ಯಡಿಯೂರಪ್ಪ ನಂತರ ನಾನೇ ಸಿಎಂ: ಉಮೇಶ ಕತ್ತಿ
Team Udayavani, Oct 27, 2019, 3:00 AM IST
ಹುಬ್ಬಳ್ಳಿ: ಉಪ ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆಯಲ್ಲ. ಹೀಗಾಗಿ, ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಮುಂದೆ ಆಗುವ ಬದಲಾವಣೆ ನಂತರ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಮಾಜಿ ಸಚಿವ ಉಮೇಶ ಕತ್ತಿ ತಿಳಿಸಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಬದಲಾವಣೆಗಳು ಆಗುವುದು ಸಾಮಾನ್ಯ. ಯಡಿಯೂರಪ್ಪನವರು ನನ್ನ ಗುರುಗಳು. ಅವರ ನಂತರ ನಾನೇ ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ’ ಎಂದರು. “ಎಂಟು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ನಾನು ರಾಜಕಾರಣದಲ್ಲಿ ಏಕಾಂಗಿಯಲ್ಲ. ನನ್ನೊಂದಿಗೂ ಸಾಕಷ್ಟು ಜನ ಇದ್ದಾರೆ’ ಎಂದರು.
ನನ್ನ-ಸವದಿ ನಡುವೆ ಗೊಂದಲ ಇಲ್ಲ: “ಲಕ್ಷ್ಮಣ ಸವದಿ ನನ್ನ ಮಿತ್ರ. ಅವರ ಮತ್ತು ನನ್ನ ನಡುವೆ ಯಾವುದೇ ಗೊಂದಲಗಳಿಲ್ಲ. ಅನರ್ಹ ಶಾಸಕರ ವಿಚಾರದಲ್ಲಿ ಈ ರೀತಿ ಮಾತನಾಡಿರುವುದು ಸರಿಯಲ್ಲ. ಈ ಕುರಿತು ಆಗಲೇ ಸವದಿ ಅವರೊಂದಿಗೆ ಮಾತನಾಡಿದ್ದೇನೆ. ನಾವು ಅಧಿಕಾರಕ್ಕೆ ಬಂದಿರುವುದು ಅನರ್ಹ ಶಾಸಕರಿಂದ ಎಂಬುದನ್ನು ಯಾರೂ ಮರೆಯಬಾರದು’ ಎಂದರು.