ಅಣ್ಣಾಮಲೈಗೆ 500 ಕೋಟಿ ರೂ. ಪರಿಹಾರ ನೋಟಿಸ್
Team Udayavani, Apr 17, 2023, 6:55 AM IST
ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಡಿಎಂಕೆ ಕಾನೂನು ನೋಟಿಸ್ ನೀಡಿದ್ದು, ಅದರಲ್ಲಿ 500 ಕೋಟಿ ರೂ. ಪರಿಹಾರ ನೀಡಬೇಕು ಎಂದು ಎಚ್ಚರಿಕೆ ನೀಡಿದೆ.
ಜತೆಗೆ ಕ್ಷಮೆಯಾಚಿಸುವಂತೆ ಕೂಡ ಆಗ್ರಹಿಸಿದೆ. ಕೆಲ ದಿನಗಳ ಹಿಂದೆ ತಮಿಳುನಾಡು ಸಿಎಂ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಡಿಎಂಕೆ ವಿರುದ್ಧ ಮಾಡಿರುವ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
“ಡಿಎಂಕೆ ಫೈಲ್ಸ್’ ಹೆಸರಿನಲ್ಲಿ ಎಂ.ಕೆ.ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು “200 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ’ ಎಂದು ಅಣ್ಣಾಮಲೈ ಆರೋಪಿಸಿದ್ದರು. ಡಿಎಂಕೆ ಸಂಘಟನ ಕಾರ್ಯದರ್ಶಿ ಆರ್.ಎಸ್.ಭಾರತಿ ಅವರ ಸೂಚನೆ ಮೇರೆಗೆ ಹಿರಿಯ ನ್ಯಾಯವಾದಿ, ಡಿಎಂಕೆ ರಾಜ್ಯಸಭಾ ಸದಸ್ಯ ಪಿ.ವಿಲ್ಸನ್ ಅವರು ಅಣ್ಣಾಮಲೈ ಅವರಿಗೆ 10 ಪುಟಗಳ ನೋಟಿಸ್ ನೀಡಿದ್ದಾರೆ. “ಆರೋಪಗಳ ಕುರಿತ ವೀಡಿಯೋ ಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಬೇಕು,’ ಎಂದು ಆರ್.ಎಸ್.ಭಾರತಿ ಆಗ್ರಹಿಸಿದ್ದಾರೆ.