ಐಸಿಸ್ನತ್ತ ವಾಲಿದ ಮತ್ತಷ್ಟು ಕೇರಳಿಗರು
Team Udayavani, Jun 9, 2019, 6:00 AM IST
ನವದೆಹಲಿ: ಕೇರಳದಿಂದ ಐಸಿಸ್ ಉಗ್ರ ಸಂಘಟನೆಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೆಲ ದಿನಗಳ ಹಿಂದಷ್ಟೇ, ಐಸಿಸ್ಗೆ ಸೇರಲು ಪ್ರಚೋದಿಸುತ್ತಿದ್ದ ರಶೀದ್ ಅಬ್ದುಲ್ಲಾ ಅಫ್ಘಾನಿಸ್ತಾನದಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿರುವ ಮಧ್ಯೆಯೇ ಇನ್ನೂ ಆರು ಜನರು ಅಫ್ಘಾನಿಸ್ತಾನಕ್ಕೆ ತೆರಳಿ ಐಸಿಸ್ ಸೇರಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಇದೇ ವರ್ಷದ ಜನವರಿಯಲ್ಲಿ ಅಷ್ಫಾಕ್ ಮಜೀದ್ ಹಾಗೂ ಆತನ ಪತ್ನಿ ಮತ್ತು ನಾಲ್ವರು ಮಕ್ಕಳು ಐಸಿಸ್ಗೆ ಸೇರಿದ್ದಾರೆ ಎನ್ನಲಾಗಿದೆ. ಇವರು ಯುಎಇಗೆ ತೆರಳಿ, ಅಲ್ಲಿಂದ ಇರಾನ್ ಮೂಲಕ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಪ್ರಾಂತ್ಯವನ್ನು ಐಸಿಸ್ ನಿಯಂತ್ರಿಸುತ್ತಿದೆ.
ಇಬ್ಬರೂ ಮಳಪ್ಪುರಂನಲ್ಲಿನ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದು, ಸಹಪಾಠಿಗಳಾಗಿದ್ದರು. ಅಷ್ಫಾಕ್ ಮಳಪ್ಪುರಂನ ವೇಲಂಚೇರಿಯವನಾಗಿದ್ದು, ಆಕೆ ಕಲ್ಲಿಕೋಟೆಯ ಕುಟ್ಟಿಯಾಡಿ ಮೂಲದವಳಾಗಿದ್ದಾಳೆ.
ಆಕೆಯ ಕುಟುಂಬ ಅಷ್ಟೇನೂ ಧಾರ್ಮಿಕ ಹಿನ್ನೆಲೆಯದ್ದಲ್ಲದಿದ್ದರೂ, ಹೇಗೆ ಆಕೆ ಐಸಿಸ್ ಸಿದ್ಧಾಂತಕ್ಕೆ ಆಕರ್ಷಿತಳಾದಳು ಎಂಬುದು ಅಚ್ಚರಿಯ ಸಂಗತಿ ಎನ್ನಲಾಗಿದೆ. ಐಸಿಸ್ಗೆ ಸೇರುತ್ತಿದ್ದಂತೆಯೇ ಟೆಲಿಗ್ರಾಂ ಎಂಬ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ತಾಯಿಯೊಂದಿಗೆ ಮಾತನಾಡಿ, ನಾವು ಐಸಿಸ್ಗೆ ಸೇರಿರುವುದಾಗಿ ಹೇಳಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇನ್ನೂ ಐವರು ಐಸಿಸ್ಗೆ?: ಜನವರಿಯಲ್ಲೇ ಕಣ್ಣೂರಿನ ಎರಡು ಕುಟುಂಬ ಹಾಗೂ ಓರ್ವ ಅವಿವಾಹಿತನೂ ಅಫ್ಘಾನಿಸ್ತಾನದಲ್ಲಿ ಐಸಿಸ್ಗೆ ಸೇರಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ ಅನ್ವರ್ ಹಾಗೂ ಆತನ ಪತ್ನಿ ಮತ್ತು ಮೂರು ಮಕ್ಕಳು ಅಫ್ಘಾನಿಸ್ತಾನಕ್ಕೆ ಆಗಮಿಸುತ್ತಿದ್ದಂತೆಯೇ ಹತ್ಯೆಗೀಡಾಗಿದ್ದಾರೆ ಎನ್ನಲಾಗಿದೆ. ಆದರೆ ಸಾಜಿದ್ ಹಾಗೂ ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ನಿಜಾಮುದ್ದೀನ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೂಲಗಳ ಪ್ರಕಾರ 2016 ರಲ್ಲಿ ಕಾಸರಗೋಡು ಮತ್ತು ಪಾಲಕ್ಕಾಡ್ನಿಂದ ಸೇರಿದ್ದ 20 ಕ್ಕೂ ಹೆಚ್ಚು ಜನರ ಪೈಕಿ ಬಹುತೇಕ ಕೇರಳಿಗರು ಸತ್ತಿದ್ದಾರೆ ಎಂದು ಹೇಳಲಾಗಿದೆ. ಶಜೀರ್ ಮಂಗಳಶೆÏೕರಿ ಅಬ್ದುಲ್ಲಾ, ಹಫೀಜುದ್ದೀನ್, ಮರ್ವನ್, ಮುರ್ಶಿದ್, ರಶೀದ್ ಅಬ್ದುಲ್ಲಾ ಮತ್ತು ಯಾಹ್ಯಾ, ಕಣ್ಣೂರಿನ ಶಮೀರ್, ಶಾಜಿಲ್, ಅಬ್ದುಲ್ ಖಯೂಮ್ ಮತ್ತು ಮನಾಫ್ ಸತ್ತಿದ್ದಾರೆ ಎಂದು ಹೇಳಲಾಗಿದೆ.
ಶರಣಾಗುತ್ತೇನೆ ಎಂದ ಫಿರೋಜ್: ಸಿರಿಯಾಗೆ ತೆರಳಿ ಐಸಿಸ್ ಸೇರಿದ್ದ ಕಾಸರಗೋಡಿನ ಫಿರೋಜ್ ಶರಣಾಗಲು ಬಯಸಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ ಎರಡು ತಿಂಗಳುಗಳ ಹಿಂದೆ ಈತ ತನ್ನ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ್ದ. ವಾಪಸ್ ಕೇರಳಕ್ಕೆ ಬಂದರೆ ಯಾವ ರೀತಿ ಪ್ರಕರಣಗಳು ದಾಖಲಾಗುತ್ತವೆ ಎಂಬ ಬಗ್ಗೆ ಆತ ವಿಚಾರಣೆ ನಡೆಸಿದ್ದಾನೆ ಎನ್ನಲಾಗಿದೆ. ಶರಣಾಗಬೇಕು ಎಂಬ ಮನಸ್ಸಿದ್ದು, ಹೇಗೆ ಎಂಬುದು ತಿಳಿದಿಲ್ಲ ಎಂದೂ ಆತ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಸಿರಿಯಾದಲ್ಲಿ ಸದ್ಯ ಕೇವಲ ಒಬ್ಬಿಬ್ಬರು ಮಲಯಾಳಿಗಳು ಉಳಿದುಕೊಂಡಿದ್ದಾರೆ. ಐಸಿಸ್ ಇಲ್ಲಿ ತನ್ನ ನೆಲೆ ಕಳೆದುಕೊಂಡಿದ್ದು, ಇವರ ಜೀವನ ದುಸ್ತರವಾಗಿದೆ. ಊಟ ತಿಂಡಿಯೂ ಸರಿಯಾಗಿ ಸಿಗದಂಥ ಪರಿಸ್ಥಿತಿ ಈಗ ಸಿರಿಯಾಗೆ ತೆರಳಿ ಐಸಿಸ್ ಸೇರಿದವರ ಪಾಡಾಗಿದೆ ಎನ್ನಲಾಗಿದೆ.