ಪುತ್ತೂರಿನ ತರಬೇತುದಾರನನ್ನು ಸತ್ಕರಿಸಿದ ಸಿಂಧು ಕುಟುಂಬ
Team Udayavani, Oct 17, 2019, 12:58 PM IST
ಪುತ್ತೂರು: ಆ ಕುಟುಂಬವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಲಕ್ಷಾಂತರ ಅಭಿಮಾನಿಗಳ ದಂಡೇ ಇದೆ. ಆದರೂ 35 ವರ್ಷಗಳ ಹಿಂದೆ ತರಬೇತಿ ನೀಡಿದ ಪುತ್ತೂರಿಗನನ್ನು ಮರೆಯದೆ ಸತ್ಕರಿಸಿ ಕ್ರೀಡಾಪ್ರೀತಿ ಮೆರೆದಿದೆ!
ಇಂತಹ ಅಪರೂಪದ ಆತಿಥ್ಯಕ್ಕೆ ಸಾಕ್ಷಿಯಾದದ್ದು ಕೇರಳದ ತಿರುವನಂತಪುರ. ಇಲ್ಲಿ ಒಲಿಪಿಂಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಅವರ ತಾಯಿ ವಿಜಯಾ ರಮಣ ಹಾಗೂ ದ.ಕ. ಜಿಲ್ಲೆಯ ಪುತ್ತೂರಿನ ಸಂಪ್ಯ ನಿವಾಸಿ, ಎನ್ಐಎಸ್ ಮಾಜಿ ತರಬೇತುದಾರ ಪಿ.ವಿ. ನಾರಾಯಣ್ 35 ವರ್ಷಗಳ ಬಳಿಕ ಪರಸ್ಪರ ಭೇಟಿಯಾದರು. ವಿಜಯಾ ವಾಲಿಬಾಲ್ ಪಟುವಾಗಿದ್ದು, 35 ವರ್ಷಗಳ ಹಿಂದೆ ನಾರಾಯಣ್ ಅವರು ವಾಲಿಬಾಲ್ ತರಬೇತಿ ನೀಡಿರುವುದೇ ಈ ಬೆಸುಗೆಗೆ ಕಾರಣ!
ಕೇರಳದಲ್ಲಿ ನಡೆದ ಭೇಟಿ
ಕೇರಳ ರಾಜ್ಯ ಒಲಿಂಪಿಕ್ ಅಸೋಸಿಯೇಶನ್ ಸಂಸ್ಥೆ ಬ್ಯಾಡ್ಮಿಂಟನ್ ಸಾಧನೆಗಾಗಿ ಸಿಂಧು ಅವರನ್ನು ಇತ್ತೀಚೆಗೆ ತಿರುವನಂತಪುರದಲ್ಲಿ ಗೌರವಿಸಿತ್ತು. ಇದನ್ನು ನಾರಾಯಣ್ ಅವರಿಗೆ ತಾಯಿ ವಿಜಯಾ ರಮಣ ತಿಳಿಸಿದ್ದರು.
ತರಬೇತಿ ನೀಡಿ ಊರಿಗೆ ಮರಳಿದ 35 ವರ್ಷದ ಬಳಿಕ ಪಿ.ವಿ. ನಾರಾಯಣ್ ಹಾಗೂ ಪಿ.ವಿ.ಸಿಂಧು ಕುಟುಂಬ ಭೇಟಿಯಾಗಿದೆ. “ಕೇರಳಕ್ಕೆ ಬರುವ ವಿಚಾರವನ್ನು ವಿಜಯಾ ರಮಣ ತಿಳಿಸಿದ್ದರು. ಅಲ್ಲಿ 35 ವರ್ಷಗಳ ಹಿಂದಿನ ದಿನಗಳ ನೆನಪುಗಳನ್ನು ಹಂಚಿಕೊಂಡೆವು. ಒಂದು ದಿನ ಉಳಿದುಕೊಂಡಿದ್ದ ಸಿಂಧು ಕುಟುಂಬದವ ರೊಂದಿಗೆ ರಾತ್ರಿ ಸಿಹಿ ಭೋಜನ ಸವಿದೆ’ ಎಂದು ನಾರಾಯಣ್ ಆತಿಥ್ಯವನ್ನು ಸ್ಮರಿಸಿಕೊಂಡರು.
“ಅ. 8ರ ರಾತ್ರಿ ತಿರುವನಂತಪುರ ಹೊಟೇಲ್ ನಲ್ಲಿ ಅವರ ಕೋರಿಕೆಯಂತೆ ವಿಶೇಷ ಭೋಜನದ ಆತಿಥ್ಯ ಸ್ವೀಕರಿಸಿದೆ. ಜತೆಗೆ ಸಿಂಧು ಅವರ ಭವಿಷ್ಯದ ಬಗ್ಗೆಯೂ ಮಾತಾಡಿದರು. ಮರುದಿನ ತಿರುವನಂತಪುರ ಪದ್ಮನಾಭಸ್ವಾಮಿ ಹಾಗೂ ಅಟ್ಟುಕಲ್ ದೇವಾಲಯಕ್ಕೆ ಭೇಟಿ ನೀಡಿದೆವು. ಅನಂತರ ಸಿಂಧು ತಿರುವನಂತಪುರ ಸಮಾರಂಭದಲ್ಲಿ ಪಾಲ್ಗೊಂಡು, ಸಂಜೆ 7 ಗಂಟೆಗೆ ಚೆನ್ನೈಗೆ ತೆರಳಿದರು. ಮುಂದಿನ ಒಲಿಂಪಿಕ್ಸ್ ಬಳಿಕ ಕುಟುಂಬ ಸಮೇತ ಪುತ್ತೂರಿಗೆ ಬರುವುದಾಗಿ ವಿಜಯಾ ರಮಣ ಹೇಳಿದ್ದಾರೆ’ ಎಂದು ಪಿ.ವಿ. ನಾರಾಯಣ್ ಈ ಭೇಟಿಯನ್ನು ವಿವರಿಸಿದರು.
ಸಿಂಧು ಕುಟುಂಬದ ಜತೆ ನಂಟು
ಮೂಲತಃ ಕೇರಳದವರಾದ ಪಿ.ವಿ. ನಾರಾಯಣ್ 1981ರಲ್ಲಿ ತಮಿಳುನಾಡಿನ ವಾಲಿಬಾಲ್ ತರಬೇತುದಾರರಾಗಿದ್ದರು. 1981-84ರಲ್ಲಿ ಚೆನ್ನೈನ ಕ್ರೊಂಪೆಟ್ ವೈಷ್ಣವ ಕಾಲೇಜಿನಲ್ಲಿ ಸಿಂಧು ಅವರ ತಾಯಿ ವಿಜಯಾ ರಮಣ ವ್ಯಾಸಂಗ ಮಾಡುತ್ತಿದ್ದರು. ಆಗ ರಾಜ್ಯ ಮಟ್ಟದ ವಾಲಿಬಾಲ್ ಕ್ಯಾಂಪ್ಗೆ ಆಯ್ಕೆಗೊಂಡಿದ್ದರು. ಆಗ ನಾರಾಯಣ್ ಈ ತಂಡಕ್ಕೆ ತರಬೇತಿ ನೀಡಿದ್ದರು. ಇವರ ತರಬೇತಿಯಡಿ ವಿಜಯಾ ಅವರು ಯೂತ್, ಸೀನಿಯರ್, ವಿ.ವಿ. ಮಟ್ಟದಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು. ಅನಂತರ ತರಬೇತಿ ಕೆಲಸ ಬಿಟ್ಟುಬಂದ ನಾರಾಯಣ್ ಅವರು ವಿಜಯಾ ರಮಣ ಕುಟುಂಬದ ಜತೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದರು. ನಾರಾಯಣ್ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಬೀಚ್ ವಾಲಿಬಾಲ್ ತಾಂತ್ರಿಕ ಸಂಸ್ಥೆಯ ಸದಸ್ಯರಾಗಿದ್ದರು. ಪ್ರತಿ ವರ್ಷ ಪುತ್ತೂರಿನಲ್ಲಿ ಮಿತ್ರವೃಂದ ವಾಲಿಬಾಲ್ ಅಕಾಡೆಮಿ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ವಾಲಿಬಾಲ್ ತರಬೇತಿ ನೀಡುತ್ತಿದ್ದಾರೆ.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ