We are united; 17 ಪ್ರತಿಪಕ್ಷಗಳ ಹೋರಾಟದ ಆರಂಭಕ್ಕೆ ವೇದಿಕೆಯಾದ ಪಾಟ್ನಾ
ಪ್ರಜಾಪ್ರಭುತ್ವ ಉಳಿಸಲು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ... ಜುಲೈನಲ್ಲಿ ಶಿಮ್ಲಾದಲ್ಲಿ...
Team Udayavani, Jun 23, 2023, 6:06 PM IST
ಪಾಟ್ನಾ: 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಬಲ ಹೋರಾಟಕ್ಕಾಗಿ ಬಿಜೆಪಿ ವಿರೋಧಿ 17 ಪಕ್ಷಗಳು ಪಾಟ್ನಾದಲ್ಲಿ ಶುಕ್ರವಾರ ಒಟ್ಟುಗೂಡಿ ಸಿಎಂ ನಿತೀಶ್ ಕುಮಾರ್ ನಿವಾಸದಲ್ಲಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದವು. ನಿತೀಶ್ ಅವರನ್ನು ಮೈತ್ರಿಕೂಟದ ಸಮನ್ವಯಕರನ್ನಾಗಿ ಮಾಡಲು ಸಭೆಯಲ್ಲಿ ಚರ್ಚೆ ನಡೆದಿದ್ದು, ಮುಂದಿನ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತಿದ್ದು, ಮಹತ್ವದ ಸಭೆ ಜುಲೈ 10 ರಿಂದ 12 ರವರೆಗೆ ಶಿಮ್ಲಾದಲ್ಲಿ ನಡೆಯಲಿದೆ.
ಸಭೆಯ ಬಳಿಕ ವಿರೋಧ ಪಕ್ಷಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವಿಧ ಪಕ್ಷಗಳ ನಾಯಕರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮಾತನಾಡಿ “ಈಗ ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ನರೇಂದ್ರ ಮೋದಿಯವರನ್ನು ಫಿಟ್ ಮಾಡುತ್ತೇನೆ. ಸದ್ಯಕ್ಕೆ ದೇಶದ ಪರಿಸ್ಥಿತಿ ಕಠೋರವಾಗಿದೆ. ಜುಲೈನಲ್ಲಿ ಶಿಮ್ಲಾದಲ್ಲಿ ನಾವು ಮತ್ತೆ ಸಭೆ ಸೇರಿ 2024 ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ರಾಜ್ಯಗಳಲ್ಲಿ ಕೆಲಸ ಮಾಡುವಾಗ ಒಟ್ಟಾಗಿ ಮುನ್ನಡೆಯಲು ಮುಂದಿನ ಕಾರ್ಯಸೂಚಿಯನ್ನು ಸಿದ್ಧಪಡಿಸುತ್ತೇವೆ ಎಂದರು.
“ಕರ್ನಾಟಕದಲ್ಲಿ ಹನುಮಂತನು ತನ್ನ ಗದೆಯಿಂದ ಬಿಜೆಪಿಯನ್ನು ಹೊಡೆದೋಡಿಸಿದನು, ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷವನ್ನು ಗೆಲ್ಲುವಂತೆ ಮಾಡಿದನು.” ಹನುಮಂತ ಈಗ ವಿರೋಧ ಪಕ್ಷದಲ್ಲಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲುವುದು ಖಚಿತ ಎಂದು ಲಾಲು ಭವಿಷ್ಯ ನುಡಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 2024ರಲ್ಲಿ ಬಿಜೆಪಿ ವಿರುದ್ಧ ಹೋರಾಡಲು ನಮ್ಮ ನಮ್ಮ ರಾಜ್ಯಗಳಲ್ಲಿ ಹೇಗೆ ಒಟ್ಟಾಗಿ ಮುನ್ನಡೆಯಬೇಕು ಎಂಬುದರ ಕುರಿತು ಕಾರ್ಯಸೂಚಿಯನ್ನು ಸಿದ್ಧಪಡಿಸಲು ನಾವು ಜುಲೈನಲ್ಲಿ ಶಿಮ್ಲಾದಲ್ಲಿ ಮತ್ತೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ‘ಭಾರತದ ಅಡಿಪಾಯದ ಮೇಲೆ ದಾಳಿ ನಡೆಯುತ್ತಿದೆ. ಪ್ರತಿಪಕ್ಷಗಳು ನಮ್ಯತೆಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ಸಾಮಾನ್ಯ ಸೈದ್ಧಾಂತಿಕ ಮೌಲ್ಯಗಳನ್ನು ಕಾಪಾಡುತ್ತವೆ ಎಂದರು.
ಪಶ್ಚಿಮ ಬಂಗಾಳ ಸಿಎಂ, ಟಿಎಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮಾತನಾಡಿ “ನಾವು ಒಗ್ಗಟ್ಟಾಗಿದ್ದೇವೆ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ.ಇತಿಹಾಸ ಇಲ್ಲಿಂದ ಪ್ರಾರಂಭವಾಯಿತು, ಬಿಜೆಪಿ ಇತಿಹಾಸವನ್ನು ಬದಲಾಯಿಸಬೇಕು. ಬಿಹಾರದಿಂದ ಇತಿಹಾಸವನ್ನು ಉಳಿಸಬೇಕು. ನಮ್ಮ ಉದ್ದೇಶ ಈ ಫ್ಯಾಸಿಸ್ಟ್ ಸರ್ಕಾರದ ವಿರುದ್ಧವಾಗಿದೆ ಎಂದರು.
ಜಂಟಿ ವಿರೋಧ ಪಕ್ಷದ ಸಭೆಯ ನಂತರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮಾತನಾಡಿ”ದೇಶವನ್ನು ವಿನಾಶದಿಂದ ರಕ್ಷಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರಲು ನಾವು ಭೇಟಿಯಾಗಿದ್ದೇವೆ. ನಾನು ಮತ್ತು ಮೆಹಬೂಬಾ ಮುಫ್ತಿ ಪ್ರಜಾಪ್ರಭುತ್ವ ಬಲಿಯಾಗಿರುವ ದೇಶದ ಭಾಗಕ್ಕೆ ಸೇರಿದವರು. ನಿನ್ನೆ ಅಮೆರಿಕದಲ್ಲಿ ಶ್ವೇತಭವನದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಈ ಪ್ರಜಾಪ್ರಭುತ್ವವು ಜಮ್ಮು ಮತ್ತು ಕಾಶ್ಮೀರವನ್ನು ಏಕೆ ತಲುಪುವುದಿಲ್ಲ ಎಂದು ಪ್ರಶ್ನಿಸಿದರು.
“ನಾನು ನನ್ನನ್ನು ಪ್ರತಿಪಕ್ಷ ಎಂದು ಪರಿಗಣಿಸುವುದಿಲ್ಲ, ಆದರೆ, ದೇಶದ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ದಾಳಿ ಮಾಡುವ ಮತ್ತು ಸರ್ವಾಧಿಕಾರವನ್ನು ಸ್ಥಾಪಿಸಲು ಪ್ರಯತ್ನಿಸುವವರನ್ನು ನಾವೆಲ್ಲರೂ ವಿರೋಧಿಸುತ್ತೇವೆ” ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು. ಪಾಟ್ನಾ ಸಭೆಯು ಉತ್ತಮ ಆರಂಭವಾಗಿದೆ. ಚೆನ್ನಾಗಿ ಪ್ರಾರಂಭವಾದಾಗ ಎಲ್ಲವೂ ಚೆನ್ನಾಗಿ ನಡೆಯುತ್ತದೆ ಎಂದು ನಾನು ನಂಬುತ್ತೇನೆ ಎಂದರು.
“ಗಣರಾಜ್ಯವನ್ನು ಕಳೆದುಕೊಳ್ಳುವ ಮೊದಲು ಮರುಪಡೆಯಬೇಕು. ಗಣರಾಜ್ಯವನ್ನು ಉಳಿಸಲು ಮತ್ತು ಮರುಪಡೆಯಲು, ನಾವೆಲ್ಲರೂ ಒಪ್ಪಿಕೊಂಡಿದ್ದೇವೆ ಮತ್ತು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ನಾವು ಒಂದೇ ಅಭಿಪ್ರಾಯ ಹೊಂದಿದ್ದೇವೆ” ಎಂದು ಸಿಪಿಐ ನಾಯಕ ಡಿ ರಾಜಾ ಹೇಳಿದರು.
ಸಭೆಯಲ್ಲಿ ಜೆಡಿಯುನ ನಿತೀಶ್ ಕುಮಾರ್, ಲಲನ್ ಸಿಂಗ್, ಸಂಜಯ್ ಝಾ ಅವರಲ್ಲದೆ, ಕಾಂಗ್ರೆಸ್ ಪಕ್ಷದಿಂದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್, ಆರ್ಜೆಡಿಯ ಲಾಲು ಯಾದವ್, ತೇಜಸ್ವಿ ಯಾದವ್, ಮನೋಜ್ ಝಾ, ಎನ್ಸಿಪಿಯಿಂದ ಶರದ್ ಪವಾರ್, ಸುಪ್ರಿಯಾ ಸುಳೆ, ಪ್ರಫುಲ್ ಪಟೇಲ್, ಸಿಪಿಎಂ ನಿಂದ ಯೆಚೂರಿ, ಎಸ್ ಪಿಯಿಂದ ಅಖಿಲೇಶ್ ಯಾದವ್, ಶಿವಸೇನೆ ಯುಬಿಟಿಯಿಂದ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್, ಜೆಎಂಎಂನಿಂದ ಹೇಮಂತ್ ಸೊರೆನ್, ಟಿಎಂಸಿಯಿಂದ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಡೆರಿಕ್ ಓಬ್ರಿಯಾನ್, ಡಿಎಂಕೆಯಿಂದ ಎಂ.ಕೆ.ಸ್ಟಾಲಿನ್, ಟಿ.ಆರ್.ಬಾಲು, ಎಎಪಿಯಿಂದ ಅರವಿಂದ್ ಕೇಜ್ರಿವಾಲ್,ಭಗವಂತ್ ಸಿಂಗ್ ಮಾನ್ , ರಾಘವ್ ಚಡ್ಡಾ, ಪಿಡಿಪಿಯಿಂದ ಮೆಹಬೂಬ ಮುಫ್ತಿ, ಸಿಪಿಐನಿಂದ ಡಿ ರಾಜಾ, ಸಿಪಿಐ ಎಂಎಲ್ನಿಂದ ದೀಪಂಕರ್ ಭಟ್ಟಾಚಾರ್ಯ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ