನ್ಯಾಯಮೂರ್ತಿಗಳು, ಕಾರ್ಯಾಂಗದ ವಿರುದ್ಧದ ಪ್ರಕರಣಗಳನ್ನೂ ಇತ್ಯರ್ಥಪಡಿಸಬೇಕಾಗಿರುತ್ತದೆ. ಅಂತಹವರು ಹೀಗೆ ಅತಿಯಾಗಿ ಹೊಗಳುವುದು ಜನರ ನಂಬಿಕೆಯನ್ನು ಅಲ್ಲಾಡಿಸುತ್ತದೆ. ತಾವು ಪಕ್ಷಪಾತಿಯಲ್ಲ ಎನ್ನುವಂತೆ ನ್ಯಾಯಮೂರ್ತಿಗಳ ವರ್ತನೆಯಿರಬೇಕು ಎಂದು ಭಾಸಿನ್ ಹೇಳಿದ್ದಾರೆ.
ಫೆ.22ರಂದು ನಡೆದ ಅಂತಾರಾಷ್ಟ್ರೀಯ ನ್ಯಾಯಾಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲೇ ನ್ಯಾ| ಮಿಶ್ರಾ ಅವರು ‘ಮೋದಿ ದೂರದೃಷ್ಟಿಯುಳ್ಳ ನಾಯಕ, ಜಾಗತಿಕ ವಾಗಿ ಚಿಂತಿಸಿ ಸ್ಥಳೀಯವಾಗಿ ಜಾರಿ ಮಾಡುವ ನಾಯಕ’ ಎಂದು ಹೊಗಳಿದ್ದರು.