ಚೌಹಾಣ್ಗೆ ಎರಡು ಸಲ ಸೆಂಚುರಿ ತಪ್ಪಿಸಿದ್ದ ಗಾವಸ್ಕರ್!
Team Udayavani, Aug 17, 2020, 9:02 PM IST
ಮುಂಬಯಿ: ಚೇತನ್ ಚೌಹಾಣ್ ಅವರನ್ನು ಅತ್ಯಂತ ಹತ್ತಿರದಿಂದ ಕಂಡವರು, ಅವರ ದೀರ್ಘ ಕಾಲ ಒಡನಾಡಿಯಾಗಿ ಎಲ್ಲವನ್ನೂ ಬಲ್ಲವರೆಂದರೆ ಸುನೀಲ್ ಗಾವಸ್ಕರ್. ಒಂದೆಡೆ ಗಾವಸ್ಕರ್ ಶತಕಗಳ ರಾಶಿ ಪೇರಿಸುತ್ತಿದ್ದರೆ, ಇನ್ನೊಂದೆಡೆ ಚೌಹಾಣ್ ಮೂರಂಕೆಯ ಗಡಿ ತಲುಪಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಕೊನೆಗೂ ಸೆಂಚುರಿ ಕಾಣದೆ ಅವರು ಟೆಸ್ಟ್ ಬದುಕನ್ನು ಮುಗಿಸಬೇಕಾದುದೊಂದು ದುರಂತವೇ ಆಗಿದೆ. ಚೇತನ್ ಚೌಹಾಣ್ ಅವರ ಅಗಲಿಕೆಯ ಸಂದರ್ಭದಲ್ಲಿ ಗಾವಸ್ಕರ್ ಇದನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ತಾನು ಎರಡು ಸಲ ಶತಕ ತಪ್ಪಿಸಿದ್ದೆ ಎಂಬುದಾಗಿ ಹೇಳಿದ್ದಾರೆ.
ಮುಳುವಾದ ಮೂಢನಂಬಿಕೆ
ಸಾಮಾನ್ಯವಾಗಿ ಆಟಗಾರನೊಬ್ಬ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾಗ ಗಾವಸ್ಕರ್ ಕ್ರೀಡಾಂಗಣದ ಬಾಲ್ಕನಿಗೆ ಹೋಗಿ ವೀಕ್ಷಿಸುವುದಿಲ್ಲ. ಆಗ ಆತ ಔಟಾಗುತ್ತಾನೆ ಎಂಬ ಮೂಢನಂಬಿಕೆಯೊಂದು ಅವರಲ್ಲಿತ್ತು. ಹೀಗಾಗಿ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಟಿವಿಯಲ್ಲಿ ಪಂದ್ಯ ನೋಡುತ್ತಿದ್ದರು. ಆಟಗಾರ ಸಾಧನೆಗೈದ ಬಳಿಕ ಬಾಲ್ಕನಿಗೆ ಬಂದು ಅಭಿನಂದಿಸುತ್ತಿದ್ದರು.
ಆಸ್ಟ್ರೇಲಿಯ ವಿರುದ್ಧದ 1981ರ ಅಡಿಲೇಡ್ ಟೆಸ್ಟ್ನಲ್ಲಿ ಚೇತನ್ ಚೌಹಾಣ್ ಅಮೋಘ ಪ್ರದರ್ಶನ ನೀಡುತ್ತಿದ್ದರು. ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದರು. ಆಗ ಸಹ ಆಟಗಾರರೆಲ್ಲ ಗಾವಸ್ಕರ್ ಅವರನ್ನು ಒತ್ತಾಯಿಸಿ ಬಾಲ್ಕನಿಗೆ ಕರೆ ತಂದರು. ಅಷ್ಟೇ, ಡೆನ್ನಿಸ್ ಲಿಲ್ಲಿ ಅವರ ಓವರಿನ ಮೊದಲ ಎಸೆತವನ್ನೇ ಕೀಪರ್ ರಾಡ್ನಿ ಮಾರ್ಷ್ಗೆ ಕ್ಯಾಚ್ ನೀಡಿದ ಚೌಹಾಣ್ 97 ರನ್ನಿಗೆ ಔಟ್! ತನ್ನಿಂದಾಗಿ ಚೌಹಾಣ್ಗೆ ಶತಕ ತಪ್ಪಿತಲ್ಲ ಎಂದು ಬಹಳ ಪಶ್ಚಾತ್ತಾಪ ಅನುಭವಿಸಿದ್ದೆ ಎಂದಿದ್ದಾರೆ ಗಾವಸ್ಕರ್. ಈ 97 ರನ್ನೇ ಟೆಸ್ಟ್ನಲ್ಲಿ ಚೌಹಾಣ್ ಅವರ ಗರಿಷ್ಠ ಗಳಿಕೆಯಾಗಿದೆ.
“ಆದರೆ ಕಾನ್ಪುರದಲ್ಲಿ ಅಜರುದ್ದೀನ್ ಹ್ಯಾಟ್ರಿಕ್ ಶತಕದ ಹಾದಿಯಲ್ಲಿದ್ದಾಗ ನಾನು ಈ ತಪ್ಪು ಮಾಡಲಿಲ್ಲ. ಅವರು ಈ ಸಾಧನೆಗೈದು ಬಹಳ ಹೊತ್ತಿನ ಬಳಿಕ ಡ್ರೆಸ್ಸಿಂಗ್ ರೂಮ್ನಿಂದ ಹೊರಬಂದು ಅಭಿನಂದಿಸಿದೆ’ ಎಂಬುದಾಗಿ ಗಾವಸ್ಕರ್ ಹೇಳಿದರು. ಆಗ ಮಾಧ್ಯಮ ಮಿತ್ರರು ತನ್ನ ಗೈರನ್ನು ದೊಡ್ಡದಾಗಿ ಬಿಂಬಿಸಿದ್ದರು ಎಂದೂ ಗಾವಸ್ಕರ್ ನೆನಪಿಸಿಕೊಂಡರು!
ಅದೊಂದು ವಿವಾದವಾಗಿತ್ತು…
1981ರ ಸರಣಿಯ ಮುಂದಿನ ಮೆಲ್ಬರ್ನ್ ಪಂದ್ಯದಲ್ಲೂ ಚೌಹಾಣ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ ವಿಕೆಟಿಗೆ 165 ರನ್ ಒಟ್ಟುಗೂಡಿದಾಗ ವಿವಾದವೊಂದು ಘಟಿಸಿತು. ಲಿಲ್ಲಿ ಎಸೆತಕ್ಕೆ ನೀಡಿದ ಲೆಗ್ ಬಿಫೋರ್ ತೀರ್ಪನ್ನು ವಿರೋಧಿಸಿ ಜತೆಗಾರ ಚೌಹಾಣ್ ಅವರನ್ನು ಕರೆದುಕೊಂಡ ಗಾವಸ್ಕರ್ ಪೆವಿಲಿಯನ್ನತ್ತ ನಡೆದರು. ಆಗ ಚೌಹಾಣ್ 85 ರನ್ ಮಾಡಿದ್ದರು. ಆಟ ಪುನರಾರಂಭವಾದಾಗ ಮಾನಸಿಕವಾಗಿ ಕುಗ್ಗಿದ್ದ ಚೌಹಾಣ್ ಇದೇ ಮೊತ್ತಕ್ಕೆ ಔಟಾಗಿದ್ದರು. ಅವರಿಗೆ ತನ್ನಿಂದಾಗಿ ಸತತ 2 ಶತಕ ತಪ್ಪಿತು ಎಂದರು ಗಾವಸ್ಕರ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ