ನದಿ ನೀರು ಹಂಚಿಕೆ: ಚೀನ ಹೊಸ ತಗಾದೆ
Team Udayavani, Oct 22, 2017, 7:30 AM IST
ಹೊಸದಿಲ್ಲಿ : ಭಾರತ ಮತ್ತು ಚೀನ ಮಧ್ಯೆ ಡೋಕ್ಲಾಂ ಗಡಿ ವಿವಾದ ತಣ್ಣಗಾಗುತ್ತಿದ್ದಂತೆಯೇ ಇದೀಗ ಬ್ರಹ್ಮಪುತ್ರ ಮತ್ತು ಸಟ್ಲೆಜ್ ನದಿ ನೀರು ದತ್ತಾಂಶ ಹಂಚಿಕೆ ವಿಚಾರ ಸಂಬಂಧ ಹಳಸಲು ಕಾರಣವಾಗುವ ಸಾಧ್ಯತೆಯಿದೆ. ಉಭಯ ದೇಶಗಳು ಈ ಸಂಬಂಧ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ನೀರಿನ ಮಟ್ಟದ ಬಗ್ಗೆ ಸಮಗ್ರ ದತ್ತಾಂಶವನ್ನು ಭಾರತಕ್ಕೆ ಚೀನ ನೀಡಬೇಕು. ಈ ದತ್ತಾಂಶವನ್ನು ಮೇ 15 ರಿಂದ ಅಕ್ಟೋಬರ್ 15ರ ವರೆಗೆ ಪ್ರತಿ ವರ್ಷವೂ ನೀಡಬೇಕು ಎಂದು ಒಪ್ಪಂದದ ವಿವರ. ಪ್ರವಾಹ ಮತ್ತು ನೀರಿನ ಮಟ್ಟ ಹೆಚ್ಚಳವನ್ನು ನಿರ್ವಹಿಸಲು ಸೂಕ್ತ ಕ್ರಮಗಳನ್ನು ಭಾರತ ಕೈಗೊಳ್ಳಬಹುದಾಗಿದೆ.
ಪುತ್ರ ಮತ್ತು ಸಟ್ಲೆಜ್ ನದಿಗಳು ಚೀನದಲ್ಲಿ ಹುಟ್ಟಿ ಭಾರತದಲ್ಲಿ ಹರಿಯುತ್ತವೆಯಾದ್ದರಿಂದ, ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಡೋಕ್ಲಾಂ ಗಡಿ ವಿವಾದದ ಐದು ತಿಂಗಳ ಅವಧಿಯಲ್ಲಿ ಚೀನ ಈ ದತ್ತಾಂಶವನ್ನು ಹಂಚಿಕೊಂಡಿಲ್ಲ. ಈಗ ಡೋಕ್ಲಾಂ ಗಡಿ ವಿವಾದ ಮುಕ್ತಾಯವಾಗಿದೆಯಾದರೂ, ದತ್ತಾಂಶ ಹಂಚಿಕೊಳ್ಳುವ ಸಾಧ್ಯತೆ ಕಾಣಿಸುತ್ತಿಲ್ಲ.
ಈ ಸಂಬಂಧ ಕೆಲವು ತಿಂಗಳುಗಳ ಹಿಂದೆ ಚೀನದ ಗಮನಕ್ಕೆ ತಂದಾಗ, ಟಿಬೆಟ್ ಪ್ರಾಂತ್ಯದಲ್ಲಿ ನದಿ ನೀರಿನ ಮಟ್ಟ ಅಳೆಯುವ ಕೇಂದ್ರಗಳು ಪ್ರವಾಹದಿಂದ ಹಾನಿಗೀಡಾ ಗಿವೆ. ಹೀಗಾಗಿ ದತ್ತಾಂಶ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಚೀನದ ಅಧಿ ಕಾರಿಗಳು ಹೇಳಿದ್ದಾರೆ. ಆದರೆ ಬಾಂಗ್ಲಾ ದೇಶಕ್ಕೆ ಚೀನ ನದಿ ನೀರು ದತ್ತಾಂಶವನ್ನು ಹಂಚಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನದಿ ನೀರು ದತ್ತಾಂಶ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.