ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ
ಸಿಡ್ನಿಗೆ ಮರಳಿದ ಸಮರ; ಇಂದು ದ್ವಿತೀಯ ಮುಖಾಮುಖಿ ಜಡೇಜ ಗೈರು ಭಾರತವೇ ಫೇವರಿಟ್
Team Udayavani, Dec 6, 2020, 6:00 AM IST
ಸಿಡ್ನಿ: ಏಕದಿನ ಸರಣಿ ಸೋಲಿಗೆ ಟಿ20 ಮುಖಾ ಮುಖಿಯಲ್ಲಿ ಸೇಡು ತೀರಿಸಲು ಹೊರಟಿರುವ ಭಾರತಕ್ಕೆ ರವಿವಾರದ ದ್ವಿತೀಯ ಪಂದ್ಯದಲ್ಲಿ ಉಜ್ವಲ ಅವಕಾಶವೊಂದು ಕಾದು ಕುಳಿತಿದೆ. ಅತ್ತ ಆಸ್ಟ್ರೇಲಿಯನ್ನರು ಇನ್ನೂ ಮೊದಲ ಪಂದ್ಯದ ಬದಲಿ ಆಟಗಾರನ ಗೊಂದಲಕ್ಕೆ ಬಿದ್ದು ತಲೆ ಕೆಡಿಸಿಕೊಂಡು ಕುಳಿತಿದ್ದರೆ, ಇತ್ತ ಕೊಹ್ಲಿ ಪಡೆ ಸಿಡ್ನಿ ಸಮರವನ್ನೂ ಗೆದ್ದು ಸಂಭ್ರಮಿಸಲು ಸೂಕ್ತ ಕಾರ್ಯತಂತ್ರ ರೂಪಿಸುತ್ತಿದೆ.
ಆದರೆ ಏಕದಿನದಲ್ಲಿ ಭಾರತಕ್ಕೆ ಮುನಿದಿದ್ದ “ಸಿಡ್ನಿ ಕ್ರಿಕೆಟ್ ಗ್ರೌಂಡ್’ ಚುಟುಕು ಕ್ರಿಕೆಟ್ನಲ್ಲಿ ಒಲಿದೀತೇ ಎಂಬ ಕುತೂಹಲವಿದೆ. ಹಾಗೆ ನೋಡಹೋದರೆ, ಸೀಮಿತ ಓವರ್ ಸರಣಿಯೀಗ 2-2 ಸಮ ಬಲದಲ್ಲಿದೆ. ಸಿಡ್ನಿಯ 2 ಏಕದಿನ ಪಂದ್ಯಗಳನ್ನು ಆಸೀಸ್ ಗೆದ್ದರೆ, ಕ್ಯಾನ್ಬೆರಾದ ಏಕದಿನ ಹಾಗೂ ಟಿ20ಯಲ್ಲಿ ಕೊಹ್ಲಿ ಪಡೆ ಜಯ ಸಾಧಿಸಿದೆ. ಸಿಡ್ನಿಯ ಕ್ಲೈಮ್ಯಾಕ್ಸ್ ಕುತೂಹಲ ಎಲ್ಲರಲ್ಲೂ ರೋಮಾಂಚನ ಮೂಡಿಸಿದೆ.
ಜಡೇಜ ಗೈರು ದೊಡ್ಡ ಹೊಡೆತ
ಶುಕ್ರವಾರದ ಟಿ20 ಪಂದ್ಯದ ಹೀರೋಗಳಲ್ಲಿ ಒಬ್ಬರಾಗಿದ್ದ ರವೀಂದ್ರ ಜಡೇಜ ಗಾಯಾಳಾಗಿ ಹೊರಬಿದ್ದಿರುವುದು ಪ್ರವಾಸಿಗರಿಗೆ ದೊಡ್ಡ ಹೊಡೆತವಾಗಿದೆ. ಜಡೇಜ ಟೀಮ್ ಇಂಡಿಯಾದ ಏಕೈಕ ಸ್ಪೆಷಲಿಸ್ಟ್ ಆಲ್ರೌಂಡರ್ ಆಗಿರುವುದೇ ಇದಕ್ಕೆ ಕಾರಣ. ಹಾರ್ದಿಕ್ ಪಾಂಡ್ಯ ಇದ್ದರೂ ಅವರು ಸದ್ಯ ಬೌಲಿಂಗ್ ಆಕ್ರಮಣದಿಂದ ದೂರ ಸರಿದಿದ್ದಾರೆ. ಹೀಗಾಗಿ ಜಡೇಜ ಸ್ಥಾನ ತುಂಬಬಲ್ಲ ಮತ್ತೂಬ್ಬ ಆಟಗಾರ ತಂಡದಲ್ಲಿ ಇಲ್ಲದಿರುವುದೊಂದು ಕೊರತೆಯೇ ಸರಿ.
ಭಾರತ ಆರಂಭಿಕ ಕುಸಿತಕ್ಕೆ ಸಿಲುಕಿದ ವೇಳೆ ಕ್ಯಾನ್ಬೆರಾದ ಎರಡೂ ಪಂದ್ಯಗಳಲ್ಲಿ ಜಡೇಜ ಸಿಡಿದು ನಿಂತಿದ್ದನ್ನು ಮರೆಯುವಂತಿಲ್ಲ. ಇವರ ಸ್ಥಾನಕ್ಕೆ ಚಹಲ್ ಬರಲಿದ್ದಾರೆ. ಅವರಿಲ್ಲಿ ಬದಲಿ ಆಟಗಾರನಲ್ಲ ಎಂಬುದನ್ನು ಆಸ್ಟ್ರೇಲಿಯ ನ್ನರು ಗಮನಿಸಬೇಕಿದೆ! ದೀಪಕ್ ಚಹರ್ ಬದಲು ಶಾದೂìಲ್ ಠಾಕೂರ್ ಅವರನ್ನು ಸೇರಿಸಿಕೊಂಡರೆ ತಂಡಕ್ಕೆ ಹೆಚ್ಚು ಲಾಭವಿದೆ. ಠಾಕೂರ್ ಬ್ಯಾಟಿಂಗ್ ಕೂಡ ಗಮನಾರ್ಹ ಮಟ್ಟದಲ್ಲಿದೆ.
ಮಿಂಚಬೇಕಿದೆ ಅಗ್ರ ಕ್ರಮಾಂಕ
ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಕ್ಲಿಕ್ ಆದರೆ ಯಾವುದೇ ಸಮಸ್ಯೆ ಇಲ್ಲ. ರಾಹುಲ್ ಕಳೆದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದ್ದಾರೆ. ಆದರೆ ಉಳಿದವರ ಬ್ಯಾಟ್ ಮಾತಾಡಿರಲಿಲ್ಲ. ಧವನ್, ಕೊಹ್ಲಿ, ಸ್ಯಾಮ್ಸನ್, ಪಾಂಡೆ ಕ್ರೀಸ್ ಆಕ್ರಮಿಸಿಕೊಳ್ಳುವುದು ಅತೀ ಅಗತ್ಯ. ಇವರಲ್ಲಿ ಯಾರಾದರಿಬ್ಬರು ಸಿಡಿದು ನಿಂತರೂ ಭಾರತದ ಬ್ಯಾಟಿಂಗ್ ಸಮಸ್ಯೆ ಪರಿಹಾರಗೊಳ್ಳಲಿದೆ. ಆಗ ಕೆಳ ಕ್ರಮಾಂಕದಲ್ಲಿ ಒತ್ತಡ ಬೀಳುವುದು ತಪ್ಪುತ್ತದೆ. ತಂಡದ ಬ್ಯಾಟಿಂಗ್ ಸರದಿಯಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ಪಾಂಡೆ ಬದಲು ಶ್ರೇಯಸ್ ಹೆಸರು ಕೇಳಿಬರುತ್ತಿದೆಯಾದರೂ ಗೆಲುವಿನ ಕಾಂಬಿನೇಶನ್ ಮುಂದುವರಿಯುವುದು ಈ ಹಂತದಲ್ಲಿ ಜಾಣ ನಡೆಯಾದೀತು.
ಸಿಡ್ನಿ ಸದಾ ಅದೃಷ್ಟ ತಂದೀತೇ?
ಆಸ್ಟ್ರೇಲಿಯಕ್ಕೆ ಇಲ್ಲಿ ಗೆಲುವು ಅನಿವಾರ್ಯವಾದ್ದರಿಂದ ಒತ್ತಡಕ್ಕೆ ಬಿದ್ದಿದೆ. ಏಕದಿನದಲ್ಲಿ ಸಿಡ್ನಿ ಒಲಿದಿತ್ತು ಎಂದು ನಂಬಿ ಕುಳಿತರೆ ಫಲವಿಲ್ಲ. ಏಕೆಂದರೆ ಇದು “ಡಿಫರೆಂಟ್ ಬಾಲ್ ಗೇಮ್’.
ಇನ್ಫಾರ್ಮ್ ನಾಯಕ ಆರನ್ ಫಿಂಚ್ ಪೂರ್ತಿ ಫಿಟ್ ಆಗಿಲ್ಲ ಎಂಬುದು ಆತಿಥೇಯರಿಗೆ ಎದುರಾಗಿರುವ ಆತಂಕ. ವಾರ್ನರ್ ಕೂಡ ಗೈರಾಗಿರುವುದರಿಂದ ಕಾಂಗರೂ ಓಪನಿಂಗ್ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ.
ಏಕದಿನದಲ್ಲಿ ಸತತ ಎರಡು ಶತಕ ಬಾರಿಸಿ ಮೆರೆದಿದ್ದ ಸ್ಮಿತ್ ಮೊದಲ ಪಂದ್ಯದಲ್ಲಿ ಕೈಕೊಟ್ಟಿದ್ದರು. ಅವರನ್ನು ಮತ್ತೆ ಬೇಗ ಪೆವಿಲಿಯನ್ಗೆ ಸೇರಿಸಬೇಕಿದೆ.
ಉಳಿದಿರುವ ಮತ್ತೋರ್ವ ಅಪಾಯಕಾರಿ ಆಟಗಾರನೆಂದರೆ ಮ್ಯಾಕ್ಸ್ವೆಲ್. ಈ ವಿಕೆಟ್ ಬೇಗ ಪತನಗೊಂಡರೆ ಭಾರತದ ಕೈ ಮೇಲಾದಂತೆ.
ಬೌಲಿಂಗ್ ವಿಭಾಗದಲ್ಲಿ ಹಿರಿಯ ಸ್ಪಿನ್ನರ್ ನಥನ್ ಲಿಯಾನ್ ಅವರನ್ನು ಆಡಿಸಿ, ಅವರನ್ನು ಪವರ್ ಪ್ಲೇ ಅವಧಿಯಲ್ಲಿ ಬಳಕೊಳ್ಳುವ ಯೋಜನೆ ಆಸ್ಟ್ರೇಲಿಯದ್ದು. ಆಗ ಮಿಚೆಲ್ ಸ್ವೆಪ್ಸನ್ ಹೊರಗುಳಿಯಬೇಕಾಗುತ್ತದೆ.
ಪಕ್ಕಾ ವೃತ್ತಿಪರರಲ್ಲ
ಏನೇ ಆದರೂ ಟಿ20ಯಲ್ಲಿ ಭಾರತ ಸಾಧಿಸಿದಷ್ಟು ಪರಿಪೂರ್ಣತೆಯನ್ನು ಆಸ್ಟ್ರೇಲಿಯ ಇನ್ನೂ ಸಾಧಿಸಿಲ್ಲ. ಅವರಿನ್ನೂ ಪಕ್ಕಾ ವೃತ್ತಿಪರತೆಯನ್ನು ತೋರಿಲ್ಲ. ನಮ್ಮವರ ಮೇಲುಗೈಗೆ ಈ ಒಂದು ಅಂಶವೇ ಸಾಕು. ಮತ್ತೆ ಭಾರತಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ಸಿಕ್ಕಿದರೆ ಅರ್ಧ ಪಂದ್ಯ ಗೆದ್ದಂತೆ!
ಟಿ20 ಸರಣಿಯಿಂದ ಜಡೇಜ ಔಟ್; ಶಾರ್ದೂಲ್ ಬದಲಿ ಆಟಗಾರ
ಸಿಡ್ನಿ: ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಹೆಲ್ಮೆಟ್ಗೆ ಚೆಂಡು ಅಪ್ಪಳಿಸಿದ ಪರಿಣಾಮ ಗಾಯಗೊಂಡಿಕೊಂಡಿರುವ ಭಾರತದ ಆಲ್ರೌಂಡರ್ ಆಟಗಾರ ರವೀಂದ್ರ ಜಡೇಜ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ. ಜಡೇಜ ಸ್ಥಾನಕ್ಕೆ ಬಲಗೈ ವೇಗಿ ಶಾರ್ದೂಲ್ ಠಾಕೂರ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯ ವಿರುದ್ಧ ಇಲ್ಲಿನ “ಮನುಕಾ ಓವಲ್’ನಲ್ಲಿ ನಡೆದ ಮೊದಲ ಟಿ20 ಮುಖಾಮುಖೀಯಲ್ಲಿ ಜಡೇಜ ಮೊದಲು ಸ್ನಾಯು ಸೆಳೆತಕ್ಕೊಳಗಾಗಿದ್ದರು. ಬಳಿಕ ಅಂತಿಮ ಓವರ್ ವೇಳೆ ಸ್ಟಾರ್ಕ್ ಎಸೆತವೊಂದು ಅವರ ಹೆಲ್ಮೆಟ್ಗೆ ಬಡಿದಿತ್ತು. ಬಳಿಕ “ಕಾನ್ಕಶನ್ ಸಬ್’ ಬದಲಿ ಆಟಗಾರನ ನಿಯಮ ಪ್ರಕಾರ ಯಜುವೇಂದ್ರ ಚಹಲ್ ಕಣಕ್ಕಿಳಿದಿದ್ದರು. “ಜಡೇಜ ಅವರ ಆರೋಗ್ಯ ಸ್ಥಿತಿ ಮೇಲೆ ನಿಗಾ ಇರಿಸಲಾಗಿದೆ. ಶನಿವಾರ ಪರೀಕ್ಷಿಸಲಾಗಿದೆ. ಅಗತ್ಯ ಬಿದ್ದರೆ ಮತ್ತೂಮ್ಮೆ ಸ್ಕ್ಯಾನಿಂಗ್ ಮಾಡಲಾಗುವುದು. ಅವರ ಎಡ ಭಾಗದ ಹಣೆಗೆ ಚೆಂಡು ಬಡಿದಿತ್ತು.ಅನಂತರ ಸ್ಕ್ಯಾನಿಂಗ್ ಮಾಡಲಾಯಿತು’ ಎಂದು ಬಿಸಿಸಿಐ ವಿವರಿಸಿದೆ.
ಸಂಭಾವ್ಯ ತಂಡಗಳು
ಭಾರತ: ಶಿಖರ್ ಧವನ್, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಮನೀಷ್ ಪಾಂಡೆ/ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ/ಜಸ್ಪ್ರೀತ್ ಬುಮ್ರಾ, ಟಿ. ನಟರಾಜನ್.
ಆಸ್ಟ್ರೇಲಿಯ: ಆರನ್ ಫಿಂಚ್ (ನಾಯಕ)/ಮಾರ್ನಸ್ ಲಬುಶೇನ್, ಡಿ’ಆರ್ಸಿ ಶಾರ್ಟ್/ಅಲೆಕ್ಸ್ ಕ್ಯಾರಿ, ಮ್ಯಾಥ್ಯೂ ವೇಡ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್, ಮೊಸಸ್ ಹೆನ್ರಿಕ್ಸ್, ಸೀನ್ ಅಬೋಟ್/ಆ್ಯಂಡ್ರ್ಯು ಟೈ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಆ್ಯಡಂ ಝಂಪ, ಜೋಶ್
ಹ್ಯಾಝಲ್ವುಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ