ಧೋನಿ ಮತ್ತೆ ಟೀಂ ಇಂಡಿಯಾದಲ್ಲಿ ಆಡುವುದು ಕಷ್ಟ: ಸೆಹ್ವಾಗ್ ಶಾಕಿಂಗ್ ಹೇಳಿಕೆ
Team Udayavani, Mar 18, 2020, 1:11 PM IST
ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಇನ್ನು ಭಾರತ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದು ನಾನು ನಂಬುವುದಿಲ್ಲ ಎಂದು ಸೆಹ್ವಾಗ್ ಹೇಳಿಕೆ ನೀಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯ ಜಾಗದಲ್ಲಿ ರಿಷಭ್ ಪಂತ್ ಮತ್ತು ಕೆ ಎಲ್ ರಾಹುಲ್ ಈಗಾಗಲೇ ಇದ್ದಾರೆ. ಅದಲ್ಲದೆ ಅವರು ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಹಾಗಾಗಿ ಧೋನಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳಿ ಬರುವುದು ಕಷ್ಟ ಎಂದು ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಆರಂಭಿಕ ಆಟಗಾರ, ತಂಡದಲ್ಲಿ ಧೋನಿಗೆ ಎಲ್ಲಿ ಜಾಗ ನೀಡುತ್ತೀರಾ? ಪಂತ್ ಮತ್ತು ಕೆ ಎಲ್ ರಾಹುಲ್ ಈಗಾಗಲೇ ತಮ್ಮ ಜಾಗ ಭದ್ರಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಮುಂದಿನ ದಿನಗಳಲ್ಲೂ ಈ ಇಬ್ಬರು ಆಟಗಾರರ ಜೊತೆಯೇ ತಂಡ ಸಾಗಬೇಕು. ಅವರನ್ನು ಕೈಬಿಡಲು ಯಾವುದೇ ಕಾರಣವಿಲ್ಲ ಎಂದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಐಪಿಎಲ್ ಪ್ರದರ್ಶನದ ದ ಆಧಾರದ ಮೇಲೆ ಮುಂದಿನ ಟಿ20 ವಿಶ್ವಕಪ್ ಗೆ ಧೋಣಿ ಆಯ್ಕೆ ಮಾಡಬಹುದು ಎಂದು ಬಿಸಿಸಿಐ ಮೂಲಗಳು ವರದಿ ಮಾಡಿದ್ದವು.