ಭಾರೀ ಮಳೆಗೆ ಮುಂಬೈ ಮತ್ತೆ ತತ್ತರ; ಅಂಧೇರಿ, ಮಾಟುಂಗಾ ತಗ್ಗುಪ್ರದೇಶ ಜಲಾವೃತ
Team Udayavani, Sep 3, 2019, 1:36 PM IST
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಸೋಮವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಮಂಗಳವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂಬೈನ ಕಿಂಗ್ ಸರ್ಕಲ್, ಮಾಟುಂಗಾ, ಅಂಧೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ತೀವ್ರ ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ. ಈ ಮಳೆಗಾಲದಲ್ಲಿ ಮುಂಬೈ ನಗರಿ ಹಲವು ಬಾರಿ ಮಳೆಯಿಂದ ಜಲಾವೃತಗೊಂಡಿದ್ದು, ಸ್ಥಳೀಯ ರೈಲು ಸಂಚಾರ ಹಾಗೂ ಬಸ್, ವಿಮಾನ ಸಂಚಾರಕ್ಕೂ ಅಡ್ಡಿಯುಂಟಾಗಿತ್ತು.
ಭಾರೀ ಮಳೆಯಿಂದಾಗಿ ತುಂಬುವ ನೀರನ್ನು ತೆಗೆಯಲು ಸುಮಾರು ಎಂಟು ಪಂಪಿಂಗ್ ಸ್ಟೇಶನ್ ಅಗತ್ಯವಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಈಗಾಗಲೇ ಮುಂಬೈನಲ್ಲಿ ಐದು ಪಂಪಿಂಗ್ ಸ್ಟೇಶನ್ ಸ್ಥಾಪಿಸಲಾಗಿದೆ. ಇನ್ನೂ ಮೂರನ್ನು ಶೀಘ್ರದಲ್ಲಿಯೇ ಸ್ಥಾಪಿಸಲಾಗುವುದು ಎಂದು ಹೇಳಿದರು.