ಮಣಿಪುರ ಫೇಕ್ ಎನ್ಕೌಂಟರ್; ಸುಪ್ರೀಂ ಕೋರ್ಟ್ ಗರಂ
Team Udayavani, May 19, 2018, 5:21 PM IST
ಹೊಸದಿಲ್ಲಿ : ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರಿಂದ ನಡೆದಿದೆ ಎನ್ನಲಾದ ನಕಲಿ ಎನ್ಕೌಂಟರ್ ಹತ್ಯೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ನ ವಿಶೇಷ ತನಿಖಾ ತಂಡ (ಎಸ್ಐಟಿ) ಬರೆದಿರುವ ಹಲವಾರು ಪತ್ರಗಳಿಗೆ ರಕ್ಷಣಾ ಸಚಿವಾಲಯ ಕವಡೆ ಕಿಮ್ಮತ್ತು ಕೂಡ ನೀಡದಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಜಸ್ಟಿಸ್ ಮದನ್ ಬಿ ಲೋಕೂರ್ ಮತ್ತು ಜಸ್ಟಿಸ್ ಯು ಯು ಲಿಲಿತ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ, ಮಾನವ ಹಕ್ಕುಗಳ ಆಯೋಗಕ್ಕೆ, ನ್ಯಾಯಾಂಗ ತನಿಖೆಗಳಿಗೆ ಮತ್ತು ಗುವಾಹಟಿ ಹೈಕೋರ್ಟ್ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಯನ್ನು ಜೂನ್ 30ರ ಒಳಗೆ ಮುಗಿಸುವಂತೆ ಎಸ್ಐಟಿಗೆ ಆದೇಶಿಸಿತು.
ಸಿಬಿಐ ಪರವಾಗಿ ಕೋರ್ಟಿನಲ್ಲಿ ಉಪಸ್ಥಿತರಿದ್ದ ಅಡಿಶನಲ್ ಸಾಲಿಸಿಟರ್ ಜನರಲ್ (ಎಎಸ್ಜಿ) ಮನೀಂದರ್ ಸಿಂಗ್ ಅವರು ತಾನು ಈ ವಿಷಯಗಳನ್ನು ರಕ್ಷಣಾ ಸಚಿವಾಲಯದೊಂದಿಗೆ ಎತ್ತಿಕೊಂಡು ಅದರ ಅಗತ್ಯ ಸಹಕಾರವನ್ನು ಪಡೆದುಕೊಳ್ಳುವುದಾಗಿ ಹೇಳಿದರು.