ಸೈಮನ್ ಡೌಲ್ಗೆ ಆರ್ಸಿಬಿ ಅಭಿಮಾನಿ ಜೀವ ಬೆದರಿಕೆ!
Team Udayavani, Apr 5, 2019, 6:00 AM IST
ಮುಂಬೈ: ಈ ಬಾರಿಯ ಐಪಿಎಲ್ನಲ್ಲಿ ಒಂದೂ ಪಂದ್ಯ ಗೆಲ್ಲದ ತಂಡವೆಂದರೆ ಆರ್ಸಿಬಿ ಮಾತ್ರ. ಸತತ ವೈಫಲ್ಯ ಎದುರಿಸಿದಾಗ ಟೀಕೆಗಳು ಬರುವುದು ಸಹಜ. ಆದರೆ ಧರಣೀಶ್ ಮೂರ್ತಿಯೆಂಬ ಆರ್ಸಿಬಿ ಅಭಿಮಾನಿಯೊಬ್ಬರು ಇದರಿಂದ ರೊಚ್ಚಿಗೆದ್ದಿದ್ದಾರೆ.
ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ, ಸದ್ಯ ಖ್ಯಾತ ವೀಕ್ಷಕ ವಿವರಣೆಕಾರ ಸೈಮನ್ ಡೌಲ್ಗೆ ಜೀವ ಬೆದರಿಕೆ ಒಡ್ಡಿದ್ದಾರೆ. ನೀವು ಆರ್ಸಿಬಿ ವಿರುದ್ಧ ಇದೇ ರೀತಿ ಟೀಕೆಗಳನ್ನು ಮುಂದುವರಿಸಿದರೆ, ಕೊಲೆಯಾಗುವುದು ಖಚಿತ ಎಂದಿದ್ದಾರೆ. ಫೇಸ್ಬುಕ್ ಮೆಸೆಂಜರ್ನಲ್ಲಿ ಬಂದ ಈ ಸಂದೇಶವನ್ನು ಡೌಲ್, ಟ್ವೀಟ್ ಮಾಡಿದ್ದಾರೆ.
ವೀಕ್ಷಕ ವಿವರಣೆಯಿಂದ ವಿಶ್ವಾದ್ಯಂತ ಜನಪ್ರಿಯರಾಗಿರುವ ಸೈಮನ್ ಡೌಲ್ ಸೇರಿ, ಐಪಿಎಲ್ ಸಮೂಹ ಘಟನೆಯಿಂದ ಅಚ್ಚರಿಗೊಳಗಾಗಿದೆ. ಸ್ವತಃ ಡೌಲ್ಗೂ ತಾನು ಏನು ಹೇಳಿರುವುದಕ್ಕೆ ಇಂತಹ ಬೆದರಿಕೆ ಬಂದಿದೆ ಎಂದು ಗೊತ್ತಿಲ್ಲ. ಅಲ್ಲದೇ ಧರಣೀಶ್ ಮೂರ್ತಿ ಯಾರೆನ್ನುವುದೂ ಖಚಿತವಾಗಿಲ್ಲ. ಈ ಬಗ್ಗೆ ಡೌಲ್ ಟ್ವೀಟ್ ಮಾಡಿ, ಅಭಿಮಾನಿಯನ್ನು ಸಮಾಧಾನ ಮಾಡಿದ್ದಾರೆ. ಇದು ಕೇವಲ ಐಪಿಎಲ್ ಟಿ20 ಪಂದ್ಯ ಗೆಳೆಯ, ಆರಾಮಾಗಿರಿ ಎಂದು ಹೇಳಿದ್ದಾರೆ!
ಡೌಲ್ ಪೊಲೀಸ್ ದೂರು ದಾಖಲಿಸಿದ್ದಾರಾ ಎನ್ನುವುದು ಖಚಿತವಾಗಿಲ್ಲ. ಆರ್ಸಿಬಿ ವಿರುದ್ಧ ಅವರು ನೀಡಿದ ಯಾವ ಹೇಳಿಕೆಗೆ ಧರಣೀಶ್ ಸಿಟ್ಟಾಗಿದ್ದಾರೆ ಎನ್ನುವುದೂ ಖಚಿತವಾಗಿಲ್ಲ.