ಯು ಮುಂಬಾವನ್ನು ಮಣಿಸಿದ ಬುಲ್ಸ್
Team Udayavani, Jul 29, 2019, 10:36 AM IST
ಮುಂಬಯಿ: ಪ್ರೊ ಕಬಡ್ಡಿ ಮುಂಬೈ ಚರಣದ 2ನೇ ದಿನವಾದ ರವಿವಾರ, ಆತಿಥೇಯ ಯು ಮುಂಬಾ ತಂಡವನ್ನು ಬೆಂಗಳೂರು ಬುಲ್ಸ್ ಸೋಲಿಸಿದೆ. ಅತ್ಯಂತ ರೋಚಕವಾಗಿ ನಡೆದ ಹೋರಾಟದಲ್ಲಿ 30-26 ಅಂಕಗಳ ಗೆಲುವು ಸಾಧಿಸಿದೆ. ಇದು 4 ಪಂದ್ಯದಲ್ಲಿ ಮುಂಬಾಗೆ ಎದುರಾದ 2ನೇ ಸೋಲು, ಹಾಗೆಯೇ 3 ಪಂದ್ಯಗಳಲ್ಲಿ ಬೆಂಗಳೂರಿಗೆ ಒಲಿದ 2ನೇ ಜಯ.
ಬೆಂಗಳೂರು ತಂಡದ ಪರ ಎಂದಿನಂತೆ ಪವನ್ ಸೆಹ್ರಾವತ್ ಮಿಂಚಿದರು. ಮತ್ತೂಂದು ಕಡೆ ನಾಯಕ ರೋಹಿತ್ ಕುಮಾರ್ ಅವರ ವೈಫಲ್ಯವೂ ಮುಂದುವರಿಯಿತು. 21 ಬಾರಿ ಎದುರಾಳಿ ಮುಂಬಾ ಕೋಟೆಯೊಳಗೆ ಪವನ್ ನುಗ್ಗಿ 11 ಅಂಕ ಗಳಿಸಿದರು. ರೋಹಿತ್ ಕುಮಾರ್ 7 ಬಾರಿ ಎದುರಾಳಿ ಅಂಕಣಕ್ಕೆ ತೆರಳಿದರೂ ಸಂಪೂರ್ಣ ವೈಫಲ್ಯ ಕಂಡರು.
ಬೆಂಗಳೂರು ಪರ ರಕ್ಷಣೆಯಲ್ಲಿ ಪರಾಗಿಲ್ಲ ಎನ್ನುವ ಪ್ರದರ್ಶನ ನೀಡಿದ್ದು ಮಹೇಂದರ್ ಸಿಂಗ್. ಅವರು 6 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ 3 ಬಾರಿ ಯಶಸ್ಸು ಸಾಧಿಸಿದರು.
ಆತಿಥೇಯ ಮುಂಬಾ ವೈಫಲ್ಯ
ಬೆಂಗಳೂರಿನ ಸಂಘಟಿತ ಆಟದೆದುರು ಆತಿಥೇಯ ಮುಂಬಾ ಮುಗ್ಗರಿಸಿತು. ಪೂರ್ಣ ಹೋರಾಟ ನಡೆಸಿದರೂ, ಅದಕ್ಕೆ ಬೆಂಗಳೂರನ್ನು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ. ದಾಳಿಯಲ್ಲಿ ಅರ್ಜುನ್ ದೇಶ್ವಾಲ್ ಮಿಂಚಿ 6 ಅಂಕ ಗಳಿಸಿದರು. ರಕ್ಷಣೆಯಲ್ಲಿ ಅತ್ಯುತ್ತಮ ಹೆಸರಾದ ಫಜಲ್ ಅಟ್ರಾಚಲಿ ಭಾನುವಾರ ತಮ್ಮ ಎಂದಿನ ತಾಕತ್ತು ತೋರಲಿಲ್ಲ.
ಚಂದ್ರನ್ ಅಬ್ಬರಕ್ಕೆ ಕರಗಿದ ಸ್ಟೀಲರ್
ಮೊದಲ ಪಂದ್ಯದಲ್ಲಿ ರೈಡರ್ಗಳಾದ ಚಂದ್ರನ್ ರಂಜಿತ್ (11 ಅಂಕ) ಹಾಗೂ ನವೀನ್ ಕುಮಾರ್ (10 ಅಂಕ) ಅಬ್ಬರದ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ತಂಡ 41-21 ಅಂಕಗಳ ಅಂತರದಿಂದ ಹರ್ಯಾಣ ಸ್ಟೀಲರ್ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಮೂರೂ ಪಂದ್ಯಗಳಲ್ಲೂ ಡೆಲ್ಲಿ ಗೆಲುವು ಸಾಧಿಸಿತು ಎನ್ನುವುದು ವಿಶೇಷ.
ಡೆಲ್ಲಿ ಪರ ರಂಜಿತ್ ಮೊದಲ ಸಲ ಪೂರ್ಣಕಾಲಿಕ ರೈಡರ್ ಆಗಿ ಮಿಂಚಿದರು. ರೈಡಿಂಗ್ನಲ್ಲಿ 9 ಅಂಕವನ್ನು ತಂದ ಅವರು 2 ಅಂಕವನ್ನು ಬೋನಸ್ ಮೂಲಕ ತರುವಲ್ಲಿ ಯಶಸ್ವಿಯಾದರು. ನವೀನ್ ಕುಮಾರ್ ಕೂಡ ಅಷ್ಟೇ ಚಾಕಚಕ್ಯತೆಯಿಂದ ರೈಡಿಂಗ್ ನಿರ್ವಹಿಸಿದರು. 9 ಅಂಕವನ್ನು ರೈಡಿಂಗ್ನಿಂದ ನವೀನ್ ತಂದರೆ, ಒಂದು ಅಂಕ ಬೋನಸ್ ರೂಪದಲ್ಲಿ ತಂಡಕ್ಕೆ ಸಿಕ್ಕಿತು. ಟ್ಯಾಕಲ್ನಲ್ಲಿ ಸಯ್ಯದ್ ಘಫಾರಿ (4 ಅಂಕ), ಜೋಗಿಂದರ್ (3 ಅಂಕ) ಹಾಗೂ ವಿಶಾಲ್ ಮಾನೆ (2 ಅಂಕ) ಗಮನ ಸೆಳೆದರು. ಇವರ ಆಟದ ಎದುರು ಹರ್ಯಾಣ ಸಂಪೂರ್ಣ ಶರಣಾಗಬೇಕಾಯಿತು.