ಭಾರತ ಮತ್ತು ಭಾಂಗ್ಲಾದೇಶಗಳ ನಡುವಿನ ‘ಮೈತ್ರಿ ಸೇತು’ವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ..!
Team Udayavani, Mar 9, 2021, 4:23 PM IST
ನವ ದೆಹಲಿ : ಭಾರತ ಮತ್ತು ಭಾಂಗ್ಲಾದೇಶಗಳ ನಡುವೆ ಇದ್ದ ಫೆನಿ ನದಿಗೆ ಕಟ್ಟಲಾಗಿದ್ದ ಸೇತುವೆ ‘ಮೈತ್ರಿ ಸೇತು’ವನ್ನು ಇಂದು(ಮಂಗಳವಾರ, ಮಾ.9) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಇದರೊಂದಿಗೆ ತ್ರಿಪುರದ ವಿವಿಧ ಮೂಲಸೌಕರ್ಯ ಯೋಜನೆಯೊಂದಕ್ಕೆ ಆನ್ಲೈನ್ ಮೂಲಕ ಶಿಲನ್ಯಾಸ ಕಾರ್ಯಕ್ರಮವನ್ನು ಮೋದಿ ಉದ್ಘಾಟಿಸಿದ್ದಾರೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ತ್ರಿಪುರ, “ಡಬಲ್ ಇಂಜಿನ್” ಸರ್ಕಾರದಿಂದ ಈ ಹಿಂದೆ 30 ವರ್ಷಗಳಿಂದ ಕಾಣದ ಬದಲಾವಣೆಯನ್ನು ಕಾಣುತ್ತಿದೆ. ಜನರಿಗೆ ಬೇಕಾದ ಎಲ್ಲಾ ಅಭಿವೃದ್ಧಿಯನ್ನು ತ್ರಿಪುರ ಈಗ ಕಂಡಿದೆ ಎಂದರು.
ಓದಿ : ಹಲವು ನಿರೀಕ್ಷೆ ಹುಸಿಗೊಳಿಸಿದ ಬಿಎಸ್ವೈ ಬಜೆಟ್
ಇಡೀ ದೇಶ ಗಮನಿಸುತ್ತಿದೆ, ಎಲ್ಲೆಲ್ಲಿ ಡಬಲ್ ಇಂಜಿನ್ ಸರ್ಕಾರ ಇಲ್ಲವೋ, ಅಲ್ಲಿ ಅಭಿವೃದ್ಧಿ ಕುಂಟಿತ ಬೆಳವಣಿಗೆಯನ್ನು ಕಾಣುತ್ತಿದೆ. ಮಹಿಳೆಯರಿಗೆ ಮತ್ತು ರೈತರಿಗೆ ಬೇಕಾದ ಮೂಲ ಸೌಲಭ್ಯಗಳು ಸರಿಯಾಗಿ ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂದು ಸಹ ಮೋದಿ ನುಡಿದಿದ್ದಾರೆ.
ತ್ರಿಪುರ, ಈ ಹಿಂದಿನ ಸರ್ಕಾರವಿರುವಾಗ ಸ್ಟ್ರೈಕ್ ಸಂಸ್ಕೃತಿಯಿಂದ ಹಿಂದೆ ತಳ್ಳಲ್ಪಟ್ಟಿತ್ತು, ಈಗ ವ್ಯಾವಹಾರಿಕವಾಗಿ ಸುಲಲಿತವಾಗಿ ಸಾಗುವಂತೆ ಆಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತಾಡಿದ ಭಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ರಾಜಕೀಯ ಗಡಿಗಳು ವ್ಯಾಪಾರಕ್ಕೆ ಭೌತಿಕ ಅಡೆತಡೆಗಳಾಗಬಾರದು, ಇದೊಂದು ಐತಿಹಾಸಿಕ ಕ್ಷಣ ಎಂದರು. ನಾವು, ಭಾರತದೊಂದಿಗೆ ಸಂಪರ್ಕವನ್ನು ಹೊಂದುವುದರ ಮೂಲಕ ದಕ್ಷಿಣ ಏಷ್ಯಾದಲ್ಲಿ ಹೊಸ ಕ್ರಾಂತಿಯನ್ನು ಆರಂಭಿಸುತ್ತಿದ್ದೇವೆ. ನಾವು ಸಂಪ್ರದಾಯವಾದಿಯಾಗಿ ಉಳಿದಿರುವ ಪ್ರದೇಶದಲ್ಲಿದ್ದೇವೆ ಮತ್ತು ಪ್ರಾದೇಶಿಕ ವ್ಯಾಪಾರವು ಸಂಭಾವ್ಯತೆಗಿಂತ ಕೆಳಗಿದೆ. ರಾಜಕೀಯ ಗಡಿಗಳು ವ್ಯಾಪಾರಕ್ಕೆ ಭೌತಿಕ ಅಡೆತಡೆಗಳಾಗಿರಬಾರದು ಎಂದು ನಾನು ನಂಬುತ್ತೇನೆ ಎಂದು ಹಸೀನಾ ಅಭಿಪ್ರಾಯ ಪಟ್ಟರು.
‘ಮೈತ್ರಿ ಸೇತು’ ಭಾಂಗ್ಲಾದೇಶ ಹಾಗೂ ಭಾರತದ ತ್ರಿಪುರಾ ಗಡಿ ಭಾಗದ ನಡುವೆ ಫೆನಿ ನದಿಯ ಮೇಲೆ ಕಟ್ಟಲ್ಪಟ್ಟ ಸೇತುವೆಯಾಗಿದ್ದು, 1.9 ಕಿ.ಮೀ ಅಂತರದೊಂದಿಗೆ ಭಾರತದ ಸಬ್ರೂಮ್ ಹಾಗೂ ಭಾಂಗ್ಲಾದೇಶದ ರಾಮ್ ಗರ್ ಗೆ ಸಂಪರ್ಕವನ್ನು ಏರ್ಪಡಿಸುತ್ತದೆ.
ಓದಿ : 154 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಕಮಲ್ ಹಾಸನ್ ಮಕ್ಕಳ್ ನೀಧಿ ಮಯಂ