ಏಶ್ಯನ್ ಗೇಮ್ಸ್ ಸಂಭ್ರಮಕ್ಕೆ ಇಂಡೋನೇಶ್ಯ ಸಜ್ಜು
Team Udayavani, Aug 12, 2018, 6:00 AM IST
ಜಕಾರ್ತ: ಇನ್ನೊಂದು ವಾರದಲ್ಲಿ ಇಂಡೊನೇಶ್ಯದಲ್ಲಿ ಏಶ್ಯನ್ ಗೇಮ್ಸ್ ಸಂಭ್ರಮ ಆರಂಭವಾಗಲಿದೆ. ಇದಕ್ಕಾಗಿ ಜಕಾರ್ತ ಮತ್ತು ಸುಮಾತ್ರದ ಪಾಲೆಂಬಾಂಗ್ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಒಲಿಂಪಿಕ್ಸ್ ಬಳಿಕ ಎರಡನೇ ಬೃಹತ್ ಕೂಟವೆಂದು ಬಣ್ಣಿಸಲಾದ ಏಶ್ಯನ್ ಗೇಮ್ಸ್ ಆ. 18ರಿಂದ ಸೆ.2ರ ವರೆಗೆ ನಡೆಯಲಿದೆ. ಏಶ್ಯದ 45 ರಾಷ್ಟ್ರಗಳ 11 ಸಾವಿರ ಆ್ಯತ್ಲೀಟ್ಸ್ ಮತ್ತು 5 ಸಾವಿರ ಅಧಿಕಾರಿಗಳು ಈ ಮಹೋನ್ನತ ಕೂಟದಲ್ಲಿ ಭಾಗವಹಿಸಲಿದ್ದಾರೆ.
ಮಹಾನ್ ಕ್ರೀಡಾಕೂಟದ ವೇಳೆ ಇಂಡೋನೇಶ್ಯವು ಭಯೋತ್ಪಾದನೆ, ಬೀದಿ ಕಾಳಗ ಮತ್ತು ಜಕಾರ್ತದ ನಟೋರಿಯಸ್ ಟ್ರಾಫಿಕ್ ಸಮಸ್ಯೆಯನ್ನು ಮರೆಯಬೇಕಾಗಿದೆ. ವಿಯೆಟ್ನಾಂ ಆತಿಥ್ಯದಿಂದ ಹಿಂದೆ ಸರಿದ ಬಳಿಕ ಇಂಡೋನೇಶ್ಯ ಅತ್ಯಲ್ಪ ಅವಧಿಯಲ್ಲಿ ಕೂಟದ ಆತಿಥ್ಯ ವಹಿಸಿಕೊಳ್ಳಲು ಒಪ್ಪಿಗೆ ಸೂಚಿಸಿತ್ತು. ಕೂಟವನ್ನು ಯಶಸ್ವಿಯಾಗಿ ಸಂಘಟಿಸಲು ನಾವು ಸಿದ್ಧರಿದ್ದೇವೆ. ಸಿದ್ಧತೆಯ ಬಗ್ಗೆ ನಮಗೇನೂ ಸಮಸ್ಯೆಯಿಲ್ಲ. ಒಂದು ವೇಳೆ ಸಮಸ್ಯೆ ಉದ್ಭವಿಸಿದರೂ ಅದನ್ನು ತತ್ಕ್ಷಣವೇ ಪರಿಹರಿಸಲಿದ್ದೇವೆ ಎಂದು ಮುಖ್ಯ ಸಂಘಟಕ ಎರಿಕ್ ತೋಹಿರ್ ಹೇಳಿದ್ದಾರೆ.
ಮುಂದಿನ ಶನಿವಾರ ನಡೆಯಲಿರುವ ಗೇಮ್ಸ್ನ ಉದ್ಘಾಟನಾ ಸಮಾರಂಭದ ಶೇಕಡಾ 70ರಷ್ಟು ಟಿಕೆಟ್ ಮಾರಾಟವಾಗಿದೆ. ಕೂಟ ಸುಗಮವಾಗಿ ಸಾಗಲು ಜಕಾರ್ತ ಮತ್ತು ಪಾಲೆಂಬಾಂಗ್ನಲ್ಲಿ 40 ಸಾವಿರದಷ್ಟು ಸೇನೆ ಮತ್ತು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.
ಟ್ರಾಫಿಕ್ ಸಮಸ್ಯೆ
ಟ್ರಾಫಿಕ್ ಜಾಮ್ ಆಗದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಮ-ಬೆಸ ಸಂಖ್ಯೆಯ ವಾಹನಗಳನ್ನು ಓಡಿಸುವ ನಿಯಮವನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಕೂಟದ ವೇಳೆ ಆ್ಯತ್ಲೀಟ್ಸ್ ಮತ್ತು ಅಧಿಕಾರಿಗಳಿಗೆ ಪ್ರತ್ಯೇಕ ಲೇನ್ನಲ್ಲಿ ಸಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ವೇಳೆ ಶಾಲಾ ಕಾಲೇಜ್ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಶಾಲಾ ಮಕ್ಕಳ ವಾಹನ ರಸ್ತೆಗೆ ಇಳಿಯುವುದಿಲ್ಲ.
ಇಂಡೋನೇಶ್ಯ ಈ ಹಿಂದೆ 2011ರಲ್ಲಿ ಎಸ್ಇಎ ಗೇಮ್ಸ್ ಆಯೋಜಿಸಿದಾಗ ಇಬ್ಬರು ಕಾಲು¤ಳಿತದಿಂದ ಇಬ್ಬರು ಸತ್ತಿದ್ದರು. ಜಕಾರ್ತದಲ್ಲಿ ನಡೆದ ಫುಟ್ಬಾಲ್ ಕೂಟದ ಫೈನಲ್ ವೇಳೆ ಈ ಘಟನೆ ನಡೆದಿತ್ತು. 10 ವರ್ಷಗಳ ಹಿಂದೆ ಇಂಡೋನೇಶ್ಯದಲ್ಲಿ ಭಯೋತ್ಪಾದಕರ ದಾಳಿ ನಡೆದಿತ್ತು. ದೇಶದ ಎರಡನೇ ಬೃಹತ್ ನಗರವಾದ ಸುರಬಯದಲ್ಲಿ ನಡೆದ ಈ ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದರು.