ಗಣರಾಜ್ಯ ದಿನಕ್ಕೆ ಹಲವು ವಿಶೇಷ
Team Udayavani, Jan 23, 2021, 7:31 AM IST
ಉತ್ತರ ಪ್ರದೇಶ ಸರಕಾರ ಸಿದ್ಧಗೊಳಿಸಿದ ರಾಮ ಮಂದಿರ ಟ್ಯಾಬ್ಲೋ.
ಪ್ರಸಕ್ತ ವರ್ಷದ ಗಣರಾಜ್ಯ ದಿನಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಕಳೆದ ವರ್ಷ ಕಾರ್ಯಕ್ರಮ ನಡೆದಂತೆ ಅದ್ದೂರಿಯಾಗಿ ಇರುವುದಿಲ್ಲ. ಈಗಾಗಲೇ ಸೇನೆಯ ವಿವಿಧ ವಿಭಾಗದ ಸಿಬಂದಿ ಪಥಸಂಚಲನದ ತಯಾರಿಯಲ್ಲಿ ತೊಡಗಿಸಿಕೊಂಡಿ ದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಕಾರ್ಯಕ್ರಮಗಳು ರದ್ದಾಗಿದ್ದರೆ, ಹೊಸತು ಸೇರ್ಪಡೆಯಾಗಿದೆ.
ಹೊಸ ವ್ಯವಸ್ಥೆ ಏನು? :
- ಫ್ರಾನ್ಸ್ನಿಂದ ಖರೀದಿಸಲಾಗಿರುವ ರಫೇಲ್ ಯುದ್ಧ ವಿಮಾನ ಮೊದಲ ಬಾರಿಗೆ ಗಣರಾಜ್ಯ ಪರೇಡ್ನಲ್ಲಿ ಭಾಗವಹಿಸಲಿದೆ. 36 ಯುದ್ಧ ವಿಮಾನಗಳ ಪೈಕಿ 11 ಈಗಾಗಲೇ ಐಎಎಫ್ ಬಳಿ ಇವೆ.
- ಫ್ಲೈಟ್ ಲೆಫ್ಟಿನೆಂಟ್ ಭಾವನಾ ಕಾಂತ್ ಅವರು ಐಎಎಫ್ನ ಟ್ಯಾಬ್ಲೋವನ್ನು ಮುನ್ನಡೆಸಲಿದ್ದಾರೆ. ಅವರು ದೇಶದ ವಾಯುಪಡೆಯ ಯುದ್ಧ ವಿಮಾನ ಹಾರಿಸುವ ಪೈಲಟ್ಗಳಲ್ಲೊಬ್ಬರು. ಟ್ಯಾಬ್ಲೋದಲ್ಲಿ ಹಗುರ ಯುದ್ಧ ವಿಮಾನ (ಎಲ್ಸಿಎ), ಹಗುರ ಹೆಲಿಕಾಪ್ಟರ್ (ಎಲ್ಸಿಎಚ್), ಸುಖೋಯ್-30 ಯುದ್ಧ ವಿಮಾನಗಳು ಇರಲಿವೆ.
- ಬಾಂಗ್ಲಾದೇಶದ ಸೇನೆಯ ತುಕಡಿ ಜ.26ರ ಪರೇಡ್ನಲ್ಲಿ ಭಾಗವಹಿಸಲಿದೆ. ಅದರಲ್ಲಿ ಒಟ್ಟು 122 ಯೋಧರು ಇರಲಿದ್ದಾರೆ. 2016ರಲ್ಲಿ ಫ್ರಾನ್ಸ್, 2017ರಲ್ಲಿ ಯುಎಇನ ಸೇನಾ ತುಕಡಿಗಳು ಪರೇಡ್ನಲ್ಲಿ ಭಾಗವಹಿಸಿದ್ದವು.
- ಅಯೋಧ್ಯೆಯ ರಾಮ ಮಂದಿರ ಮತ್ತು ರಾಮಾಯಣ ಅಂಶವನ್ನೊಳಗೊಂಡ ಟ್ಯಾಬ್ಲೋ ಉತ್ತರ ಪ್ರದೇಶವನ್ನು ಪ್ರತಿನಿಧಿಸಲಿದೆ.
ಯಾವ ಅಂಶಕ್ಕೆ ಕತ್ತರಿ :
- 53 ವರ್ಷಗಳಲ್ಲಿ ಮೊದಲ ಬಾರಿಗೆ ಗಣರಾಜ್ಯ ದಿನಕ್ಕೆ ವಿದೇಶಿ ರಾಷ್ಟ್ರದ ಮುಖ್ಯಸ್ಥರು ಭಾಗವಹಿಸುತ್ತಿಲ್ಲ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ರನ್ನು ಆಹ್ವಾನಿಸಲಾಗಿ ತ್ತಾದರೂ, ಸೋಂಕಿನ ಹಿನ್ನೆಲೆಯಲ್ಲಿ ಪ್ರವಾಸ ರದ್ದುಗೊಳಿಸಿದ್ದಾರೆ. 1952, 1953 ಮತ್ತು 1966ರಲ್ಲಿವಿದೇಶಿ ರಾಷ್ಟ್ರದ ಮುಖ್ಯಸ್ಥರು ಭಾಗವಹಿಸಿರಲಿಲ್ಲ.
- ಇಂಡಿಯಾ ಗೇಟ್ ಬಳಿ ಇರುವ ನ್ಯಾಶನಲ್ ಸ್ಟೇಡಿಯಂವರೆಗೆ ಮಾತ್ರ ಪಥ ಸಂಚಲನ ನಡೆಯಲಿದೆ. ಕೆಂಪು ಕೋಟೆಯವರೆಗೆ ಮಾತ್ರ ಟ್ಯಾಬ್ಲೋಗಳು ಪಥಸಂಚಲನದಲ್ಲಿ ಮುಂದುವರಿಯಲಿವೆ.
- ಕೇಂದ್ರೀಯ ಅರೆ ಸೇನಾ ಪಡೆಗಳ ಮೋಟರ್ ಸೈಕಲ್ನಲ್ಲಿ ಸಾಹಸ ಪ್ರದರ್ಶನ, ನಿವೃತ್ತ ಯೋಧರ ಮತ್ತು ಮಹಿಳೆಯರು ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿಲ್ಲ.
1,50,000
ಕಳೆದ ವರ್ಷದ ಅತಿಥಿಗಳು
25,000
ಪ್ರಸಕ್ತ ವರ್ಷ ನಿಗದಿ ಮಾಡಲಾಗಿರುವ ಅತಿಥಿಗಳು
200 ಈ ಬಾರಿ
ಮಾಧ್ಯಮ ಪ್ರತಿನಿಧಿಗಳಿಗೆ
15
ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇಲ್ಲ ಪ್ರವೇಶ, ಶಾಲಾ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ