ಟಿ20 ಸರಣಿ ಗೆದ್ದ ಭಾರತಕ್ಕೆ ಕ್ಲೀನ್ಸ್ವೀಪ್ ಕನಸು
ಇಂದು ಭಾರತ-ವಿಂಡೀಸ್ ಅಂತಿಮ ಪಂದ್ಯ ;ಅಮೆರಿಕದ ಬಳಿಕ ಕೆರಿಬಿಯನ್ ನಾಡಿನಲ್ಲಿ ಫೈಟ್
Team Udayavani, Aug 6, 2019, 5:00 AM IST
ಪ್ರೊವಿಡೆನ್ಸ್ (ಗಯಾನಾ): ಅಮೆರಿಕದಲ್ಲಿ ಆಡಲಾದ ಸತತ ಎರಡೂ ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸನ್ನು ಮಣಿಸಿ ಸರಣಿ ವಶಪಡಿಸಿಕೊಂಡ ಖುಷಿಯಲ್ಲಿರುವ ಭಾರತವೀಗ ಕ್ಲೀನ್ಸ್ವೀಪ್ ಕನಸಿನಲ್ಲಿ ವಿಹರಿಸುತ್ತಿದೆ. ಸರಣಿಯ ಕೊನೆಯ ಪಂದ್ಯ ಕೆರಿಬಿಯನ್ ದ್ವೀಪದ ಪ್ರೊವಿಡೆನ್ಸ್ನಲ್ಲಿ ಮಂಗಳವಾರ ನಡೆಯಲಿದ್ದು, ಇದು ವಿಂಡೀಸ್ ಪಾಲಿಗೆ ತವರು ಪಂದ್ಯವಾಗಿದೆ.
ರವಿವಾರ ಮಳೆಯಿಂದ ಅಡಚಣೆಗೊಳಗಾದ ಪಂದ್ಯವನ್ನು ಡಿ-ಎಲ್ ನಿಯಮದಂತೆ ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಪಡೆ, ಸರಣಿ ಮೇಲೆ ಹಕ್ಕು ಚಲಾಯಿಸಿತ್ತು. ಹೀಗಾಗಿ ಕೆರಿಬಿಯನ್ನರ ಪಾಲಿಗೆ ಇದು ಪ್ರತಿಷ್ಠೆಯ ಕದನ. ಕೊನೆಯ ಪಂದ್ಯವನ್ನಾದರೂ ಗೆದ್ದು ಅಷ್ಟರ ಮಟ್ಟಿಗೆ ಮರ್ಯಾದೆ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಆಗ ಮುಂಬರುವ ಏಕದಿನ ಹಾಗೂ ಟೆಸ್ಟ್ ಸರಣಿಗೆ ವಿಂಡೀಸ್ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಸಜ್ಜಾಗಬಹುದು.
ಭಾರೀ ಬದಲಾವಣೆಯ ಸೂಚನೆ
ಈಗಾಗಲೇ ಸರಣಿ ಗೆದ್ದ ಖುಷಿಯಲ್ಲಿರು ವುದರಿಂದ ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸೂಚನೆಯನ್ನು ಕೊಹ್ಲಿ ನೀಡಿದ್ದಾರೆ. “ಗೆಲುವಿಗೇ ನಮ್ಮ ಮೊದಲ ಆದ್ಯತೆ. ಆದರೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕೆಲ ಬದಲಾವಣೆ ಮಾಡಬೇಕಿದೆ’ ಎಂದಿದ್ದಾರೆ.
ಈ ಸರಣಿಯಲ್ಲಿ ಈವರೆಗೆ ಅವಕಾಶ ಪಡೆಯದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್, ಚಹರ್ ಬ್ರದರ್ ಆಡುವ ಬಳಗದಲ್ಲಿ ಸ್ಥಾನ ಸಂಪಾದಿಸುವ ಸಾಧ್ಯತೆ ಇದೆ. ಆಗ ಮನೀಷ್ ಪಾಂಡೆ, ಆಲ್ರೌಂಡರ್ ಜಡೇಜ ಹೊರಗುಳಿಯಬಹುದು. ಸೈನಿಗೂ ರೆಸ್ಟ್ ಕೊಡುವ ಯೋಜನೆ ಇದೆ.
ಪಂತ್ ಬದಲು ರಾಹುಲ್ ಆಯ್ಕೆ ಆಗಬಹುದು. ಪಂತ್ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು (0, 4 ರನ್). ಆಗ ರಾಹುಲ್ ಕೀಪಿಂಗ್ ನಡೆಸಲಿದ್ದಾರೆ. ಆದರೆ ಕೊಹ್ಲಿ ಮಾತ್ರ ಪಂತ್ ಪರ ಬ್ಯಾಟಿಂಗ್ ನಡೆಸಿದ್ದಾರೆ. ಪಂತ್ಗೆ ಇನ್ನೂ ಒಂದು ಅವಕಾಶ ನೀಡುವುದು ಅವರ ಲೆಕ್ಕಾಚಾರ. ಆಗ ಧವನ್ಗೆ ವಿಶ್ರಾಂತಿ ನೀಡಿ ರಾಹುಲ್ಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ನೀಡಬಹುದು.
ವಿಂಡೀಸ್ ಬಲಿಷ್ಠ ಪಡೆ
ಟಿ20 ವಿಶ್ವ ಚಾಂಪಿಯನ್ ಖ್ಯಾತಿಯ ವೆಸ್ಟ್ ಇಂಡೀಸ್ ಕೂಡ ಬಲಾಡ್ಯ ತಂಡ. ಪೊಲಾರ್ಡ್, ಬ್ರಾತ್ವೇಟ್, ಹೆಟ್ಮೈರ್, ಪೂರನ್, ಪೊವೆಲ್ ಅವರಂಥ ಬಿಗ್ ಹಿಟ್ಟರ್ಗಳು ಇಲ್ಲಿದ್ದಾರೆ.