“ನಮ್ಮ ಕಬಡ್ಡಿಯನ್ನು ಈಗ ವಿಶ್ವವೇ ಗುರುತಿಸುತ್ತಿದೆ’
ವಿರಾಟ್ ಕೊಹ್ಲಿ ಆರಿಸಿದ ಕ್ರಿಕೆಟಿಗರ ಕಬಡ್ಡಿ ತಂಡ
Team Udayavani, Jul 29, 2019, 10:34 AM IST
ಮುಂಬಯಿ: ಸಂಕಲ್ಪ, ಬದ್ಧತೆ ಮತ್ತು ಭಾರತೀಯರ ಸಾಮರ್ಥ್ಯದಿಂದ ಕಬಡ್ಡಿಯನ್ನೀಗ ವಿಶ್ವವೇ ಗುರುತಿಸುವಂತಾಗಿದೆ ಎಂಬುದಾಗಿ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪ್ರೊ ಕಬಡ್ಡಿ ಲೀಗ್ ಕೂಟದ ಮುಂಬಯಿ ಚರಣದ ಮೊದಲ ದಿನ ವಿಶೇಷ ಅತಿಥಿಯಾಗಿ ಆಗಮಿಸಿದ ಅವರು ಪಂದ್ಯಗಳ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. “ಪ್ರೊ ಕಬಡ್ಡಿ ಲೀಗ್ ಆರಂಭವಾದಂದಿನಿಂದ ಈ ಗ್ರಾಮೀಣ ಕ್ರೀಡೆಗೆ ಭಾರತೀಯ ಕ್ರೀಡಾ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನ ಮಾನ ಲಭಿಸಿದೆ. ನಾವೆಲ್ಲ ಬಾಲ್ಯದಲ್ಲಿ ಆಡಿ ಕೊಂಡಿದ್ದ ಕ್ರೀಡೆ ಇಂದು ವಿಶ್ವ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಭಾರತದ ಕಬಡ್ಡಿ ತಂಡ ವಿಶ್ವದಲ್ಲೇ ಶ್ರೇಷ್ಠ ಹಾಗೂ ಬಲಿಷ್ಠವಾಗಿದೆ’ ಎಂದು ಕೊಹ್ಲಿ ಹೇಳಿದರು.
“ಭಾರತೀಯ ಆಟಗಾರರ ಸಂಕಲ್ಪ ಮತ್ತು ಸಾಮರ್ಥ್ಯದಿಂದ ಕಬಡ್ಡಿ ಇಂದು ಜಾಗತಿಕ ಮಟ್ಟದ ಕ್ರೀಡೆಯಾಗಿದೆ. ಪ್ರೊ ಕಬಡ್ಡಿಯಲ್ಲಿ ವಿಶªದ ವಿವಿಧ ಭಾಗಗಳ ಆಟಗಾರರು ಪಾಲ್ಗೊಳ್ಳುತ್ತಿರುವುದು ಈ ಕ್ರೀಡೆಯ
ಯಶಸ್ಸಿಗೆ ಸಾಕ್ಷಿ’ ಎಂದರು.
ಕೊಹ್ಲಿಯ ಕಬಡ್ಡಿ ತಂಡ
ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟಿಗರ ಕಬಡ್ಡಿ ತಂಡವೊಂದನ್ನು ಆರಿಸಿದರು. ಇದರಲ್ಲಿ ಸ್ಥಾನ ಪಡೆದ ಆಟಗಾರರೆಂದರೆ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜ, ಉಮೇಶ್ ಯಾದವ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಕೆ.ಎಲ್. ರಾಹುಲ್.
“ಕಬಡ್ಡಿ ವಿಶೇಷವಾದ ಶಕ್ತಿ, ದೈಹಿಕ ಸಾಮರ್ಥ್ಯ ಹಾಗೂ ಕ್ರೀಡೋತ್ಸಾಹವನ್ನು ಬಯಸುವ ಕ್ರೀಡೆ. ಆ್ಯತ್ಲೆಟಿಕ್ಸ್ ಮಾನದಂಡದ ಪ್ರಕಾರ ನಾನು ಹೆಸರಿಸಿದ ಈ ಎಲ್ಲ ಆಟಗಾರರಲ್ಲೂ ಇಂಥ ಸಾಮಥ್ಯವಿದೆ. ಇದರಲ್ಲಿ ನನ್ನನ್ನು ಸೇರಿಸಿ ಕೊಳ್ಳಲಿಲ್ಲ ಏಕೆಂದರೆ, ಇವರೆಲ್ಲ ಆ್ಯತ್ಲೆಟಿಕ್ಸ್ನಲ್ಲಿ ನನಗಿಂತ ಹೆಚ್ಚು ಬಲಿಷ್ಠರು. ಹೀಗಾಗಿ ಕೊನೆಯ ಸ್ಥಾನವನ್ನು ರಾಹುಲ್ಗೆ ನೀಡಿದೆ’ ಎಂದು ಕೊಹ್ಲಿ ತಮ್ಮ ಆಯ್ಕೆಯನ್ನು ವಿಶ್ಲೇಷಿಸಿದರು.