ಆಕ್ಲಂಡ್ ನಲ್ಲೂ ಮುಂದುವರಿದ ಆಟ: ರಾಹುಲ್, ಅಯ್ಯರ್ ಗೆ ಜಯದ ಶ್ರೇಯಸ್ಸು
Team Udayavani, Jan 26, 2020, 3:31 PM IST
ಆಕ್ಲಂಡ್: ಕೆ.ಎಲ್ .ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಮತ್ತೊಂದು ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಎರಡನೇ ಟಿ20 ಪಂದ್ಯದಲ್ಲಿ ನಿರಾಯಾಸ ಜಯ ಸಾಧಿಸಿದೆ.
ಟ್ಯಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ಕೆ ಮಾಡಿದ ಕಿವೀಸ್ ನಿಗದಿತ 20 ಓವರ್ ಗಳಲ್ಲಿ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಆರಂಭಿಕ ಆಘಾತ ಅನುಭವಿಸಿದರೂ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಭರ್ಜರಿ ಫಾರ್ಮ್ ನಲ್ಲಿರುವ ಕನ್ನಡಿಗ ಕೆ ಎಲ್ ರಾಹುಲ್ ಅಜೇಯ ಅರ್ಧಶತಕ ಬಾರಿಸಿದರು. 50 ಎಸೆತ ಎದುರಿಸಿದ ರಾಹುಲ್ 57 ರನ್ ಗಳಸಿದರು. ಶ್ರೇಯಸ್ ಅಯ್ಯರ್ ಭರ್ಜರಿ ಮೂರು ಸಿಕ್ಸರ್ ನೊಂದಿಗೆ 44 ರನ್ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಲಿಯಮ್ಸನ್ ಬಳಗಕ್ಕೆ ಉತ್ತಮ ಆರಂಭ ದೊರಕಿತು. ಮಾರ್ಟಿನ್ ಗಪ್ಟಿಲ್ 20 ಎಸೆತದಲ್ಲಿ 33 ರನ್ ಗಳಿಸಿದರು. ಆದರೆ ನಂತರ ಸತತ ವಿಕೆಟ್ ಕಳೆದುಕೊಂಡ ಕಿವೀಸ್ ರನ್ ಓಟ ತಗ್ಗಿತು. ಅಂತಿಮವಾಗಿ ವಿಕೆಟ್ ಕೀಪರ್ ಟಿಮ್ ಸೀಫರ್ಟ್ 33 ರನ್ ಗಳಿಸಿದರು.
ಭಾರತದ ಪರ ಜಡೇಜಾ ಎರಡು ವಿಕೆಟ್ ಪಡೆದರೆ, ಠಾಕೂರ್, ಬುಮ್ರಾ, ದುಬೆ ತಲಾ ಒಂದು ವಿಕೆಟ್ ಪಡೆದರು.
ಭರ್ಜರಿ ಅರ್ಧಶತಕ ಬಾರಿಸಿದ ಕೆ ಎಲ್ ರಾಹುಲ್ ಗೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಜಯದೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿತು.