ಐಪಿಎಸ್ ಅಧಿಕಾರಿ ಪರಂಬೀರ್ ಸಿಂಗ್ ರಷ್ಯಾಕ್ಕೆ ಪರಾರಿ ಸಾಧ್ಯತೆ!
Team Udayavani, Oct 2, 2021, 8:49 AM IST
ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣದ ತನಿಖೆ ನಡೆಸಿದ್ದ ಐಪಿಎಸ್ ಅಧಿಕಾರಿ ಪರಂ ಬೀರ್ ಸಿಂಗ್ ರಷ್ಯಾಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದು ವಾದದ ಪ್ರಕಾರ ಅವರು ಲಂಡನ್ಗೆ ತೆರಳಿರಬಹುದು ಎನ್ನಲಾಗುತ್ತದೆ.
ಬೆಳ ವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಲ್ಸೆ ಪಾಟಿಲ್ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಜತೆಗೂಡಿ ಸಿಂಗ್ ಎಲ್ಲಿದ್ದಾರೆ ಎಂದು ಶೋಧ ನಡೆಸಲಾಗುತ್ತಿದೆಎಂದಿದ್ದಾರೆ. ಮಹಾರಾಷ್ಟ್ರ ಗೃಹ ಸಚಿವರಾಗಿದ್ದ ಅನಿಲ್ ದೇಶ್ಮುಖ್ ವಿರುದ್ಧ ವಸೂಲಿ ಆರೋಪವನ್ನು ಮಾಡಿ ಅವರು ಸುದ್ದಿಯಾಗಿದ್ದರು.
ಇದೇ ವೇಳೆ, ಐಪಿಎಸ್ ಅಧಿಕಾರಿ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಇದೇ ವೇಳೆ, ಸಿಂಗ್ ಅವರನ್ನು ಅ.21ರ ವರೆಗೆ ಬಂಧಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಬಾಂಬೆ ಹೈಕೋರ್ಟ್ಗೆ ಅರಿಕೆ ಮಾಡಿದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಾಗಿದೆ. ಈ ನಡುವೆ, ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ,
ಕಾಂಗ್ರೆಸ್ ಪರಸ್ಪರ ವಾಗ್ಧಾಳಿ ನಡೆಸಿವೆ. ಈ ಪ್ರಕರಣ ಎನ್ಐಎ ಕೈನಲ್ಲಿದ್ದು, ಆರೋಪಿ ಪರಾರಿಯಾದರೆ ಅದಕ್ಕೆ ಕೇಂದ್ರವೇ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ದೂರಿದ್ದಾರೆ. ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ನಾಯಕ ರಾಮ್ ಕದಂ, “ರಾಜ್ಯ ಸರ್ಕಾರ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲದಕ್ಕೂ ಕೇಂದ್ರದತ್ತ ಕೈ ತೋರಿಸುವುದಲ್ಲ’ ಎಂದಿದ್ದಾರೆ