ಮಧ್ಯಪ್ರದೇಶ: “ಕೈ’ಬಿಟ್ಟ ಗೆಲುವು
Team Udayavani, May 24, 2019, 11:58 AM IST
ಮಧ್ಯಪ್ರದೇಶದಲ್ಲಿ ಐದು ತಿಂಗಳ ಹಿಂದಷ್ಟೇ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್, ಲೋಕಸಭೆಯಲ್ಲಿ ಇದೇ ಟ್ರೆಂಡ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 29 ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಉಳಿದ ಎಲ್ಲ 28 ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ. 2014 ರಲ್ಲಿ ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಮಲ್ನಾಥ್ ಪುತ್ರ ನಕುಲ್ ನಾಥ್ ಮಾತ್ರವೇ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ನ ಘಟಾನುಘಟಿ ಅಭ್ಯರ್ಥಿಗಳೇ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.
ಭೋಪಾಲದಲ್ಲಿ ಬಿಜೆಪಿ ವಿವಾದಿತ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ಗೆ ಸೋಲಿನ ರುಚಿ ತೋರಿಸಿದ್ದಾರೆ. ಇನ್ನು ಗುಣಾದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಶೇ. 41.4 ಮತಗಳಿಸಿದ್ದು, ಬಿಜೆಪಿಯ ಕೆ.ಪಿ.ಯಾದವ್ ವಿರುದ್ಧ ಸೋಲುಂಡಿದ್ದಾರೆ.
ಗುಣಾ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದೂ 4 ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಕಾಂಗ್ರೆಸ್ಗೆ ಭಾರಿ ಮುಜುಗರದ ಸಂಗತಿಯಾಗಿದೆ. ಅಷ್ಟೇ ಅಲ್ಲ, ಇದು ಕಮಲ್ ನಾಥ್ ನಾಯಕತ್ವದ ಮೇಲೂ ಒಂದು ಕಪ್ಪುಚುಕ್ಕೆಯಾಗುವ ಸಾಧ್ಯತೆಯಿದೆ.
ಗೆದ್ದ ಪ್ರಮುಖರು
ನಕುಲ್ನಾಥ್ (ಕಾಂಗ್ರೆಸ್), ಛಿಂದ್ವಾರಾ
ಪ್ರಜ್ಞಾ ಸಿಂಗ್ (ಬಿಜೆಪಿ), ಭೋಪಾಲ
ಸೋತ ಪ್ರಮುಖರು
ಜ್ಯೋತಿರಾದಿತ್ಯ (ಕಾಂಗ್ರೆಸ್), ಗುಣಾ
ದಿಗ್ವಿಜಯ್ ಸಿಂಗ್ (ಕಾಂಗ್ರೆಸ್), ಭೋಪಾಲ