ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ತಂಡ ಪ್ರಕಟ : ರೋಹಿತ್ ಔಟ್ ; ಧವನ್, ಹಾರ್ಧಿಕ್, ಭುವಿ ಇನ್
Team Udayavani, Mar 8, 2020, 8:36 PM IST
ಮುಂಬಯಿ: ಭಾರತ ಪ್ರವಾಸವನ್ನು ಕೈಗೊಳ್ಳಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧದ ಏಕದಿನ ಸರಣಿಗೆ ಭಾರತ ಪುರುಷರ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್, ವೇಗಿ ಭುವನೇಶ್ವರ್ ಕುಮಾರ್ ಮತ್ತು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಹಾರ್ಧಿಕ್ ಪಾಂಡ್ಯ ಅವರು ಈ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಧವನ್, ಪಾಂಡ್ಯ ಹಾಗೂ ಭುವಿ ಇತ್ತೀಚೆಗೆ ಮುಕ್ತಾಯಗೊಂಡ ಡಿ.ವೈ. ಪಾಟೀಲ್ ಟಿ20 ಕಪ್ ಪಂದ್ಯಾಟಗಳಲ್ಲಿ ತಮ್ಮ ಫಿಟ್ ನೆಸ್ ಸಾಬೀತುಗೊಳಿಸಿರುವ ಕಾರಣ ಇವರನ್ನು ಆಯ್ಕೆಗೆ ಪರಿಗಣಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತಕ್ಕೆ ಕಿರು ಪ್ರವಾಸವನ್ನು ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ತಂಡ ಇಲ್ಲಿ ಆತಿಥೇಯರ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಮೊದಲ ಏಕದಿನ ಪಂದ್ಯ ಮಾರ್ಚ್ 12ರಂದು ನಡೆಯಲಿದೆ.
ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ವಂಚಿತರಾಗಿದ್ದ ಕೆ.ಎಲ್. ರಾಹುಲ್ ಅವರು ಇದೀಗ ತಂಡಕ್ಕೆ ಮರಳಿದ್ದಾರೆ. ಸೀಮಿತ ಕ್ರಿಕೆಟ್ ನಲ್ಲಿ ಭಾರತ ತಂಡದ ಉಪ-ಕಪ್ತಾನನಾಗಿದ್ದ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಯುವ ಪ್ರತಿಭೆ ಪೃಥ್ವಿ ಶಾ ಅವರು 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾಗಿ ಈ ಬಾರಿ ಆರಂಭಿಕ ಆಟಗಾರರ ಸ್ಥಾನಕ್ಕೆ ಧವನ್, ರಾಹುಲ್ ಮತ್ತು ಶಾ ನಡುವೆ ಪೈಪೋಟಿ ನಡೆಯಲಿದೆ.
ಏಕದಿನ ಸರಣಿಗೆ ಭಾರತ ತಂಡ
ಶಿಖರ್ ಧವನ್, ಫೃಥ್ವೀ ಶಾ, ವಿರಾಟ್ ಕೊಹ್ಲಿ (ಕಪ್ತಾನ), ಕೆ.ಎಲ್. ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲ್ ದೀಪ್ ಯಾದವ್ ಮತ್ತು ಶುಭ್ ಮನ್ ಗಿಲ್