ಸಂಗ್ರಹಯೋಗ್ಯ ಸಾಕ್ಷ್ಯಚಿತ್ರ , ಕಲೆಯ ಸಾಕ್ಷಾತ್ಕಾರವಲ್ಲ !
Team Udayavani, May 27, 2017, 10:57 AM IST
ಸಚಿನ್: ಎ ಬಿಲಿಯನ್ ಡ್ರೀಮ್ಸ್ ಆರಂಭದಲ್ಲೇ ಸ್ಪಷ್ಟಪಡಿಸಿಕೊಳ್ಳಿ, ಇದು ಸಿನಿಮಾ ಅಲ್ಲ ಸಾಕ್ಷ್ಯಚಿತ್ರ. ಇಲ್ಲಿ ಸಚಿನ್ ನಟಿಸಿದ್ದಾರೆಂದು ಹೇಳಲಾಗಿತ್ತು, ಅದು ತಪ್ಪು. ಇಲ್ಲಿ ಅವರು ನಿರೂಪಣೆ ಮಾಡಿದ್ದಾರಷ್ಟೇ. ಸಚಿನ್ ಎಂಬ ಶತಕೋಟಿ ಕನಸುಗಳ ಪುನರ್ ಸೃಷ್ಟಿಯಾಗಿರಬಹುದೆಂಬ ನಿರೀಕ್ಷೆ ನಿಮಗಿದ್ದರೆ ಅದನ್ನು ಈಗಲೇ ಮರೆತುಬಿಡಿ, ಇಲ್ಲಿ ಕೇವಲ ಸಚಿನ್ ಹಳೆಯ ದಿನಗಳ ಮೆಲುಕುಗಳಷ್ಟೇ ಇವೆ. ಕ್ರಿಕೆಟ್ ದೇವರ ಜೀವನದಲ್ಲಿ ಹಿಂದೆಂದೂ ಕೇಳಿರದ ಸಂಗತಿಗಳನ್ನು ನಾವಿಲ್ಲಿ ನೋಡಬಹುದೆಂಬ ಆಸೆಯಿದ್ದರೆ ಅದನ್ನೂ ಈಗಲೇ ಬಿಟ್ಟುಬಿಡಿ. ಭಾರತ ದಲ್ಲಿ ಕ್ರಿಕೆಟ್ ಅಭಿಮಾನಿಯಾಗಿರುವ ಎಲ್ಲರಿಗೂ ಗೊತ್ತಿರುವ ಸಂಗತಿಗಳನ್ನೇ ಇಲ್ಲಿ ಮತ್ತೂಮ್ಮೆ ಹೇಳಲಾಗಿದೆ. ಅಷ್ಟೇ!
ಸಚಿನ್ ಎಂಬ ಸಾಕ್ಷ್ಯಚಿತ್ರದ ಆರಂಭದಲ್ಲೇ ಒಂದು ಮಾತು ಕೇಳಿಸುತ್ತದೆ: ಸಚಿನ್ ಒಬ್ಬ ಹೀರೋ, ಮಾದರಿ ವ್ಯಕ್ತಿ ಮಾತ್ರವಲ್ಲ, ಅವರೊಂದು “ಭಾವನೆ’…ಇದನ್ನು ಕೇಳುವ ಪ್ರೇಕ್ಷಕರು “ಭಾವನೆ’ಗೊಳಗಾಗಿ ಸಚಿನ್ ಹೇಗೆ ಭಾವನಾತ್ಮಕವಾಗಿ ಭಾರತವನ್ನು ಆವರಿಸಿ ಕೊಂಡಿದ್ದಾರೆ ಅಥವಾ ಅವರು ಹೇಗೆ ಭಾರತದ “ಭಾವನೆ’ಯಾಗುತ್ತಾರೆ ಎಂಬುದನ್ನೆಲ್ಲ ಚಿತ್ರದಲ್ಲಿ ನೋಡಬಹುದು ಎಂಬ ಊಹೆ ಮಾಡಿಕೊಳ್ಳುತ್ತಾರೆ.
ಹೌದು ಅವರೊಂದು “ಭಾವನೆ’ಯೇ. ಕ್ರಿಕೆಟ್ ಎಂಬ ಕ್ರೀಡೆಯನ್ನು ಜನ ಅಪ್ಪಿಕೊಂಡಾಗ ಅದರ ಮೂಲಕ ಭಾರತೀಯರ ದೇಶಾಭಿಮಾನ ಹೊರ ಹೊಮ್ಮುತ್ತಿದ್ದಾಗ, ಪಾಕಿಸ್ಥಾನವೆಂಬ ಶತ್ರು ರಾಷ್ಟ್ರದ ವಿರುದ್ಧ ಕ್ರಿಕೆಟ್ನಲ್ಲಾದರೂ ಸೇಡು ತೀರಿಸಿಕೊಳ್ಳುವ ಹಂಬಲವಿದ್ದಾಗ ಸಚಿನ್ ಎಂಬ ವ್ಯಕ್ತಿಯ ಮೂಲಕ ಅದು ಹೊರಹೊಮ್ಮುತ್ತದೆ. ಸಚಿನ್ ಪಾಕಿಸ್ಥಾನದ ಮೇಲೆ ಸಿಕ್ಸರ್ಗಳ ಮೇಲೆ ಸಿಕ್ಸರ್ ಬಾರಿಸಿದಾಗ ಭಾರತೀಯರಿಗೆ ಪಾಕಿಸ್ಥಾನಕ್ಕೇ ಹೊಡೆದಂತೆ ಭಾಸ ವಾಗುತ್ತದೆ. ಭಾರತ ಎಲ್ಲ ಕ್ರೀಡೆಗಳಲ್ಲಿ ವಿಫಲವಾಗಿ ಸೋತು ನೆಲ ಕಚ್ಚಿದ್ದಾಗ, ವಿಜ್ಞಾನ, ತಂತ್ರಜ್ಞಾನ, ಅಭಿವೃದ್ಧಿ, ಸಾಕ್ಷರತೆ, ಆರ್ಥಿಕತೆ ಎಲ್ಲ ರಂಗಗಳಲ್ಲೂ ವಿಫಲ ರಾಷ್ಟ್ರ ಎಂಬ ಹಣೆ ಪಟ್ಟಿ ಹೊಂದಿದ್ದಾಗ ಭಾರತೀಯರ ಸಂಭ್ರಮಕ್ಕೆ ಕಾರಣವಾಗಿದ್ದು ಕ್ರಿಕೆಟ್ ಒಂದೇ. ಎದೆತಟ್ಟಿ ಹೊಗಳಬಹುದಾದ ಕ್ರೀಡಾ ದಂತ ಕತೆ ಇದ್ದಿದ್ದು ಅಲ್ಲೊಂದೇ. ಅದೇ ಕಾರಣಕ್ಕೆ ಅವರು ಇಡೀ ದೇಶದ ಅಭಿಮಾನದ ಸಂಕೇತವೂ ಆಗುತ್ತಾರೆ.
ಈ ದೇಶಾಭಿಮಾನ, ಹತಾಶೆ, ಸೋಲು, ನೋವು, ಆಕ್ರೋಶ, ಆತ್ಮತೃಪ್ತಿ, ಹಪಹಪಿ ಇವುಗಳಿಗೆಲ್ಲ ಸಚಿನ್ ಒಂದು ಸಾಂತ್ವನವಾಗಿರುತ್ತಾರೆ. ಅದನ್ನು ನಿರ್ದೇಶಕ ಜೇಮ್ಸ್ ಎರ್ಕೆನ್ ಅದ್ಭುತವಾಗಿ ಅಭಿ ವ್ಯಕ್ತಿಪಡಿಸಬಹುದಿತ್ತು ಎಂಬ “ಭಾವನೆ’ ನಮಗೂ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಎರ್ಕೆನ್ ಆಯ್ದುಕೊಂಡ ದಾರಿಯನ್ನು ನೋಡಿದಾಗ ಶತಕೋಟಿ ಕನಸುಗಳನ್ನು ಇಷ್ಟು ಸುಲಭವಾಗಿ ಕಟ್ಟುವ ಯತ್ನ ಮಾಡಬಾರದಿತ್ತು ಎಂಬ “ಭಾವನೆ’ ಬಂದರೆ ಅದನ್ನು ತಪ್ಪೆನ್ನಲಾಗದು.
ಗೊತ್ತಿದ್ದನ್ನೇ ಮತ್ತೂಮ್ಮೆ ಹೇಳಲಾಗಿದೆ!
ವಾಸ್ತವವಾಗಿ ಭಾರತದ ಕ್ರಿಕೆಟ್ ಹುಚ್ಚರಿಗೆಲ್ಲ ಈಗಾಗಲೇ ಏನು ಗೊತ್ತಿದೆಯೋ ಅದನ್ನೇ ಮತ್ತೂಮ್ಮೆ ಇಲ್ಲಿ ಹೇಳಲಾಗಿದೆ. ಹಿನ್ನೆಲೆಯಲ್ಲಿ ಸಚಿನ್ ನಿರೂಪಣೆ, ಮುನ್ನೆಲೆಯಲ್ಲಿ ಹಳೆಯ ಪಂದ್ಯಗಳ ವೀಡಿಯೋಗಳು ಒಂದಾದ ಮೇಲೊಂದರಂತೆ ಬರುತ್ತಾ ಹೋಗುತ್ತವೆ. ನಡು ನಡುವೆ ಸಚಿನ್ಗಿರುವ ಸಂಗೀತ ಪ್ರೀತಿ, ಗೆಳೆಯರೊಂದಿಗೆ, ಕುಟುಂಬದೊಂದಿಗೆ ಇರುವ ನಿಕಟತೆ, ಆತ್ಮೀಯತೆ, ಅವರಿಗೆ ಕಾರ್ ರೇಸ್ ಕುರಿತಿರುವ ಸೆಳೆತ ಇವೆಲ್ಲವನ್ನು ಹೇಳಲಾಗಿದೆ. ಇದಕ್ಕೂ ಬಳಸಲಾಗಿರುವುದು ಹಳೆಯ ವೀಡಿಯೋಗಳನ್ನು! ಆದ್ದರಿಂದಲೇ ಇಲ್ಲಿ ಸಚಿನ್ ನಟಿಸಿದ್ದಾರೆ ಎಂಬ ಮಾತು ಅರ್ಥ ಕಳೆದು ಕೊಳ್ಳುವುದು. ಆದ್ದರಿಂದಲೇ ಇದೊಂದು ಸಾಕ್ಷ್ಯಚಿತ್ರ ವಾಗುವುದು. ಸಿನಿಮಾವೊಂದರಲ್ಲಿ ಪುನರ್ಸೃಷ್ಟಿ ಯಿರುತ್ತದೆ, ಸಾಕ್ಷ್ಯಚಿತ್ರದಲ್ಲಿ ಹಳೆಯ ಸಾಕ್ಷಿಗಳ ಸಂಗ್ರಹವಿರುತ್ತದೆ. ಹಳೆಯ ವೀಡಿಯೋಗಳು ಬಳಸಲ್ಪಡುತ್ತವೆ, ಹಲವರ ಪ್ರತಿಕ್ರಿಯೆಗಳು, ಕೆಲ ವಸ್ತುಗಳ ನ್ನೆಲ್ಲ ಹಾಜರು ಮಾಡಲಾಗುತ್ತದೆ. ಈ ಸಿನಿಮಾದಲ್ಲಿ ಅದನ್ನಷ್ಟೇ ಶ್ರದ್ಧೆಯಿಂದ ಮಾಡಿರುವುದರಿಂದ….
ಎಲ್ಲವನ್ನೂ ಕೊಟ್ಟು ಎಲ್ಲವನ್ನೂ ಕಸಿಯಿತು
2007ರ ಏಕದಿನ ವಿಶ್ವಕಪ್ನಲ್ಲಿ ಭಾರತ ದ್ರಾವಿಡ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ಗೆ ತೆರಳಿತ್ತು. ಅಲ್ಲಿ ಅಪಮಾನಕಾರಿಯಾಗಿ ಸೋತು ಭಾರತಕ್ಕೆ ಮರಳಿತು. ಆಗ ಸಚಿನ್ ಮನೆ ಮುಂದೆ 150 ಕಮಾಂಡೋಗಳು ರಕ್ಷಣೆಗೆ ಜಮಾಯಿಸಿರುತ್ತಾರೆ. ಮನೆಯೊಳಗೂ ಮೂವರು ಕಮಾಂಡೋಗಳಿರುತ್ತಾರೆ. ಭಾರತದ ಸೋಲಿನಿಂದ ರೊಚ್ಚಿಗೆದ್ದಿದ್ದ ಜನತೆ ಅಷ್ಟು ಗಲಾಟೆ ಮಾಡಿರುತ್ತಾರೆ. ಆ ಹಂತದಲ್ಲಿ ಸಚಿನ್ 7 ದಿನ ಮನೆಯಿಂದ ಹೊರಹೋಗುವುದಿಲ್ಲ. ಆಗವರಿಗೆ ಅನಿಸಿದ್ದಿಷ್ಟು: “ಎಲ್ಲವನ್ನೂ ಕೊಟ್ಟ ಕ್ರಿಕೆಟ್ ತನ್ನಿಂದ ಎಲ್ಲವನ್ನೂ ಕಸಿದುಕೊಂಡಿತು’. ಆಗಲೂ ಅವರು ಕುಸಿಯುವುದಿಲ್ಲ. ವಿಶ್ವಕಪ್ ಗೆದ್ದೇ ತೀರಬೇಕು ಎಂಬ ತಮ್ಮ ಹಂಬಲಕ್ಕಾಗಿ ನಿವೃತ್ತಿ ಯೋಚನೆಯನ್ನು ಬದಿಗೊತ್ತುತ್ತಾರೆ. 2011ರಲ್ಲಿ ಸಚಿನ್ ಅದರಲ್ಲಿ ಯಶಸ್ವಿಯಾಗುತ್ತಾರೆ.
ವರ್ಷದ ಹಿಂದೆ ಧೋನಿ ಕುರಿತ ಚಿತ್ರ…
ದಿ ಅನ್ಟೋಲ್ಡ್ ಸ್ಟೋರಿ ಬಿಡುಗಡೆಯಾದಾಗ ಜನರ “ಭಾವನೆ’ಗಳು ಅದಲು ಬದಲಾಗಿದ್ದವು. ಇದೊಂದು ಸಾಕ್ಷ್ಯಚಿತ್ರವಾಗಬಹುದೆಂಬ ಆತಂಕ ದಿಂದ ಸಿನಿಮಾವನ್ನು ಹೊರತಂದು ಸತ್ಯಘಟನೆ ಗಳಿಗೆ ಮರುಜೀವ ನೀಡಿ ಕಲಾತ್ಮಕ ಸೃಷ್ಟಿಯನ್ನಾಗಿಸ ಲಾಗಿತ್ತು. ಜನರೂ ಅದನ್ನು ಅಗಾಧ ಪ್ರೀತಿಯಿಂದ ಸ್ವೀಕರಿಸಿದ್ದರು.
“ಸಚಿನ್: ಎ ಬಿಲಿಯನ್ ಡ್ರೀಮ್ಸ್’ ಸಿನೆಮಾವನ್ನೂ ಅಂಥದ್ದೇ ಬಿಲಿಯನ್ ನಿರೀಕ್ಷೆ, ನಂಬಿಕೆಗಳಿಂದ ನೋಡುವಂತಿಲ್ಲ. ಇದು ಅಭಿಮಾನಿಗಳಿಗೆ ಒಂದು ಸಂಗ್ರಹಯೋಗ್ಯ ಅತ್ಯುತ್ತಮ ಸಾಕ್ಷ್ಯಚಿತ್ರ. ಆದರೆ ಸಿನೆಮಾಪ್ರೇಮಿಗಳ ತುಡಿತವನ್ನು ತಣಿಸುವ ಕಲೆಯಲ್ಲ!
ಅದೇ ಹಳೆಯ ಚಾಪೆಲ್, ಅಜರ್ ವಿವಾದ
ಸಚಿನ್ ತಮ್ಮ ಆತ್ಮಕಥನ “ಪ್ಲೇಯಿಂಗ್ ಇಟ್ ಮೈ ವೇ’ನಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ಗೆ ನೇರವಾಗಿ ಬೈದಿದ್ದರು. ಚಾಪೆಲ್ ಭಾರತ ಕ್ರಿಕೆಟನ್ನು ಒಡೆದು ಆಳಲು ಬಯಸಿದ್ದರು ಎಂದು ಆರೋಪಿಸಿದ್ದರು. ಇಲ್ಲೂ ಅದನ್ನು ಮಾಡಲಾಗಿದೆ. ಅದಕ್ಕೂ ಹೆಚ್ಚಿನ ಒಳಗುದಿಗಳು ಇಲ್ಲಿ ದಕ್ಕುವುದಿಲ್ಲ.
ಸಚಿನ್ ತಮ್ಮ 23ನೇ ವಯಸ್ಸಿನಲ್ಲಿ ಮೊದಲ
ಬಾರಿ ನಾಯಕನಾದಾಗ ತಂಡದಲ್ಲಿ ಅಜರು ದ್ದೀನ್ ಎಂಬ ಹಿರಿಯ ಹುಲಿಯಿತ್ತು. ಸಚಿನ್ ಜನಪ್ರಿಯತೆ ಏರುತ್ತಾ ಹೋದಂತೆಲ್ಲ ಅಜರು ದ್ದೀನ್ ಅಸಹನೆಗೊಳಗಾಗುತ್ತಾರೆ, ಎರಡು ಶಕ್ತಿ ಕೇಂದ್ರಗಳು ಹುಟ್ಟಿಕೊಳ್ಳುತ್ತವೆ, ತಂಡದಲ್ಲಿ ಬಿರುಕು ತನ್ನಿಂತಾನೇ ಉದ್ಭವವಾಗುತ್ತದೆ. ಇಂಥ ಹೊತ್ತಿನಲ್ಲಿ ಅಜರ್ಗಾಗುವ ಅಸೂಯೆ ಯನ್ನು ಹಳೆಯ ವೀಡಿಯೋಗಳ ಮೂಲಕ ಪರಿಣಾಮಕಾರಿಯಾಗಿ ತೋರಿಸಲಾಗುತ್ತದೆ. ಇದು ಸಾಕ್ಷ್ಯಚಿತ್ರದಿಂದಾಗಿರುವ ಲಾಭವೆನ್ನ ಬೇಕು! ಬಹುಶಃ ಇದನ್ನು ಪುನರ್ ಸೃಷ್ಟಿ ಮಾಡಿ ದ್ದರೆ ಇಷ್ಟು ಪ್ರಭಾವ ಸಾಧ್ಯವಿರಲಿಲ್ಲ.
ಕಣ್ಣಂಚು ಮತ್ತೂಮ್ಮೆ ಒದ್ದೆಯಾಗುತ್ತೆ
ಸಚಿನ್ ಎಂಬ ಭಾರತ ರತ್ನ ನಿವೃತ್ತಿ ಯಾಗುವುದು ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಕಡೆಯ ಪಂದ್ಯವನ್ನು ಅವರು ವೆಸ್ಟ್ ಇಂಡೀಸ್ ವಿರುದ್ಧ ಆಡಿ ವಿದಾಯ ಹೇಳುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಹೊತ್ತಿನಲ್ಲಿ ಜನರ ಕಣ್ಣಿನಲ್ಲಿ ನೀರಾಡುತ್ತಿರುತ್ತದೆ. ಬಹುಶಃ ಆಗ ಅಳದ ಭಾರತದ ಕ್ರಿಕೆಟ್ ಅಭಿಮಾನಿ ಇರಲಿಕ್ಕಿಲ್ಲ. ಅದೇ ಹಳೆಯ ವೀಡಿಯೋವನ್ನು ನಿಮ್ಮೆದುರು ಮತ್ತೆ ಇಟ್ಟಾಗ ಮತ್ತೂಮ್ಮೆ ನೀವು ಭಾವುಕರಾಗುತ್ತೀರಿ, ಬಹುಶಃ ನೀವು ಅಳುತ್ತೀರಿ. ಹಿಂದೆ ಅದನ್ನು ನೇರವಾಗಿ ನೋಡಿ ಬಿಕ್ಕಿದವರೂ ಈಗ ಮತ್ತೂಮ್ಮೆ ಬಿಕ್ಕುತ್ತಾರೆ. ಅಷ್ಟರಮಟ್ಟಿಗೆ ಸಚಿನ್ ಸಾಕ್ಷ್ಯಚಿತ್ರ ಯಶಸ್ವಿಯಾಗಿದೆ!
– ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು