ಧೋನಿಯನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ: ಬಿಸಿಸಿಐ
Team Udayavani, Aug 30, 2019, 9:50 PM IST
ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸೆ. 15ರಿಂದ ನಡೆಯಲಿರುವ ಟಿ20 ಸರಣಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ಧೋನಿ ಅವರನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಸುದ್ದಿಯನ್ನು ಬಿಸಿಸಿಐ ತಳ್ಳಿಹಾಕಿದೆ.
“ಧೋನಿ ಅವರನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಮುಂಬರುವ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಸ್ವತಃ ಧೋನಿ ಅವರೇ ನಮಗೆ ಕಾರ್ಯ ಯೋಜನೆ ರೂಪಿಸಲು ಕಾಲಾವಕಾಶ ನೀಡಿದ್ದಾರೆ’ ಎಂದು ಬಿಸಿಸಿಐ ಆಯ್ಕೆ ಸಮಿತಿ ಮೂಲಗಳು ಸ್ಪಷ್ಟಪಡಿಸಿವೆ.
ಕೆಲವು ತಿಂಗಳುಗಳಿಂದ ಧೋನಿ ನಿವೃತ್ತಿ ವಿಚಾರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇದೆ. ಏಕದಿನ ವಿಶ್ವಕಪ್ ಮುಗಿದ ಬಳಿಕ ಧೋನಿ ನಿವೃತ್ತಿ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯ ಧೋನಿ ವಿಶ್ರಾಂತಿಯಲ್ಲಿದ್ದಾರೆ. 15 ದಿನಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಬಳಿಕ ಈಗ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ.