ಪಾಕಿಸ್ಥಾನ ವಾಯುಮಾರ್ಗ ಬಂದ್: ವಿಶ್ವಕಪ್ ತಪ್ಪಿಸಿಕೊಂಡ ಬಿಲ್ಗಾರರು
Team Udayavani, Apr 22, 2019, 10:20 AM IST
ಹೊಸದಿಲ್ಲಿ: ಸೋಮವಾರದಿಂದ ಕೊಲಂಬಿಯಾದಲ್ಲಿ ನಡೆಯಲಿರುವ ಬಿಲ್ಗಾರಿಕೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತೀಯರು ಪಾಲ್ಗೊಳ್ಳುವುದು ಕಡೇ ಕ್ಷಣದಲ್ಲಿ ತಪ್ಪಿ ಹೋಗಿದೆ. ಶನಿವಾರ ಹೊಸದಿಲ್ಲಿ-ಆ್ಯಮ್ಸ್ಟರ್ಡಮ್- ಬೊಗೊಟ ಮಾರ್ಗವಾಗಿ ಕೊಲಂಬಿಯಾದ ಮೆಡೆಲಿನ್ಗೆ ಹೊರಟಿದ್ದ ಭಾರತೀಯ ಬಿಲ್ಗಾರರು, ಪಾಕಿಸ್ಥಾನದ ವಾಯುಮಾರ್ಗ ಮುಚ್ಚಿರುವುದರಿಂದ ಅನಿವಾರ್ಯವಾಗಿ ಹೊಸದಿಲ್ಲಿ ವಿಮಾನ ನಿಲ್ದಾಣದಿಂದ ಹಿಂತಿರುಗಿದ್ದಾರೆ. ಭಾರತ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿದ ಪರಿಣಾಮ ಪಾಕ್ ತನ್ನ ವಾಯುಮಾರ್ಗವನ್ನು ಭಾರತೀಯರಿಗೆ ಬಂದ್ ಮಾಡಿದೆ.
ಡಚ್ ವಿಮಾನಯಾನ ಸಂಸ್ಥೆ ಕೆಎಲ್ಎಂ ರಾಯಲ್, 23 ಮಂದಿಯಿರುವ ಭಾರತೀಯ ತಂಡಕ್ಕೆ ತನ್ನ ಅಸಹಾಯಕ ಪರಿಸ್ಥಿತಿಯನ್ನು ತಿಳಿಸಿತು. ಇದನ್ನು ಸರಿಪಡಿಸಲು ಭಾರತ ಬಿಲ್ಗಾರಿಕೆ ಸಂಸ್ಥೆ ಎಎಐ ಎಲ್ಲ ಪ್ರಯತ್ನ ಮಾಡಿದರೂ ವಿಷಯ ಇತ್ಯರ್ಥವಾಗಲಿಲ್ಲ. ದೀಪಿಕಾ ಕುಮಾರಿ, ಬೊಂಬಾಯ್ಲ ದೇವಿ, ಅತನು ದಾಸ್ ಈ ಘಟನೆಯಿಂದ ತೀವ್ರ ನಿರಾಶೆಗೊಳಗಾಗಿದ್ದಾರೆ.