ಶಿವಸೈನಿಕರ ಬಂಡಾಯ; ಶಿವಸೇನೆ ಇಬ್ಭಾಗ? 56 ವರ್ಷಗಳಲ್ಲಿ ಪಕ್ಷಕ್ಕೆ 4ನೇ ಬಾರಿ ಬಂಡಾಯದ ಬಿಸಿ
40ಕ್ಕೂ ಹೆಚ್ಚು ಶಾಸಕರು ತಮ್ಮೊಂದಿಗಿದ್ದಾರೆ ಎಂದ ಶಿಂಧೆ
Team Udayavani, Jun 23, 2022, 7:00 AM IST
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಆಗುತ್ತಿರುವ ಸಂಚಲನವನ್ನು ನೋಡಿದರೆ, ಬಾಳಾ ಸಾಹೇಬ್ ಠಾಕ್ರೆ ಅವರಿಂದ ಸ್ಥಾಪನೆಗೊಂಡ ಶಿವಸೇನೆ ಎರಡು ಹೋಳಾಗುವ ಹಂತಕ್ಕೆ ತಲುಪಿರುವುದರ ಸ್ಪಷ್ಟ ಸುಳಿವು ಸಿಗುತ್ತಿದೆ.
ಒಂದು ಕಾಲದಲ್ಲಿ ಠಾಕ್ರೆ ಅವರ ಬಲಗೈ ಬಂಟನಾಗಿದ್ದ ಶಾಸಕ ಏಕನಾಥ ಶಿಂಧೆಯವರು ಈಗ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧವೇ ಬಂಡಾಯವೆದ್ದಿರುವುದು, ತಮಗೆ 40ಕ್ಕೂ ಹೆಚ್ಚು ಶಾಸಕರ ಬೆಂಬಲ ಇದೆ ಎಂದು ಹೇಳಿಕೊಂಡಿರುವುದು ಇದಕ್ಕೆ ಕಾರಣ.
ಶಿವಸೇನೆಯ 56 ವರ್ಷಗಳ ಇತಿಹಾಸದಲ್ಲಿ 4 ಬಾರಿ “ಬಂಡಾಯದ ಬಿಸಿ’ ಪಕ್ಷವನ್ನು ತಟ್ಟಿತ್ತು. ಬಾಳಾಠಾಕ್ರೆ ಅವರ ಅವಧಿಯಲ್ಲಿ ಮೂರು ಬಾರಿ ಪ್ರಮುಖ ನಾಯಕರು ಬಂಡಾಯವೆದ್ದಿದ್ದರೆ, ಉದ್ಧವ್ ಇದೇ ಮೊದಲ ಬಾರಿಗೆ ಇಂಥದ್ದೊಂದು ಸನ್ನಿವೇಶವನ್ನು ಎದುರಿಸಿದ್ದಾರೆ. ವಿಶೇಷವೆಂದರೆ, ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವಾಗ ಶಾಸಕರು ಬಂಡಾಯವೆದ್ದು ಸರ್ಕಾರದ ಪತನಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲು. ಹಿಂದಿನ ಎಲ್ಲ “ಬಂಡಾಯ’ದ ಸಮಯದಲ್ಲೂ ಪಕ್ಷ ಅಧಿಕಾರದಲ್ಲಿರಲಿಲ್ಲ.
1985ರಲ್ಲಿ ಜಾರಿಗೆ ಬಂದಿರುವ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಒಂದು ಪಕ್ಷದಿಂದ ನಿಗದಿತ ಸಂಖ್ಯೆಯ ಶಾಸಕರು ಬೇರ್ಪಟ್ಟು ಹೊಸ ಪಕ್ಷ ರಚನೆ, ಮತ್ತೂಂದು ಪಕ್ಷದ ಜತೆಗೆ ಸೇರ್ಪಡೆಗೆ ಆಸಕ್ತಿ ತೋರಿಸಿದರೆ ಅದಕ್ಕೆ ಅವಕಾಶ ಇದೆ. ಸದ್ಯದ ಪ್ರಕರಣದಲ್ಲಿ ಶಿಂಧೆ ಹೇಳಿಕೊಂಡಿರುವಂತೆ 40 ಶಾಸಕರ ಬೆಂಬಲವಿರುವುದು ನಿಜವೇ ಆಗಿದ್ದರೆ ಶಿವಸೇನೆಯ ಹಾಲಿ ನಾಯಕತ್ವ ನೀಡುವ ಯಾವುದೇ ವಿಪ್, ಆದೇಶಗಳು ಅನ್ವಯ ಆಗುವುದಿಲ್ಲ. ಜತೆಗೆ ಅವರನ್ನು ಅನರ್ಹಗೊಳಿಸಿಸುವ ಆದೇಶ ನೀಡಿದರೂ ಮೂರನೇ ಎರಡರಷ್ಟು ಶಾಸಕರು ಹೊಸ ಗುಂಪಿನಲ್ಲಿದ್ದರೆ ಅದೂ ಅನ್ವಯಿಸುವುದೇ ಇಲ್ಲ.
ಈ ಹಿಂದೆ ಕೂಡ ಶಿವಸೇನೆಯಿಂದ ಇಬ್ಬರು ಪ್ರಮುಖ ನಾಯಕರು ಪಕ್ಷ ತ್ಯಜಿಸಿದಾಗ ಪಕ್ಷ ಹೋಳಾಗುವ ಲಕ್ಷಣಗಳು ಕಂಡು ಬಂದಿದ್ದರೂ, ಆ ರೀತಿ ಆಗಿರಲಿಲ್ಲ.
ಛಗನ್ ಭುಜಬಲ್:
ಸದ್ಯ ಎನ್ಸಿಪಿಯಲ್ಲಿ ಇರುವ ಛಗನ್ ಭುಜಬಲ್ ಅವರು 1991ರ ಡಿಸೆಂಬರ್ನಲ್ಲಿ ಶಿವಸೇನೆ ತ್ಯಜಿಸುವ ಸಂದರ್ಭದಲ್ಲಿ 52 ಶಾಸಕರ ಪೈಕಿ 17 ಮಂದಿ ತಮ್ಮ ಬೆಂಬಲಕ್ಕಿದ್ದಾರೆ ಎಂದು ಬೆದರಿಕೆ ಹಾಕಿದ್ದರು. ಹಿರಿಯ ಮುಖಂಡ ಮನೋಹರ್ ಜೋಶಿ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದುದು ಅವರ ಅತೃಪ್ತಿಗೆ ಕಾರಣವಾಗಿತ್ತು. ಅವರ ಜತೆಗೆ 16 ಶಾಸಕರೂ ಶಿವಸೇನೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಬಾಳ್ ಠಾಕ್ರೆ ಅವರು ಭುಜ್ಬಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.
ನಾರಾಯಣ ರಾಣೆ:
ಕೇಂದ್ರ ಸಚಿವರಾಗಿರುವ ನಾರಾಯಣ ರಾಣೆ ಮತ್ತು ಹಾಲಿ ಸಿಎಂ ಉದ್ಧವ್ ಠಾಕ್ರೆ ನಡುವೆ 2005ರ ಜುಲೈನಲ್ಲಿ ಶಿವಸೇನೆ ನಾಯಕತ್ವಕ್ಕಾಗಿ ಗುದ್ದಾಟ ನಡೆದಿತ್ತು. ರಾಣೆ ಆಗ ಇದ್ದ 62 ಶಾಸಕರ ಪೈಕಿ 40 ಮಂದಿಯನ್ನು ಬಳಸಿಕೊಂಡು ಪ್ರತ್ಯೇಕ ಪಕ್ಷ ರಚಿಸಲು ಮುಂದಾಗಿದ್ದರು. ಆದರೆ, ಪ್ರಯತ್ನವನ್ನು ಶಿವಸೇನೆ ವಿಫಲಗೊಳಿಸಿತ್ತು. ಅಂತಿಮವಾಗಿ ನಾರಾಯಣ ರಾಣೆ ತಮ್ಮ 12 ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ ಸೇರಿದ್ದರು. ನಂತರ, ಶಿವಸೇನೆಗೆ ಶಾಕ್ ಎದುರಾಗಿದ್ದು 2006ರಲ್ಲಿ. ಆಗ ಉದ್ಧವ್ ಅವರ ಸೋದರ ಸಂಬಂಧಿ ರಾಜ್ ಠಾಕ್ರೆ ಅವರು ಪಕ್ಷ ತೊರೆದು, ಮಹಾರಾಷ್ಟ್ರ ನವನಿರ್ಮಾಣ ಸೇನಾ(ಎಂಎನ್ಎಸ್) ಎಂಬ ಹೊಸ ಪಕ್ಷ ಸ್ಥಾಪಿಸಿದರು.
ಶಿವಸೇನೆ ಹಿಂದಿನ ಸಂದರ್ಭದಲ್ಲಿ ಹೋಳಾಗದಿದ್ದರೂ, ಜನಬಲ ಇರುವ ನಾಯಕರನ್ನು ಕಳೆದುಕೊಂಡದ್ದು ಸುಳ್ಳಲ್ಲ. ಹೀಗಾಗಿ, ಸದ್ಯದ ಬೆಳವಣಿಗೆಯೂ ಅದಕ್ಕೆ ಪ್ರತಿಕೂಲವಾಗಿಯೇ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.
ಆ “ಮೂವರು’ ಸೂತ್ರಧಾರರು ಯಾರು?
ಆರಂಭದಲ್ಲಿ ಮಹಾರಾಷ್ಟ್ರದಿಂದ ಬಂಡಾಯ ಶಾಸಕರನ್ನು ಗುಜರಾತ್ನ ಸೂರತ್ಗೆ ಕರೆಸಿಕೊಂಡು, ಅಲ್ಲಿನ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಮಂಗಳವಾರ ರಾತ್ರೋರಾತ್ರಿ ಎಲ್ಲ ಶಾಸಕರನ್ನೂ ಅಲ್ಲಿಂದ ಶಿಫ್ಟ್ ಮಾಡಿ, ವಿಮಾನದ ಮೂಲಕ ಅಸ್ಸಾಂನ ಗುವಾಹಟಿಗೆ ಕರೆದೊಯ್ಯಲಾಯಿತು. ಈ ಎಲ್ಲ ಪ್ರಕ್ರಿಯೆಗಳ ಹಿಂದೆ “ಮೂವರು ಸೂತ್ರಧಾರರು’ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಸೂರತ್ನಲ್ಲಿ ಶಾಸಕರಿಗೆ ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದು ಗುಜರಾತ್ ಬಿಜೆಪಿ ಘಟಕದ ಮುಖ್ಯಸ್ಥ ಸಿ.ಆರ್.ಪಾಟೀಲ್. ಬಂಡಾಯ ಶಾಸಕರು ಗುವಾಹಟಿ ತಲುಪುತ್ತಿದ್ದಂತೆ, ಏರ್ಪೋರ್ಟ್ಗೆ ಧಾವಿಸಿ ಅವರೆಲ್ಲರನ್ನು ಸ್ವಾಗತಿಸಿದ್ದು ಅಸ್ಸಾಂನ ಬಿಜೆಪಿ ಶಾಸಕ ಸುಶಾಂತ ಬೋರ್ಗೊಹೈನ್. ಇದಾದ ಬಳಿಕ ಶಾಸಕರು ರ್ಯಾಡಿಸನ್ ಹೋಟೆಲ್ ಪ್ರವೇಶಿಸಿದ ಸ್ವಲ್ಪ ಹೊತ್ತಲ್ಲೇ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೂಡ ಅಲ್ಲಿಗೆ ಭೇಟಿ ನೀಡಿ, ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎನ್ಸಿಪಿ, ಕಾಂಗ್ರೆಸ್ ಬೇಸರ ತಂದಿದೆ
ಶಿವಸೇನೆ ನಾಯಕತ್ವದ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ. ಆದರೆ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಎನ್ಸಿಪಿ ಮತ್ತು ಕಾಂಗ್ರೆಸ್ ಕಾರ್ಯನೀತಿಯು ಬೇಸರತಂದಿದೆ ಎಂದು ಶಿಂಧೆ ಜತೆ ಬಂಡಾಯವೆದ್ದಿರುವ ಶಿವಸೇನೆ ಸಚಿವ ಸಂದೀಪನ್ ಭೂಮಾರೆ ಹೇಳಿದ್ದಾರೆ. “ನಮ್ಮ ಯಾವುದೇ ಪ್ರಸ್ತಾವನೆಗೆ ಎನ್ಸಿಪಿ ಮತ್ತು ಕಾಂಗ್ರೆಸ್ ಸಚಿವರಿಂದ ಅನುಮತಿ ಪಡೆಯುವುದು ಕಷ್ಟವಾಗಿಬಿಟ್ಟಿದೆ. ಈ ವಿಚಾರವಾಗಿ ನಾವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೂ ದೂರು ಕೊಟ್ಟಿದ್ದೇವೆ. ಜನರ ಪ್ರತಿನಿಧಿಯಾಗಿ ನಾನು ಜನರ ಕುಂದುಕೊರತೆಯನ್ನು ಪರಿಹರಿಸಬೇಕಾಗುತ್ತದೆ. ಆದರೆ ಈ ಮೈತ್ರಿಯಿಂದಾಗಿ ನನಗೆ ಅದು ಸಾಧ್ಯವಾಗುತ್ತಿಲ್ಲ’ ಎಂದು ಸಂದೀಪನ್ ಹೇಳಿದ್ದಾರೆ.
ಶಿವಸೇನೆ ಕಾರ್ಯಕರ್ತರ ಪ್ರತಿಭಟನೆ:
ಏಕನಾಥ ಶಿಂಧೆ ಜತೆ ಬಂಡಾಯವೆದ್ದಿರುವ ಶಿವಸೇನೆ ಶಾಸಕರ ನಿಲುವನ್ನು ಖಂಡಿಸಿ ಶಿವಸೇನೆ ಕಾರ್ಯಕರ್ತರು ಬುಧವಾರ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಔರಂಗಾಬಾದ್ ಜಿಲ್ಲೆಯ ಕನಿಷ್ಠ 5 ಶಾಸಕರು ಶಿಂಧೆ ಜತೆಗಿದ್ದು, ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಪಕ್ಷಕ್ಕೆ ಒತ್ತಾಯಿಸಿದ್ದಾರೆ.
ಸಿಎಂ ಭೇಟಿಯಾದ ಪವಾರ್, ಸುಪ್ರಿಯಾ
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಪಕ್ಷದ ನಾಯಕರಾದ ಸುಪ್ರಿಯಾ ಸುಳೆ ಮತ್ತು ಜಿತೇಂದ್ರ ಅವ್ಹಾದ್ ಬುಧವಾರ ಸಂಜೆ ಸಿಎಂ ಉದ್ಧವ್ ಠಾಕ್ರೆ ನಿವಾಸಕ್ಕೆ ಭೇಟಿ ನೀಡಿ, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ತಾವು ತಮ್ಮ ಖಾಸಗಿ ನಿವಾಸವಾದ ಮಾತೋಶ್ರಿಗೆ ಶಿಫ್ಟ್ ಆಗುತ್ತಿರುವುದಾಗಿ ಉದ್ಧವ್ ಹೇಳಿದ್ದಾರೆ.
ಉದ್ಧವ್ ಠಾಕ್ರೆ ಪ್ಯಾಕಪ್; ಮಾತೋಶ್ರೀಗೆ ಶಿಫ್ಟ್
ಸರಕಾರ ಅಲುಗಾಡಲು ಶುರುವಾಗುತ್ತಿದ್ದಂತೆ, ಬುಧ ವಾರ ರಾತ್ರಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸ “ವರ್ಷ’ವನ್ನು ತೊರೆದು, ಉಪ ನಗರ ಬಾಂದ್ರಾದಲ್ಲಿರುವ “ಮಾತೋಶ್ರೀ’ಗೆ ವಾಪಸಾಗಿ ದ್ದಾರೆ. ಅಧಿಕೃತ ನಿವಾಸದಲ್ಲಿನ ಸಿಬಂದಿಯು ಸಿಎಂ ಅವ ರಿಗೆ ಸಂಬಂಧಿಸಿದ ಕೆಲವು ಸಾಮಗ್ರಿಗಳನ್ನು ದೊಡ್ಡ ಬ್ಯಾಗ್ ನಲ್ಲಿ ತುಂಬಿಸಿ ಹೊರಗೆ ಒಯ್ಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಅಪಹರಣ ಮಾಡಿದ್ದರು; ಇಂಜೆಕ್ಷನ್ ಕೊಟ್ಟಿದ್ದರು
ಶಿವಸೇನೆಯ ಶಾಸಕ ನಿತಿನ್ ದೇಶ್ಮುಖ್ ತಮ್ಮ ಬೆಂಬಲ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಎಂದು ಘೋಷಣೆ ಮಾಡಿದ್ದಾರೆ. ಹಾಲಿ ಬೆಳವಣಿಗೆ ಘೋಷಣೆಯಾದ ಬಳಿಕ ನಾಪತ್ತೆ ಯಾಗಿದ್ದ ದೇಶ್ಮುಖ್ ಅವರು ಭಿನ್ನಮತೀಯ ನಾಯಕ ಏಕನಾಥ ಶಿಂಧೆ ಜತೆಗೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಬುಧವಾರ ಮುಂಬಯಿಯಲ್ಲಿ ಪ್ರತ್ಯಕ್ಷರಾದ ನಿತಿನ್ “ನನ್ನನ್ನು ಅಪಹರಿಸಲಾಗಿತ್ತು ಮತ್ತು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ನೀಡಿದ್ದರು. ನನಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಹೇಳಿದ್ದರು. ಇವೆಲ್ಲದರ ಹೊರ ತಾಗಿಯೂ ನಾನು ಸೂರತ್ನಿಂದ ತಪ್ಪಿಸಿಕೊಂಡು ಬಂದೆ’ ಎಂದು ಮಾಧ್ಯಮದವರಿಗೆ ವಿವರಿಸಿದ್ದಾರೆ. ನಿತಿನ್ ದೇಶ್ಮುಖ್ ಅವರ ಪತ್ನಿ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು.
ಪಕ್ಷ ಮತ್ತು ಶಿವ ಸೈನಿಕರ ಉಳಿವಿಗಾಗಿ ಈ ಅಪವಿತ್ರ ಮೈತ್ರಿಯಿಂದ ಹೊರಬರಬೇಕಾದ ಅಗತ್ಯವಿದೆ. ಮಹಾರಾಷ್ಟ್ರದ ಹಿತಾಸಕ್ತಿಯಿಂದ ಈ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು.
– ಏಕನಾಥ್ ಶಿಂಧೆ, ಬಂಡಾಯ ನಾಯಕ
ಉದ್ಧವ್ ಅವರು ಬಾಳಾಸಾಹೇಬ್ರಿಂದಾಗಿ ಅನುವಂಶಿಕವಾಗಿ ಅಧಿಕಾರ ಪಡೆದವರು. ಮೋಸದಿಂದ ಸಿಎಂ ಆದ ಅವರು ಅತ್ಯಂತ ಕಳಪೆ ಸಿಎಂಗಳಲ್ಲಿ ಒಬ್ಬರು. ಈಗ ಅವರ ಬಳಿ ಅಧಿಕಾರವಿದ್ದರೂ ಪಕ್ಷದ ಮೇಲೆ ಹಿಡಿತವಿಲ್ಲ. ಅವರ ಶಾಸಕರೇ ಸರ್ಕಾರವನ್ನು ಒಪ್ಪುತ್ತಿಲ್ಲ.
– ಅಮಿತ್ ಮಾಳವಿಯ, ಬಿಜೆಪಿ ಮುಖಂಡ
ಇದು ಶಿವಸೇನೆಯ ಆಂತರಿಕ ವಿಚಾರ, ಅದನ್ನು ಪಕ್ಷವೇ ಬಗೆಹರಿಸಿಕೊಳ್ಳಬಲ್ಲದು. ಆದರೆ ಹಣ ಮತ್ತು ಏಜೆನ್ಸಿಗಳನ್ನು ಬಳಸಿಕೊಂಡು ಶಾಸಕರನ್ನು ಸೆಳೆಯುವಂಥ ಬಿಜೆಪಿಯ ನಡೆ ಸರಿಯಾದುದಲ್ಲ. ಶಿವಸೇನೆ ಉಳಿಯುತ್ತದೆ ಎಂಬ ನಂಬಿಕೆಯಿದೆ.
-ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ