ನಾಡು-ನುಡಿ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮದು: ಗೋಪಾಲ್ ಶೆಟ್ಟಿ
Team Udayavani, Dec 9, 2019, 5:38 PM IST
ಮುಂಬಯಿ, ಡಿ. 8: ಕನ್ನಡ ಭಾಷೆ ಉಳಿಯಬೇಕು ಅದನ್ನು ಬೆಳೆಸಬೇಕು ಎಂಬುದು ರಾಜ್ಯೋತ್ಸವ ಆಚರಣೆಯ ದಿನ ಕೇವಲ ಭಾಷಣಕ್ಕೆ ಸೀಮಿತವಾಗಿರಬಾರದು. ಕನ್ನಡವನ್ನು ಉಳಿಸಿ–ಬೆಳೆಸುವ ಪ್ರಯತ್ನ ನಮ್ಮದಾಗಬೇಕು. ಇಂಗ್ಲಿಷ್ ಎಂಬುದು ಮಾಧ್ಯಮದ ಭಾಷೆ. ಆದರೆ ಕನ್ನಡವು ಜ್ಞಾನದ ಭಾಷೆಯಾಗಿದೆ. ಈ ಜ್ಞಾನದ ಭಾಷೆ ಬೆಳೆಯಬೇಕಾದರೆ ನಾವು ನಮ್ಮ ಮಾತೃಭಾಷೆಗೆ ಮಹತ್ವ ನೀಡಬೇಕು. ಕನ್ನಡ ಭಾಷೆಯ ಬಗ್ಗೆ ತಾತ್ಸಾರ ಮಾಡಬಾರದು ಎಂದು ನವಿಮುಂಬಯಿ ಕನ್ನಡ ಸಂಘ ವಾಶಿ ಅಧ್ಯಕ್ಷ ಗೋಪಾಲ್ ವೈ. ಶೆಟ್ಟಿ ನುಡಿದರು.
ನ. 30ರಂದು ವಾಶಿಯ ಬಸ್ ಡಿಪೋ ಹಿಂದುಗಡೆಯ ನವಿ ಮುಂಬಯಿ ಕನ್ನಡದ ಎಂ. ಬಿ. ಕುಕ್ಯಾನ್ ಸಭಾಗೃಹದಲ್ಲಿ ನವಿಮುಂಬಯಿ ಸಂಘದ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಲ್ಲ ಜಾತಿ, ಧರ್ಮ,ಮತ ಭಾಷೆಯ ಬೇಧವಿಲ್ಲದೆ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ನಮ್ಮ ಸಂಸ್ಕೃತಿ, ಸಂಸ್ಕಾರದ ತವರೂರು ನಮ್ಮ ಕನ್ನಡ ನಾಡಾಗಿದೆ. ಯುವ ಪೀಳಿಗೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿರುಚಿ ಅರಿವು ಮೂಡಿಸಬೇಕು. ಮುಂಬಯಿ ಮಹಾನಗರದ ಸಂಘ–ಸಂಸ್ಥೆಗಳು ಕನ್ನಡದ ಏಳ್ಗೆಗಾಗಿ ಶ್ರಮಿಸುತ್ತಿರುವುದು ಅಭಿನಂದನೀಯವಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಾಹಿತಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರು ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ವಿಶಿಷ್ಟ ಪರಂಪರೆಯುಳ್ಳ ಕನ್ನಡ ಬ್ರಿಟಿಷರ ಆಳ್ವಿಕೆಯಲ್ಲಿ ವಿಭಿನ್ನ ಕಾರಣಗಳಿಂದ ಭೌಗೋಳಿಕವಾಗಿ ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿತ್ತು. ಆದರೆ ಕನ್ನಡ ನಾಡಿನ ನಮ್ಮ ಹಿರಿಯ ಚೇತನಗಳ ಹೋರಾಟದ ಫಲವಾಗಿ ಮೈಸೂರು ರಾಜ್ಯ ಉದಯವಾಯಿತು. ಬಳಿಕ ಕರ್ನಾಟಕ ಎಂದು ನಾಮಕರಣವಾಯಿತು. ನಾವು ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ.
ಮುಂಬಯಿಯ ಉದ್ದಗಲಕ್ಕೂ ಸಮಾಜಕ್ಕೆ ಕನ್ನಡದ ನಾಡು–ನುಡಿಗೆ ಸೇವೆಯನ್ನು ಸಲ್ಲಿಸುತ್ತಿರುವ ಸಂಘ– ಸಂಸ್ಥೆಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕಾರ್ಯವನ್ನು ಮಾಡುತ್ತಿದೆ. ಕನ್ನಡ ನಾಡಿನಲ್ಲಿ ನಡೆಯದಷ್ಟು ಕನ್ನಡದ ಕಾರ್ಯಕ್ರಮಗಳು ಮುಂಬಯಿಯಲ್ಲಿ ನಡೆಯುತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಇಲ್ಲಿನ ಹೆಚ್ಚಿನ ಸಂಘ–ಸಂಸ್ಥೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಮುಂಬಯಿಯಲ್ಲಿ ಕನ್ನಡ ಖಂಡಿತ ಅಳಿಯುವುದಿಲ್ಲ. ಕನ್ನಡ ಮುಂಬಯಿ ಮಹಾನಗರದಲ್ಲಿ ಉಳಿದು ಬೆಳೆಯುತ್ತದೆ. ನಾವೆಲ್ಲ ಕನ್ನಡಕ್ಕೆ ಮಹತ್ವವನ್ನು ನೀಡಿ ಕನ್ನಡವನ್ನು ಉಳಿಸಿಕೊಂಡರೆ ನಮ್ಮ ರಾಜ್ಯೋತ್ಸವ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಸಮಾರಂಭದಲ್ಲಿ ಸಂಘದ ವತಿಯಿಂದ ನವಿಮುಂಬಯಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಬಿ. ಎಚ್. ಕಟ್ಟಿ ಅವರನ್ನು ಶಾಲು ಹೊದೆಸಿ, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಸಮ್ಮಾನಕ್ಕೆ ಉತ್ತರಿಸಿದ ಬಿ. ಎಚ್. ಕಟ್ಟಿ ಅವರು, ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ದೊರಕಿದೆ. ಸಂಘದ ಏಳ್ಗೆಗಾಗಿ ಶ್ರಮಿಸಿರುವ ಎಲ್ಲ ಹಿರಿಯ ಸದಸ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ನನ್ನ ಅಳಿಲು ಸೇವೆಗಾಗಿ ನೀವೆಲ್ಲಾ ನನ್ನನ್ನು ಗುರುತಿಸಿ ಸಮ್ಮಾನಿಸಿದ್ದೀರಿ. ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನನ್ನ ಪರಿವಾರದವರ ಪ್ರೋತ್ಸಾಹ, ಬೆಂಬಲದಿಂದ ನನಗೆ ಸಂಘದ ಮುಖೇನ ಸಮಾಜಪರ ಸೇವೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಡಾ| ಕರುಣಾಕರ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಸದಸ್ಯೆಯರು ನಾಡಗೀತೆಯನ್ನು ಹಾಡಿದರು. ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥ ರಘು ಮೂಲ್ಯ ಸ್ವಾಗತಿಸಿದರು.
ಅತಿಥಿಗಳನ್ನು ಸದಸ್ಯೆ ಸುಧಾ ಮೂರ್ತಿ ಪರಿಚಯಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್ ರೈ ಸಮ್ಮಾನ ಪತ್ರ ವಾಚಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ದಿನೇಶ್ ಉಪರ್ಣ, ಜ್ಯೋತಿ ಪ್ರಸಾದ್, ಜಯರಾಮ್ ಶೆಟ್ಟಿ, ಕೋಶಾಧಿಕಾರಿ ಅನಿಲ್ ಕೆ. ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಮಧುಸೂದನ್ ರಾವ್ ಟಿ. ಆರ್. ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಮುಖ್ಯಸ್ಥೆ ಸುಜಾತಾ ರಾವ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಭಾಷೆಯ ಕಿತಾಪತಿ ಕನ್ನಡ ಕಿರು ಹಾಸ್ಯ ನಾಟಕ ಹಾಗೂ ಸಂಘದ ಸದಸ್ಯರ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?