ಆರ್ಸಿಬಿ-ಮುಂಬೈ: ಸಮಾನ ದುಃಖಿಗಳ ಸೆಣಸಾಟ!
Team Udayavani, May 1, 2018, 10:59 AM IST
ಬೆಂಗಳೂರು: ಆಡಿದ 7 ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ಗೆಲುವು, ಐದರಲ್ಲಿ ಸೋಲಿನ ಬಿಸಿ, ಕೈಯಲ್ಲಿ ಹೊಂದಿರುವ ಅಂಕ ಕೇವಲ 4, ಅಂಕಪಟ್ಟಿಯಲ್ಲಿ ಕೆಳಗಿನಿಂದ 2ನೇ ಹಾಗೂ 3ನೇ ಸ್ಥಾನ!
ಇದು ರಾಯಲ್ ಚಾಲೆಂಜರ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಸದ್ಯದ ಸ್ಥಿತಿ. 2018ರ ಐಪಿಎಲ್ ಅರ್ಧ ಹಾದಿ ಕ್ರಮಿಸಿದ್ದು, ಸಮಾನ ದುಃಖೀಗಳಾಗಿರುವ ಎರಡೂ ತಂಡಗಳು ಮುಂದಿನ ಹಾದಿ ಏನು ಎತ್ತ ಎಂಬ ಬೃಹದಾಕಾರದ ಪ್ರಶ್ನೆಯೊಂದಿಗೆ ಮಂಗಳವಾರ ರಾತ್ರಿ 2ನೇ ಸುತ್ತಿನ ಪಂದ್ಯ ದಲ್ಲಿ ಪರಸ್ಪರ ಮುಖಾಮುಖೀಯಾಗಲು ಅಣಿಯಾಗಿವೆ. ಗೆದ್ದ ತಂಡ ಒಂದಿಷ್ಟು ಉಸಿರಾಡಲಾರಂಭಿಸಿದರೆ, ಸೋತ ತಂಡದ ಸ್ಥಿತಿ ಚಿಂತಾಜನಕವಾಗುವುದರಲ್ಲಿ ಅನುಮಾನವಿಲ್ಲ.
ಆರ್ಸಿಬಿ ತನ್ನ ಎರಡೂ ಗೆಲುವುಗಳನ್ನು ತವರಿನ ಅಂಗಳದಲ್ಲೇ ಕಂಡಿದೆಯಾದರೂ ಇಲ್ಲಿ ಆಡಿದ ಉಳಿದ 3 ಪಂದ್ಯಗಳಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದೆ. ಇದರಲ್ಲಿ 2 ಸೋಲು ಸತತ ಪಂದ್ಯಗಳಲ್ಲಿ ಎದುರಾಗಿದೆ. ಹೀಗಾಗಿ ಹೋಮ್ ಗ್ರೌಂಡ್ನಲ್ಲಿ ಸೋಲಿನ ಹ್ಯಾಟ್ರಿಕ್ ಮುಖಭಂಗದಿಂದ ಪಾರಾಗಬೇಕಾದ ಒತ್ತಡ ಕೂಡ ಆರ್ಸಿಬಿ ಮೇಲಿದೆ.
ಆರ್ಸಿಬಿಗೆ ಬೌಲಿಂಗ್ ಚಿಂತೆ
ಅನುಮಾನವೇ ಇಲ್ಲ, ಆರ್ಸಿಬಿ ಕ್ರಿಕೆಟ್ ವಿಶ್ವದ ಖ್ಯಾತ ಬಿಗ್ಹಿಟ್ಟರ್ಗಳನ್ನು ಹೊಂದಿರುವ ತಂಡ. ಮೆಕಲಮ್, ಡಿ ಕಾಕ್, ಎಬಿಡಿ, ಕೊಹ್ಲಿ, ಆ್ಯಂಡರ್ಸನ್, ಮನ್ದೀಪ್… ಹೀಗೆ ಸಾಗುತ್ತದೆ ಇವರ ಬ್ಯಾಟಿಂಗ್ ಲೈನ್ಅಪ್. ಇವರಲ್ಲಿ ಇಬ್ಬರು ಸಿಡಿದು ನಿಂತರೂ ಸ್ಕೋರ್ಬೋರ್ಡ್ ನಲ್ಲಿ 200 ರನ್ ಗ್ಯಾರಂಟಿ. ಆದರೆ ಇಷ್ಟು ರನ್ ಪೇರಿಸಿದರೂ ಇದನ್ನು ಉಳಿಸಿಕೊಡಬೇಕಾದ ಸಾಮರ್ಥ್ಯ ಆರ್ಸಿಬಿ ಬೌಲಿಂಗ್ ವಿಭಾಗದಲ್ಲಿ ಇಲ್ಲ ಎನ್ನುವುದೇ ದೊಡ್ಡ ದುರಂತ!
ಉದಾಹರಣೆಗೆ ಚೆನ್ನೈ ವಿರುದ್ಧ ಆಡಲಾದ ಎ. 25ರ ಪಂದ್ಯ. ಇದರಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 8ಕ್ಕೆ 205 ರನ್ ರಾಶಿ ಹಾಕಿಯೂ 5 ವಿಕೆಟ್ಗಳ ಸೋಲಿಗೆ ತುತ್ತಾಗಿತ್ತು. ರಾಯುಡು ಮತ್ತು ಧೋನಿ ಸೇರಿಕೊಂಡು ಆತಿಥೇಯರ ಎಸೆತಗಳನ್ನು ಪುಡಿಗುಟ್ಟಿದ್ದರು. ರವಿವಾರ ರಾತ್ರಿ ಕೆಕೆಆರ್ನ ಲಿನ್-ಉತ್ತಪ್ಪ ಜೋಡಿ ಆರ್ಸಿಬಿ ಬೌಲರ್ಗಳಿಗೆ ಸಖತ್ ಬಿಸಿ ಮುಟ್ಟಿಸಿದ್ದು ತಾಜಾ ಉದಾಹರಣೆ.
ಮುಂಬೈ ವಿರುದ್ಧ “ವಾಂಖೇಡೆ’ಯಲ್ಲಿ ಆಡಿದ ಮೊದಲ ಸುತ್ತಿನ ಪಂದ್ಯದಲ್ಲಿ ಆರ್ಸಿಬಿ ಬೌಲರ್ಗಳು ಸಿಕ್ಕಾಪಟ್ಟೆ ದುಬಾರಿಯಾಗಿದ್ದರು. ಮುಂಬೈ 6 ವಿಕೆಟಿಗೆ 213 ರನ್ ಪೇರಿಸಿ ಸವಾಲೊಡ್ಡಿತ್ತು. ಜವಾಬಿತ್ತ ಬೆಂಗಳೂರು 8ಕ್ಕೆ 167 ರನ್ ಮಾಡಿ 46 ರನ್ನುಗಳ ಸೋಲುಂಡಿತ್ತು.
ಬೌಲಿಂಗ್ ವೈಫಲ್ಯದಿಂದ ಹೊರಬಂದರಷ್ಟೇ ರಾಯಲ್ ಚಾಲೆಂಜರ್ ಮೇಲೆ ಭರವಸೆ ಇರಿಸಬಹುದು. ಯಾದವ್, ಚಾಹಲ್, ಎಂ. ಅಶ್ವಿನ್, ಸೌಥಿ, ಸಿರಾಜ್, ವಾಷಿಂಗ್ಟನ್ ಅವರೆಲ್ಲ ಹೆಚ್ಚು ಘಾತಕವಾಗಬೇಕಿದೆ.
ಮುಂಬೈ ಆಟ ಮುಗಿದಿಲ್ಲ!
ಮುಂಬೈ ಇಂಡಿಯನ್ಸ್ಗೆ ಆರಂಭಿಕ ಸೋಲು ಗಳು ಹೊಸತೇನಲ್ಲ. ಈ ಸೋಲುಗಳನ್ನು ಮೀರಿಯೂ ರೋಹಿತ್ ಪಡೆ ಕಪ್ ಎತ್ತಿದ ದೃಷ್ಟಾಂತ ಕಣ್ಣಮುಂದಿದೆ. ಹೀಗಾಗಿ ಮುಂಬೈ ಆಟ ಮುಗಿಯಿತು ಎಂದು ಹೇಳುವಂತಿಲ್ಲ. ಚೆನ್ನೈ ವಿರುದ್ಧ 170 ರನ್ ಬೆನ್ನಟ್ಟುವಾಗ ಮುಂಬೈಯ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳೆಲ್ಲರೂ ಕ್ಲಿಕ್ ಆಗಿದ್ದರು. ಕೇವಲ 2 ವಿಕೆಟ್ ನಷ್ಟದಲ್ಲಿ ಮುಂಬೈ ಈ ಮೊತ್ತವನ್ನು ಹಿಂದಿಕ್ಕಿತ್ತು. ಅಜೇಯ 56 ರನ್ ಬಾರಿಸಿದ ರೋಹಿತ್ ಶರ್ಮ ಫಾರ್ಮ್ ಕಂಡುಕೊಂಡದ್ದೊಂದು ಹೆಚ್ಚುಗಾರಿಕೆ.
ಮೆಕ್ಲೆನಗನ್, ಬುಮ್ರಾ, ಮಾರ್ಕಂಡೆ, ಪಾಂಡ್ಯಾಸ್ ಅವರನ್ನು ಒಳಗೊಂಡ ಮುಂಬೈ ಬೌಲಿಂಗ್ ವಿಭಾಗವೂ ವೈವಿಧ್ಯಮಯವಾಗಿದೆ.
ಸೋತವರು
ಆರ್ಸಿಬಿ, ಮುಂಬೈಗೆ ತವರು ನೆಲವೆನ್ನುವುದು ಇನ್ನೂ ಅದೃಷ್ಟದ ತಾಣವಾಗಿ ಗೋಚರಿಸದಿರು ವುದು ಮತ್ತೂಂದು ದುರಂತ. ಹೀಗಾಗಿ ಈ ಮರು ಪಂದ್ಯ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿದೆಯಾದರೂ ಇಲ್ಲಿ ಆರ್ಸಿಬಿ ಗೆಲ್ಲುತ್ತದೆಂದು ಹೇಳಲು ಧೈರ್ಯ ಸಾಲದು. ರವಿವಾರ ರಾತ್ರಿಯಷ್ಟೇ ಇದೇ ಅಂಗಳದಲ್ಲಿ ಕೆಕೆಆರ್ ಕೈಯಲ್ಲಿ ಹೊಡೆತ ತಿಂದ ನೋವು ಇನ್ನೂ ಗುಣಮುಖವಾಗಿಲ್ಲ. ಇನ್ನೊಂದೆಡೆ ಮುಂಬೈ ತನ್ನೆರಡು ಗೆಲುವುಗಳಲ್ಲಿ ಒಂದನ್ನು ಹಿಂದಿನ ಪಂದ್ಯದಲ್ಲಷ್ಟೇ ಒಲಿಸಿಕೊಂಡ ಸಮಾಧಾನದಲ್ಲಿದೆ. ಎ. 28ರಂದು ಚೆನ್ನೈ ವಿರುದ್ಧ ಪುಣೆಯಲ್ಲಿ ನಡೆದ ಮುಖಾಮುಖೀಯಲ್ಲಿ ರೋಹಿತ್ ಪಡೆ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?