ಶ್ರೀನಗರಕ್ಕೆ ಸೃಜನಶೀಲ ನಗರ ಹೆಗ್ಗಳಿಕೆ
ಯುನೆಸ್ಕೋದ ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್ ವಿಭಾಗದ ಘೋಷಣೆ
Team Udayavani, Nov 10, 2021, 6:20 AM IST
ಶ್ರೀನಗರ: ವಿಶ್ವಸಂಸ್ಥೆಯ ಸೃಜನಶೀಲ ನಗರಗಳ ಪಟ್ಟಿಗೆ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರವನ್ನು ಆಯ್ಕೆ ಮಾಡಲಾಗಿದೆ. ಯುನೆಸ್ಕೋದ ಕ್ರಿಯೇಟಿವ್ ಸಿಟೀಸ್ ನೆಟ್ವರ್ಕ್ ವಿಭಾಗದಿಂದ ಘೋಷಣೆ ಮಾಡಲಾಗಿದೆ.
ಶ್ರೀನಗರದ ನೂರಾರು ವರ್ಷಗಳಿಂದ ಹೊಂದಿರುವ ಸಂಸ್ಕೃತಿ, ಪರಂಪರೆ, ಸಣ್ಣ ಕೈಗಾರಿಕೆಗಳ ಹಿನ್ನೆಲೆಯನ್ನು ಗಮನಿಸಿಕೊಂಡು ಯುನೆಸ್ಕೋ ಈ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ 295 ಸೃಜನಶೀಲ ನಗರಗಳ ಪಟ್ಟಿಯಲ್ಲಿ ಶ್ರೀನಗರ ಸೇರ್ಪಡೆಯಾಗಿದೆ. ದೇಶದ ವಾರಾಣಸಿ, ಮುಂಬೈ, ಚೆನ್ನೈ, ಹೈದರಾಬಾದ್, ಜೈಪುರ ಈಗಾಗಲೇ ಈ ಪಟ್ಟಿಯಲ್ಲಿವೆ. ಹೀಗಾಗಿ, ಶ್ರೀನಗರ ಈ ಪಟ್ಟಿಗೆ ಸೇರಿದ ದೇಶದ ಆರನೇ ನಗರವಾಗಿದೆ.
2004ರಲ್ಲಿ ಯುನೆಸ್ಕೋ ಜಗತ್ತಿನ ಸೃಜನಶೀಲ ನಗರಗಳ ಪಟ್ಟಿ ಸಿದ್ಧಪಡಿಸಲು ಯೋಜಿಸಿ, ಅದನ್ನು ಪ್ರತಿ ವರ್ಷವೂ ಪ್ರಕಟ ಮಾಡುತ್ತಿದೆ. ನಗರಗಳ ಅಭಿವೃದ್ಧಿ, ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಂತೆ ಇರುವ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ, ಸ್ಥಳೀಯವಾಗಿರುವ ಅಭಿವೃದ್ಧಿ ಮತ್ತು ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಸಹಕಾರ ಏರ್ಪಡಿಸುವುದು ಯುನೆಸ್ಕೋದ ಉದ್ದೇಶವಾಗಿದೆ.
ಇದನ್ನೂ ಓದಿ:ಆಸ್ಪತ್ರೆಯಲ್ಲಿ ಅಗ್ನಿ ಅವಘಡ : ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಶಿಶುಗಳು ಸಾವು
ಪ್ರಧಾನಿ ಹರ್ಷ
ಪ್ರಧಾನಿ ನರೇಂದ್ರ ಮೋದಿಯರು ಯುನೆಸ್ಕೋ ಆಯ್ಕೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಅಭಿನಂದನೆಗಳು. ಯುನೆಸ್ಕೋದ ಸೃಜನ ಶೀಲ ನಗರಗಳ ಪಟ್ಟಿಗೆ ಶ್ರೀನಗರ ಸೇರ್ಪಡೆಯಾದದ್ದು ಸಾಧನೆಯಾಗಿದೆ. ಇದರಿಂದ ಅಲ್ಲಿಗೆ ಅನುಕೂಲವೇ ಆಗಲಿದೆ’ ಎಂದು ಬರೆದುಕೊಂಡಿದ್ದಾರೆ.