ವಿಶ್ವಕಪ್ ಹಾಕಿ ಪಂದ್ಯಾವಳಿ:ಭಾರತ ತಂಡದಲ್ಲಿಲ್ಲ ರೂಪಿಂದರ್, ಸುನೀಲ್
Team Udayavani, Nov 9, 2018, 1:06 PM IST
ಹೊಸದಿಲ್ಲಿ: ಭಾರತದ ಆತಿಥ್ಯದಲ್ಲಿ, ನ. 28ರಿಂದ ಭುವನೇಶ್ವರದಲ್ಲಿ ಆರಂಭವಾಗಲಿರುವ ವಿಶ್ವಕಪ್ ಹಾಕಿ ಪಂದ್ಯಾವಳಿಯಿಂದ ರೂಪಿಂದರ್ ಪಾಲ್ ಸಿಂಗ್ ಮತ್ತು ಕರ್ನಾಟಕದ ಎಸ್.ವಿ. ಸುನೀಲ್ ಅವರನ್ನು ಕೈಬಿಡಲಾಗಿದೆ. ಗುರುವಾರ ತಂಡವನ್ನು ಅಂತಿಮಗೊಳಿಸಲಾಗಿದ್ದು, ಮಿಡ್ ಫೀಲ್ಡರ್ ಮನ್ಪ್ರೀತ್ ಸಿಂಗ್ ಭಾರತವನ್ನು ಮುನ್ನಡೆಸಲಿದ್ದಾರೆ. ಉಪನಾಯಕತ್ವ ಚಿಂಗ್ಲೆನ್ಸಾನ ಸಿಂಗ್ ಪಾಲಾಗಿದೆ.
ಹಿರಿಯ ಸ್ಟ್ರೈಕರ್ ಎಸ್.ವಿ. ಸುನೀಲ್ ಈ ಕೂಟದಲ್ಲಿ ಆಡುವುದು ಅನುಮಾನವಿತ್ತು. ಇದು ನಿಜವಾಗಿದೆ. ಕಳೆದ ತಿಂಗಳು ಮಸ್ಕತ್ನಲ್ಲಿ ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ನಡೆಸಲಾದ ಅಭ್ಯಾಸ ಶಿಬಿರದ ವೇಳೆ ಸುನೀಲ್ ಮಂಡಿನೋವಿಗೆ ಸಿಲುಕಿ ಕೂಟವನ್ನು ತಪ್ಪಿಸಿಕೊಂಡಿದ್ದರು. ಆದರೂ ವಿಶ್ವಕಪ್ ಶಿಬಿರಕ್ಕೆ ಆಯ್ಕೆಯಾಗಿದ್ದರು. ಮತ್ತೋರ್ವ ಆಟಗಾರ ರೂಪಿಂದರ್ ಪಾಲ್ ಸಿಂಗ್ ಕೂಡ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಗುಳಿದಿದ್ದರು.
ಪಿ.ಆರ್. ಶ್ರೀಜೇಶ್ ಮತ್ತು ಕೃಷ್ಣ ಬಹದ್ದೂರ್ ಪಾಠಕ್ ಗೋಲ್ ಕೀಪರ್ಗಳಾಗಿ ಮುಂದುವರಿ ದಿದ್ದಾರೆ. ಮಸ್ಕತ್ ಪಂದ್ಯಾವಳಿ ತಪ್ಪಿಸಿಕೊಂಡಿದ್ದ ಒಡಿಶಾದ ಅನುಭವಿ ಡಿಫೆಂಡರ್ ಬೀರೇಂದ್ರ ಲಾಕ್ರಾ ತಂಡಕ್ಕೆ ಮರಳಿದ್ದಾರೆ. ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ಕೊಥಜಿತ್ ಸಿಂಗ್, 2016ರ ಜೂನಿಯರ್ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಹರ್ಮನ್ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ರಕ್ಷಣಾ ವಿಭಾಗದಲ್ಲಿದ್ದಾರೆ. ಇವರಲ್ಲಿ ಮೂವರು ಡ್ರ್ಯಾಗ್ ಫ್ಲಿಕರ್ ಸ್ಪೆಷಲಿಸ್ಟ್ ಗಳೆಂಬುದನ್ನು ಮರೆಯುವಂತಿಲ್ಲ.
ಡೈನಮಿಕ್ ಮನ್ಪ್ರೀತ್ ಮಿಡ್ಫಿಲ್ಡ್ ವಿಭಾಗದ ಪ್ರಧಾನ ಆಟಗಾರನಾಗಿದ್ದಾರೆ. ಕಳೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪರಿಣಾಮ ಕಾರಿ ನಾಯಕತ್ವದಿಂದ ಗಮನ ಸೆಳೆದಿದ್ದರು. “ಯಂಗ್ ಗನ್ಸ್’ ಸುಮಿತ್, ಕಳೆದ ತಿಂಗಳಷ್ಟೇ ಅಂತಾರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದ ನೀಲಕಂಠ ಶರ್ಮ ಮತ್ತು ಹಾರ್ದಿಕ್ ಸಿಂಗ್ ಮೇಲೆ ಹೆಚ್ಚಿನ ವಿಶ್ವಾಸ ಇರಿಸಲಾಗಿದೆ. ಅನುಭವಿ ಆಕಾಶ್ದೀಪ್ ಸಿಂಗ್, ದಿಲ್ಪ್ರೀತ್ ಸಿಂಗ್, ಲಲಿ ತ್ ಉಪಾಧ್ಯಾಯ, ಜೂನಿಯರ್ ವಿಶ್ವಕಪ್ ಗೆದ್ದ ತಂಡದ ಹೀರೋಗಳಾದ ಮನ್ದೀಪ್ ಸಿಂಗ್, ಸಿಮ್ರನ್ಜಿàತ್ ಸಿಂಗ್ ಅವರೆಲ್ಲ ಫಾರ್ವರ್ಡ್ ವಿಭಾಗದಲ್ಲಿದ್ದಾರೆ.
“ಸಿ’ ವಿಭಾಗದಲ್ಲಿ ಭಾರತ
ಕೂಟದಲ್ಲಿ ಒಟ್ಟು 16 ತಂಡಗಳು ಭಾಗ ವಹಿಸಲಿದ್ದು, ಇವುಗಳನ್ನು 4 ಗುಂಪುಗಳಾಗಿ ವಿಭಾಗಿಸಲಾಗಿದೆ. ಪ್ರತೀ ಗುಂಪಿನ ಅಗ್ರಸ್ಥಾನಿ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು “ಕ್ರಾಸ್ ಓವರ್’ ಪಂದ್ಯಗಳಲ್ಲಿ ಯಶಸ್ಸು ಸಾಧಿಸಿ ನಾಕೌಟ್ ಪ್ರವೇಶಿಸಬೇಕಿದೆ. ಆತಿಥೇಯ ಭಾರತ “ಸಿ’ ವಿಭಾಗದಲ್ಲಿದ್ದು, ಕೂಟದ ಆರಂಭದ ದಿನ ದ. ಆಫ್ರಿಕಾವನ್ನು ಎದುರಿಸಲಿದೆ. ಕೆನಡಾ ಮತ್ತು ವಿಶ್ವದ ನಂ.3 ತಂಡ ವಾದ ಬೆಲ್ಜಿಯಂ ಈ ವಿಭಾಗದ ಉಳಿದೆರಡು ತಂಡಗಳು.
ಭಾರತ ತಂಡ
ಗೋಲ್ಕೀಪರ್: ಪಿ.ಆರ್. ಶ್ರೀಜೇಶ್, ಕೃಷ್ಣ ಬಹದ್ದೂರ್ ಪಾಠಕ್.
ಡಿಫೆಂಡರ್: ಹರ್ಮನ್ಪ್ರೀತ್ ಸಿಂಗ್, ಬೀರೇಂದ್ರ ಲಾಕ್ರ, ವರುಣ್ ಕುಮಾರ್, ಕೊಥಜಿತ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್.
ಮಿಡ್ ಫೀಲ್ಡರ್: ಮನ್ಪ್ರೀತ್ ಸಿಂಗ್ (ನಾಯಕ), ಚಿಂಗ್ಲೆನ್ಸಾನ ಸಿಂಗ್ (ಉಪನಾಯಕ), ನೀಲಕಂಠ ಶರ್ಮ, ಹಾರ್ದಿಕ್ ಸಿಂಗ್, ಸುಮಿತ್.
ಫಾರ್ವರ್ಡ್ಸ್: ಆಕಾಶ್ದೀಪ್ ಸಿಂಗ್, ಮನ್ದೀಪ್ ಸಿಂಗ್, ದಿಲ್ಪ್ರೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಸಿಮ್ರನ್ಜಿತ್ ಸಿಂಗ್.